ಕೊರೊನಾ ವೈರಸ್ ನಿಂದ ಸಾವು: ಮೃತದೇಹಗಳ ನಿರ್ವಹಣೆಗೂ ಮಾರ್ಗಸೂಚಿ
ನವದೆಹಲಿ, ಮಾರ್ಚ್.19: ಕೊರೊನಾ ವೈರಸ್ ಅಂದರೆ ಜನರು ಕನಸಿನಲ್ಲೂ ಬೆಚ್ಚಿ ಬೀಳುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾದಲ್ಲಿ ಕಾಣಿಸಿಕೊಂಡ ಮಾರಕ ಸೋಂಕು ವಿಶ್ವಕ್ಕೆ ಮಹಾಮಾರಿಯಂತೆ ಕಾಡುತ್ತಿದೆ. ಜನರನ್ನು ಸೋಂಕಿತನಿಂದ ಕಾಪಾಡಬೇಕು, ಸೋಂಕು ಹರಡುವಿಕೆಗೆ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಸಾಕಷ್ಟು ನಿಯಮಗಳನ್ನು ಜಾರಿಗೊಳಿಸಿದೆ.
ಭಾರತದಲ್ಲಿ ಸಂಸ್ಕೃತಿ ಪ್ರಕಾರ ಮೃತಪಟ್ಟವರ ಅಂತಿಮ ದರ್ಶನವನ್ನು ಸಂಬಂಧಿಕರು, ಸ್ನೇಹಿತರು, ಸಹಪಾಟಿಗಳೆಲ್ಲ ಪಡೆಯುತ್ತಿದ್ದರು. ಕೊರೊನಾ ವೈರಸ್ ನಿಂದ ಇದಕ್ಕೆಲ್ಲ ಬ್ರೇಕ್ ಬಿದ್ದಿದೆ. ಮಾರಕ ಸೋಂಕಿಗೆ ಬಲಿಯಾದ ವ್ಯಕ್ತಿಗಳ ಮೃತದೇಹವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಸರ್ಕಾರವೇ ಮಾರ್ಗಸೂಚಿಯನ್ನು ಹೊರಡಿಸಿದೆ.
ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕೇಳಿದರೆ ಅಚ್ಚರಿ!
ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ(WHO)ಯು ಸಾಂಕ್ರಾಮಿಕ ಪಿಡುಗುಗಳ ಹರಡುವಿಕೆ ನಿಯಂತ್ರಣಕ್ಕೆ ಹಲವು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಕೊರೊನಾ ವೈರಸ್ ಸೋಂಕು ಹರಡದಂತೆ ನಿಯಂತ್ರಿಸಲು ಅದೇ ಮಾರ್ಗಸೂಚಿಗಳನ್ನು ಪಾಲಿಸುವಂತೆ ಭಾರತೀಯ ಸರ್ಕಾರವೂ ಕೂಡಾ ಶಿಫಾರಸ್ಸು ಮಾಡಿದೆ. ಇನ್ನು, ಈ ಮಾರ್ಗಸೂಚಿಯಲ್ಲಿ ಇರುವ ಅಂಶಗಳು ಏನು ಎಂಬುದರ ಕುರಿತು ಒಂದು ವರದಿ ಇಲ್ಲಿದೆ.
ಮೃತದೇಹವನ್ನು ಯಾರೂ ಕೂಡಾ ಮುಟ್ಟುವಂತಿಲ್ಲ
ಕೊರೊನಾ ವೈರಸ್ ನಿಂದ ವ್ಯಕ್ತಿ ಸಾವನ್ನಪ್ಪಿದ್ದರೆ ಅಂತಿಮ ದರ್ಶನ ಪಡೆಯಲು ಅವಕಾಶವಿದೆಯೇ ವಿನಃ ನೇರವಾಗಿ ಯಾರೂ ಮೃತದೇಹವನ್ನು ಮುಟ್ಟುವಂತಿಲ್ಲ, ಅಪ್ಪಿಕೊಳ್ಳುವಂತಿಲ್ಲ, ಭಾವುಕರಾಗಿ ಮುತ್ತಿಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಾರ್ಗಸೂಚಿಯಲ್ಲಿ ತಿಳಿಸಿದೆ. ಇದರ ಜೊತೆಗೆ ಮಾರಕ ಸೋಂಕಿನಿಂದ ಪ್ರಾಣ ಬಿಟ್ಟವರ ಮೃತದೇಹದ ಶವಪರೀಕ್ಷೆಗೂ ಅವಕಾಶ ಇರುವುದಿಲ್ಲ. ಸೋಂಕು ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮವನ್ನು ಜಾರಿಗೊಳಿಸಲಾಗಿದೆ.
