ಏಪ್ರಿಲ್ ಮಧ್ಯದಲ್ಲಿ ಮಿತಿ ಮೀರಲಿದೆ ಕೊರೊನಾ ಸೋಂಕು; ತಜ್ಞರ ಎಚ್ಚರಿಕೆ
ನವದೆಹಲಿ, ಏಪ್ರಿಲ್ 2: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಆರಂಭವಾಗಿದ್ದು, ಫೆಬ್ರವರಿ ತಿಂಗಳ ನಂತರ ಕೊರೊನಾ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ.
ಈ ಸೋಂಕಿನ ಏಕಾಏಕಿ ಏರಿಕೆ ಹಿಂದಿನ ಕಾರಣವನ್ನು ಕಲೆ ಹಾಕುವಲ್ಲಿ ತಜ್ಞರು ನಿರತರಾಗಿದ್ದು, ಏಪ್ರಿಲ್ ಮಧ್ಯದಲ್ಲಿ ಸೋಂಕಿನ ಪ್ರಮಾಣ ಮಿತಿ ಮೀರುವ ಸೂಚನೆಯನ್ನು ನೀಡಿದ್ದಾರೆ.
ದೇಶದಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಆತಂಕಕಾರಿ ಕೊರೊನಾ ಸೋಂಕಿನ ಪ್ರಮಾಣ
ಏಪ್ರಿಲ್ 15-20ರಲ್ಲಿ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ದಾಖಲೆ ಮಟ್ಟವನ್ನು ಮುಟ್ಟುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಏರಿಕೆಯಾದಂತೆ ಮತ್ತೊಮ್ಮೆ ಸೋಂಕಿನ ಪ್ರಮಾಣ ಹೆಚ್ಚುತ್ತದೆ ಎಂದು ಹೇಳಿದ್ದಾರೆ. ಮುಂದೆ ಓದಿ...
ಏಪ್ರಿಲ್ 15ರ ನಂತರ ಕೊರೊನಾ ಪ್ರಕರಣಗಳಲ್ಲಿ ಭಾರೀ ಏರಿಕೆ
ಐಐಟಿ ಕಾನ್ಪುರದ ಮನೀಂದ್ರಾ ಅಗರ್ವಾಲ್ ಅವರು ಕೊರೊನಾ ಸೋಂಕಿನ ಕುರಿತು "ಸೂಪರ್ ಮಾಡೆಲ್" ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಕೊರೊನಾ ಎರಡನೇ ಅಲೆ ಕುರಿತು ಮಾಹಿತಿ ನೀಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ದಿನಕ್ಕೆ 80 ಸಾವಿರದಿಂದ 90 ಸಾವಿರ ಸೋಂಕಿನ ಪ್ರಕರಣಗಳು ದಾಖಲಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 15ರ ನಂತರ ಸೋಂಕಿನ ಪ್ರಮಾಣ ಹಿಂದೆಂದಿಗಿಂತಲೂ ಏರಿಕೆಯಾಗುತ್ತದೆ ಎಂದು ಹೇಳಿದ್ದಾರೆ.
ಹೌಹಾರಿಸುತ್ತೆ ಅಂಕಿ-ಸಂಖ್ಯೆ: ಮುಂಬೈನಲ್ಲಿ ಶೇ.475ರಷ್ಟು ಕೊರೊನಾ ಏರಿಕೆ!
"ಏರಿದಷ್ಟೇ ವೇಗವಾಗಿ ಇಳಿಯುತ್ತದೆ"
ಆದರೆ ಎಷ್ಟು ವೇಗದಲ್ಲಿ ಸೋಂಕು ಏರಿಕೆಯಾಗುತ್ತದೋ ಅಷ್ಟೇ ವೇಗದಲ್ಲಿ ಇಳಿಕೆಯೂ ಆಗುತ್ತದೆ ಎಂದು ಹೇಳಿದ್ದಾರೆ. ಏಪ್ರಿಲ್ 15-20ರ ದಿನಗಳಲ್ಲಿ ಅತಿ ಹೆಚ್ಚಿನ ಪ್ರಕರಣ ದಾಖಲಾಗುತ್ತದೆ. ಇದರ ನಂತರದ 15-20 ದಿನಗಳಲ್ಲಿ ಅಷ್ಟೇ ವೇಗವಾಗಿ ಇಳಿಕೆಯಾಗುತ್ತದೆ ಎಂದು ತಿಳಿಸಿದ್ದಾರೆ.
"ಸಂಸ್ಥೆಗಳನ್ನು ತೆರೆದಿದ್ದು ಏರಿಕೆಗೆ ಕಾರಣ"
ಕೊರೊನಾ ಎರಡನೇ ಅಲೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, "ಕೊರೊನಾ ಪ್ರಕರಣಗಳ ಏಕಾಏಕಿ ಏರಿಕೆಗೆ ಎರಡು ಬಹುಮುಖ್ಯ ಕಾರಣಗಳಿವೆ. ಶಾಲಾ ಕಾಲೇಜುಗಳು, ಕೆಲವು ಸಂಸ್ಥೆಗಳು, ಕಂಪನಿಗಳನ್ನು ತೆರೆದಿದ್ದು ಒಂದು ಕಾರಣವಾದರೆ, ಮತ್ತೊಂದೆಡೆ ಸೋಂಕಿನ ಕುರಿತು ಜನರು ನಿರ್ಭಯವಾಗಿರುವುದು, ನಿರ್ಲಕ್ಷ್ಯವಾಗಿರುವುದು ಕೂಡ ಮತ್ತೊಂದು ಪ್ರಮುಖ ಕಾರಣ. ಜೊತೆಗೆ ಕೆಲವು ರೂಪಾಂತರ ಸೋಂಕು ಕೂಡ ಅತಿ ವೇಗವಾಗಿ ಹರಡುತ್ತಿದೆ ಎಂದು ಹೇಳಿದರು.
ಭಾರತದಲ್ಲಿ 81,466 ಕೊರೊನಾ ಸೋಂಕಿತರು ಪತ್ತೆ
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 81,466 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 50,356 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 459 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ 1,23,03,131 ಪ್ರಕರಣಗಳಿವೆ, ಇದುವರೆಗೂ 1,15,25,039 ಮಂದಿ ಗುಣಮುಖರಾಗಿದ್ದಾರೆ. 6,14,496 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 1,63,396 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೂ 6,87,89,138 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.