ಭಾರತದಲ್ಲಿ ಮಹಾನಗರ, ನಗರಗಳಿಂದ ಹಳ್ಳಿಗಳಿಗೆ ಹರಡಿದ ಕೊರೊನಾವೈರಸ್!
ನವದೆಹಲಿ, ಜನವರಿ 14: ಕೊರೊನಾವೈರಸ್ ಸೋಂಕಿನ ಎಲ್ಲ ರೂಪಾಂತರಗಳ ರೀತಿಯಲ್ಲೇ ಓಮಿಕ್ರಾನ್ ರೂಪಾಂತರಿಯು ಮೊದಲು ನಗರ ಮತ್ತು ಮಹಾನಗರ ಪ್ರದೇಶಗಳಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ವರದಿ ಆಗುವುದಕ್ಕೆ ಕಾರಣವಾಯಿತು. ಇದರ ಬೆನ್ನಲ್ಲೇ ಇದೀಗ ಗ್ರಾಮೀಣ ಪ್ರದೇಶಗಳಲ್ಲೂ ಕೊವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.
2022ರ ವರ್ಷದ ಆರಂಭದಲ್ಲಿ ವರದಿ ಆಗುತ್ತಿದ್ದ ಕೊರೊನಾವೈರಸ್ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶೇ.50ರಷ್ಟು ಪ್ರಕರಣಗಳು ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ರೀತಿಯ ಮಹಾನಗರಗಳಲ್ಲಿ ಪತ್ತೆ ಆಗುತ್ತಿದ್ದವು. ಆದರೆ ಕಳೆದ ಬುಧವಾರ ಹೊಸ ಕೊವಿಡ್-19 ಪ್ರಕರಣಗಳಲ್ಲಿ ಮಹಾನಗರಗಳ ಪಾಲು ಶೇ.50 ರಿಂದ ಶೇ.35ಕ್ಕೆ ಇಳಿಕೆಯಾಗಿದೆ. ಅಂದರೆ ಗ್ರಾಮೀಣ ಪ್ರದೇಶಗಳಲ್ಲೂ ಸೋಂಕಿತ ಪ್ರಕರಣಗಳ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆ ಆಗುತ್ತಿದೆ.
ಕೊರೊನಾವೈರಸ್ ಲಸಿಕೆ ಪಡೆಯದಿದ್ದರೆ ಓಮಿಕ್ರಾನ್ ರೂಪಾಂತರಿ ಅಪಾಯಕಾರಿ: WHO
ಜನವರಿ ತಿಂಗಳ ಆರಂಭದಲ್ಲಿ ಒಟ್ಟು ಕೊವಿಡ್-19 ಹೊಸ ಪ್ರಕರಣಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವರದಿಯಾದ ಪ್ರಕರಣಗಳ ಪಾಲು ಶೇ.6ರಷ್ಟಿತ್ತು. ಬುಧವಾರದ ವೇಳೆಗೆ ಗ್ರಾಮೀಣ ಪ್ರದೇಶಗಳಲ್ಲಿ ವರದಿಯಾಗುವ ಒಟ್ಟು ಕೊರೊನಾವೈರಸ್ ಪ್ರಕರಣಗಳ ಪಾಲು ಶೇ.12ರಷ್ಟಾಗಿದೆ. ಅದೇ ರೀತಿ ಈ ಹಿಂದೆ ಅರೆ-ಗ್ರಾಮೀಣ ಪ್ರದೇಶಗಳಲ್ಲಿ ಶೇ.15ರಷ್ಟಿದ್ದ ಕೊವಿಡ್-19 ಪ್ರಕರಣಗಳ ಪಾಲು ಶೇ.25ರಷ್ಟು ಹೆಚ್ಚಳವಾಗಿದೆ.
ಶೇ.266ರಷ್ಟು ಕೊವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಳ
2022ರ ಜನವರಿ ತಿಂಗಳ ಆರಂಭದ ಐದು ದಿನಗಳಲ್ಲಿ ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 58,000 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದವು. ಆದರೆ ಕಳೆದ ಐದು ದಿನಗಳಲ್ಲಿ ಈ ಸಂಖ್ಯೆಯು 2.12 ಲಕ್ಷದ ಗಡಿ ದಾಟಿದ್ದು, ಶೇ.266ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು 1.80 ಲಕ್ಷದಿಂದ 6 ಲಕ್ಷಕ್ಕೆ ಏರಿಕೆಯಾಗಿದ್ದು, ಶೇ.233ರಷ್ಟು ಹೆಚ್ಚಳವಾಗಿದೆ.