ಅಂತ್ಯಕ್ರಿಯೆ ಸಂದರ್ಭದಲ್ಲಿ ಹೆಚ್ಚು ಜನರು ಸೇರುವಂತಿಲ್ಲ
ಮಾರಕ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿ ವ್ಯಕ್ತಿಯ ಅಂತ್ಯಕ್ರಿಯೆ ಸಂದರ್ಭದಲ್ಲಿ ಹೆಚ್ಚು ಜನರು ಸೇರುವಂತಿಲ್ಲ. ಮೃತನ ಸಂಬಂಧಿಕರಿಗೂ ಸೋಂಕು ಹರಡಿರುವ ಸಾಧ್ಯತೆಗಳಿದ್ದು ಅಂತರ ಕಾಯ್ದುಕೊಳ್ಳಬೇಕು. ಶವಸಂಸ್ಕಾರದ ಬಳಿಕ ಮೃತರ ಸಂಬಂಧಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.
ಮೃತದೇಹದ ಸಂಸ್ಕಾರದ ವೇಳೆ ಎಚ್ಚರಿಕೆ ವಹಿಸಲು ಸೂಚನೆ
ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟ ವ್ಯಕ್ತಿಯ ಮೃತದೇಹದಲ್ಲಿ ರೋಗಾಣು ಎಷ್ಟು ಗಂಟೆಗಳ ಕಾಲ ಜೀವಿಸಿರುತ್ತದೆ ಎಂಬುದರ ಬಗ್ಗೆ ಇದುವರೆಗೂ ತಿಳಿದು ಬಂದಿಲ್ಲ. ಅಲ್ಲದೇ ಮೃತದೇಹದಿಂದಲೂ ಸೋಂಕು ಹರಡುವ ಆಪಾಯ ಇದ್ದೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಸೂಕ್ತ ರೀತಿಯಲ್ಲಿ ಎಚ್ಚರಿಕೆ ವಹಿಸಿ ಮೃತದೇಹದ ಅಂತ್ಯಸಂಸ್ಕಾರವನ್ನು ನೆರವೇರಿಸುವಂತೆ ಸೂಚಿಸಲಾಗಿದೆ.
ಅಂತ್ಯಕ್ರಿಯೆಗೂ ಮೊದಲು ಒಂದು ಬಾರಿ ದರ್ಶನಕ್ಕೆ ಅವಕಾಶ
ಇನ್ನು, ಮೃತದೇಹವನ್ನು ಮುಚ್ಚಿದ ಕಪಾಟಿನಂತಾ ಬ್ಯಾಗ್ ನಲ್ಲಿ ಇರಿಸಿ ತೆಗೆದುಕೊಂಡು ಹೋಗಲಾಗುತ್ತದೆ. ಅಂತ್ಯಕ್ರಿಯೆಗೂ ಮೊದಲು ಸಿಬ್ಬಂದಿಯು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಾಗುತ್ತದೆ. ಇದರ ಜೊತೆಗೆ ಶವಸಂಸ್ಕಾರಕ್ಕೂ ಮೊದಲು ಸಂಬಂಧಿಕರಿಗೆ ಒಂದು ಬಾರಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಧರ್ಮದ ಆಚರಣೆಗಳಿಗೆ ಅನುಗುಣವಾಗಿ ಅಂತ್ಯಕ್ರಿಯೆ
ಕೊರೊನಾ ವೈರಸ್ ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಆಯಾ ಧರ್ಮದ ಆಚರಣೆಗೆ ಅನುಗುಣವಾಗಿ ನೆರವೇರಿಸಲಾಗುತ್ತದೆ. ಮಂತ್ರಘೋಷ ಓದುವುದು, ಪವಿತ್ರ ಜಲ ಸಿಂಪಡನೆಗೆ ಅವಕಾಶ ನೀಡಲಾಗುತ್ತದೆ. ಆದರೆ, ಮೃತದೇಹವನ್ನು ಶುದ್ಧಗೊಳಿಸುವುದು, ನೀರಿನಲ್ಲಿ ತೊಳೆಯುವುದು ಹೀಗೆ ಶರೀರವನ್ನು ಮುಟ್ಟುವಂತಾ ಯಾವುದೇ ಆಚರಣೆಗೆ ಅನುಮತಿ ನೀಡಲಾಗುವುದಿಲ್ಲ.
ಮಾರಕ ಸೋಂಕು ಹರಡದಂತೆ ತಡೆಗಟ್ಟಲು ಕ್ರಮ
ದೇಶದಲ್ಲಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟವರ ಕುರಿತು ಮಾಹಿತಿಯನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಮೃತದೇಹವನ್ನು ಸುರಕ್ಷಿತ ರೀತಿಯಲ್ಲಿ ಅಂತ್ಯಕ್ರಿಯೆ ನೆರವೇರಿಸುವುದು ಮತ್ತು ವಿಲೇವಾರಿ ಮಾಡುವ ಬಗ್ಗೆ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಇದರಿಂದ ಸೋಂಕು ಹರಡುವುದಕ್ಕೆ ಕಡಿವಾಣ ಹಾಕಲು ಸಹಾಯವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ ವಾಲ್ ತಿಳಿಸಿದ್ದಾರೆ.