ಕೊರೊನಾ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ; ತಜ್ಞರ ಎಚ್ಚರಿಕೆ
ನವದೆಹಲಿ, ಮೇ 6: ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟದ ನಡುವೆ ತಜ್ಞರು ಮೂರನೇ ಅಲೆಯ ಎಚ್ಚರಿಕೆ ನೀಡಿದ್ದು, ಕೊರೊನಾ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದಕ್ಕೆ ಕಾಲವನ್ನು ಊಹಿಸುವುದೂ ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.
ಬುಧವಾರ ಆರೋಗ್ಯ ಸಚಿವಾಲಯ ಪತ್ರಿಕಾಗೋಷ್ಠಿ ನಡೆಸಿದ್ದು, ಪ್ರಸ್ತುತ ದೇಶದಲ್ಲಿ ಉಗ್ರ ರೂಪ ತಾಳಿರುವ ಕೊರೊನಾ ಸೋಂಕನ್ನು ಈ ಹಿಂದೆ ಯಾರೂ ಊಹಿಸಿರಲಿಲ್ಲ. ಅಷ್ಟರ ಮಟ್ಟಿಗೆ ಎರಡನೇ ಅಲೆ ಪ್ರಭಾವ ಬೀರುತ್ತಿದೆ. ಮೂರನೇ ಅಲೆಯ ಭೀಕರತೆಯ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ. ಮುಂದೆ ಓದಿ...

12 ರಾಜ್ಯಗಳಲ್ಲಿ ಹೆಚ್ಚಿದೆ ಸಕ್ರಿಯ ಪ್ರಕರಣಗಳು
ಮಹಾರಾಷ್ಟ್ರ, ಕರ್ನಾಟಕ, ಕೇರಳ, ಉತ್ತರ ಪ್ರದೇಶ ಒಳಗೊಂಡಂತೆ ಹನ್ನೆರಡು ರಾಜ್ಯಗಳಲ್ಲಿ ಸದ್ಯ ಒಂದು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಕರ್ನಾಟಕ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ಥಾನ ಹಾಗೂ ಬಿಹಾರದಲ್ಲಿ ದಿನನಿತ್ಯದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

"ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು"
24 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಪಾಸಿಟಿವಿಟಿ ಪ್ರಮಾಣವು 15% ಹೆಚ್ಚಾಗಿದೆ ಎಂದು ಮಾಹಿತಿ ನೀಡಿದೆ. ಕೊರೊನಾ ಸೋಂಕು ಹೀಗೆ ರೂಪಾಂತರ ಕಾಣುತ್ತಾ ಹೋದರೆ ಪರಿಸ್ಥಿತಿ ಬಹಳ ಹದಗೆಡಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದು, ವೈರಸ್ ಸರಪಳಿಯನ್ನು ತಡೆಯುವುದು ಅತಿ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಕಠಿಣ ಲಾಕ್ಡೌನ್ ಅವಶ್ಯಕವಿದೆ
ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಈ ಸಂದರ್ಭದಲ್ಲಿ ಕಠಿಣ ಲಾಕ್ಡೌನ್ ವಿಧಿಸಲೇಬೇಕು. ಇಲ್ಲದಿದ್ದರೆ ಸೋಂಕು ನಿಯಂತ್ರಣಕ್ಕೆ ತರುವುದು ಕಷ್ಟವಾಗುತ್ತದೆ ಎಂದಿದ್ದಾರೆ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ. ಭಾರತದಲ್ಲಿ ಕೊರೊನಾ ಮೂರನೇ ಅಲೆ ಕಂಡುಬರುವ ಸಾಧ್ಯತೆ ಇದೆ, ಆದರೆ, ಹೆಚ್ಚು ಮಂದಿ ಲಸಿಕೆ ತೆಗೆದುಕೊಂಡರೆ ಅತಿ ಕೆಟ್ಟ ದಿನವನ್ನು ನಾವು ಮುಂದೆ ನೋಡಬೇಕಾಗಿ ಬರುವುದಿಲ್ಲ ಎಂದು ಹೇಳಿದ್ದಾರೆ.

ದೇಶಾದ್ಯಂತ ಲಾಕ್ಡೌನ್ ಅನಿವಾರ್ಯ
ಮೂರನೇ ಅಲೆ ಎರಡನೇ ಅಲೆಗಿಂತ ಭೀಕರವಾಗಿರಲಿದ್ದು, ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಲಾಕ್ಡೌನ್ಗಳಿಂದ ವೈರಸ್ ಸರಪಳಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕೊರೊನಾ ಸೋಂಕಿತ ಪ್ರಕರಣಗಳ ಪ್ರಮಾಣ ಶೇ.10ಕ್ಕಿಂತ ಹೆಚ್ಚಿರುವ ಅಥವಾ ಆಸ್ಪತ್ರೆ ಹಾಸಿಗೆಗಳು ಶೇ.60ಕ್ಕಿಂತ ಹೆಚ್ಚು ಭರ್ತಿಯಾಗಿದ್ದರೆ ಅಲ್ಲಿ ಲಾಕ್ಡೌನ್ ಹಾರಿಗೊಳಿಸಬೇಕು ಎಂದು ತಿಳಿಸಿದ್ದಾರೆ.












Click it and Unblock the Notifications