ದೇಶದ ಕೊವಿಡ್-19 ಪ್ರಕರಗಳಲ್ಲಿ ಹೊಸ ದಾಖಲೆ
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಸಂದರ್ಭದಲ್ಲೇ ಮೊದಲ ಬಾರಿಗೆ ದೈನಂದಿನ ಪ್ರಕರಣಗಳ ಸಂಖ್ಯೆ ಹೊಸ ದಾಖಲೆ ಬರೆದಿದೆ. ಕಳೆದ 24 ಗಂಟೆಗಳಲ್ಲಿ 2,64,202 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದರ ಹಿಂದಿನ ದಿನ ಗುರುವಾರ ಒಂದೇ ದಿನದಲ್ಲಿ 2,59,291 ಹೊಸ ಕೊವಿಡ್-19 ಪ್ರಕರಣಗಳು ವರದಿಯಾಗಿದ್ದು, ಪ್ರತಿನಿತ್ಯ ವರದಿ ಆಗುತ್ತಿರುವ ದೈನಂದಿನ ಸೋಂಕಿತ ಪ್ರಕರಣಗಳು ಹೊಸ ದಾಖಲೆಯನ್ನು ಬರೆಯುತ್ತಿವೆ. ದೇಶದಲ್ಲಿ ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶೇ.6.7ರಷ್ಟು ಹೆಚ್ಚಳವಾಗಿದೆ.
ಭಾರತದಲ್ಲಿ ಕೊವಿಡ್-19 ಪಾಸಿಟಿವಿಟಿ ದರ ಶೇ.14.78ರಷ್ಟು ಹೆಚ್ಚಳವಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 12,72,073ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 1,09,345 ಸೋಂಕಿತರು ಗುಣಮುಖರಾಗಿದ್ದು, 315 ಮಂದಿ ಪ್ರಾಣ ಬಿಟ್ಟಿದ್ದಾರೆ. ಆ ಮೂಲಕ ಒಟ್ಟು ಸಾವಿನ ಸಂಖ್ಯೆ 4,85,350ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಶೇ.63.60ರಷ್ಟು ಜನರಿಗೆ ಲಸಿಕೆ
ಕೊರೊನಾವೈರಸ್ ಲಸಿಕೆ ವಿತರಣೆಯನ್ನು ವೇಗವಾಗಿ ಮಾಡುತ್ತಿದ್ದು, ದೇಶದಲ್ಲಿ 15 ವರ್ಷ ಮೇಲ್ಪಟ್ಟ ಎಲ್ಲ ಫಲಾನುಭವಿಗಳ ಪೈಕಿ ಶೇ.63.60ರಷ್ಟು ಜನರಿಗೆ ಸಂಪೂರ್ಣ ಲಸಿಕೆಯನ್ನು ನೀಡಲಾಗಿದೆ. 15 ವರ್ಷ ಮೇಲ್ಪಟ್ಟ ಶೇ.88.60ರಷ್ಟು ಜನರಿಗೆ ಕೊವಿಡ್-19 ಲಸಿಕೆಯನ್ನು ನೀಡಲಾಗಿದೆ. 15 ರಿಂದ 17 ವರ್ಷ ವಯೋಮಾನದ ಶೇ.42.40 ಜನರಿಗೆ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರಿಂದ ಪರಿಶೀಲನಾ ಸಭೆ
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮರುಪರಿಶೀಲನೆಗೆ ಸಂಬಂಧಿಸಿದಂತೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿ ಹಾಗೂ ಲೆಫ್ಟಿನೆಂಟ್ ಗವರ್ನರ್ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮರುಪರಿಶೀಲನಾ ಸಭೆ ನಡೆಸಿದರು. ವೈರಸ್ ಅನ್ನು ಸೋಲಿಸಲು, ದೇಶವು ಪ್ರತಿಯೊಂದು ರೂಪಾಂತರಕ್ಕಿಂತ ಮುಂದೆ ತನ್ನ ಸನ್ನದ್ಧತೆಯನ್ನು ಇಟ್ಟುಕೊಳ್ಳುವ ಅಗತ್ಯವಿದೆ. ಓಮಿಕ್ರಾನ್ ಅನ್ನು ನಿಭಾಯಿಸುವುದರ ಜೊತೆ ನಾವು ಭವಿಷ್ಯದ ಯಾವುದೇ ರೂಪಾಂತರಕ್ಕಾಗಿ ಈಗಿನಿಂದಲೇ ತಯಾರಿ ಪ್ರಾರಂಭಿಸಬೇಕಾಗಿದೆ," ಎಂದು ಪ್ರಧಾನಿ ಮೋದಿ ಹೇಳಿದ್ದರು.