ಬಿಜೆಪಿಯ 'ಲೂಸ್ ಟಾಕ್' ಸಂಸದರಿಗೆ ಮೋದಿ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ಸಿಗಲೇ ಇಲ್ಲ
Recommended Video
ಎರಡನೇ ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭ ಅದ್ದೂರಿಯಾಗಿ ಮೇ ಮೂವತ್ತರಂದು ನಡೆದಿದೆ. ಅದರ ಮರುದಿನ, ಸಚಿವಸ್ಥಾನ ಘೋಷಣೆಯಾಗಿದೆ.
ಕೆಲವೊಂದು ಸಚಿವ ಸ್ಥಾನ ಇವರಿಗೇ ಸಿಗಬಹುದು ಎನ್ನುವ ನಿರೀಕ್ಷೆಯಿದ್ದರೂ, ಹಲವು ಅಚ್ಚರಿಯೂ ಸಚಿವಖಾತೆ ಘೋಷಣೆಯಾದ ನಂತರ ಕಂಡುಬಂದಿದೆ, ಅದರಲ್ಲಿ ಹಣಕಾಸು ಸಚಿವ ಸ್ಥಾನ ನಿರ್ಮಲಾ ಸೀತಾರಾಮನ್ ಅವರಿಗೆ ದಕ್ಕಿದ್ದು.
ಒಡಿಶಾದ ಬಾಲಾಸೋರ್ನಿಂದ ಸ್ಪರ್ಧಿಸಿದ್ದ ಮತ್ತು ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಪ್ರತಾಪ್ ಚಂದ್ರ ಸಾರಂಗಿಯವರಿಗೆ ಎರಡೆರಡು ಖಾತೆ ಲಭಿಸಿದ್ದರೆ, ಸತತವಾಗಿ ಗೆದ್ದು ಬಂದವರಿಗೆ ಸಚಿವ ಸ್ಥಾನ ಸಿಗದೇ ಇರುವುದು ಮೋದಿಯ ಕಾರ್ಯಶೈಲಿ ಇರಬಹುದೇನೋ?
ಮೋದಿ ಸರಕಾರದ ಮೊದಲ ಅವಧಿಯಲ್ಲಿ ಸಚಿವ ಸಂಪುಟದಲ್ಲಿದ್ದ, ಕೆಲವು ಸಂಸದರಿಗೆ ಈ ಬಾರಿ ಕೊಕ್ ನೀಡಲಾಗಿದೆ. ಕೊಟ್ಟ ಕೆಲಸವನ್ನು ದಕ್ಷತೆಯಿಂದ ನಿರ್ವಹಿಸದೇ ಇರುವುದು ಅಥವಾ ಲೂಸ್ ಟಾಕ್ ಮೂಲಕ, ಪಕ್ಷಕ್ಕೆ ಮುಜುಗರ ತಂದಿದ್ದಾಕಾಗಿ ಇವರಿಗೆಲ್ಲಾ ಈ ಶಿಕ್ಷೆ ಇದ್ದಿರಬಹುದು. ಅಂತವ ಕೆಲವು ಸಂಸದರ, ಪಟ್ಟಿ, ಈ ರೀತಿಯಿದೆ:

ಉನ್ನಾವ್ ಸಂಸದ ಸಾಕ್ಷಿ ಮಹಾರಾಜ್
1991ರಲ್ಲಿ ಉತ್ತರಪ್ರದೇಶದ ಮಥುರಾದಿಂದ, 1996 ಮತ್ತು1998ರಲ್ಲಿ ಫರೂಖಾಬಾದ್ ನಿಂದ, 2014, 2019ರಲ್ಲಿ ಉನ್ನಾವ್ ಕ್ಷೇತ್ರದಿಂದ ಸಾಕ್ಷಿ ಮಹಾರಾಜ್ ಸಂಸದರಾಗಿ ಆಯ್ಕೆಯಾಗಿದ್ದಾರೆ. 2019ರ ಚುನಾವಣೆಯಲ್ಲಿ ನಾಲ್ಕು ಲಕ್ಷ ಲೀಡ್ ನಿಂದ ಇವರು ಗೆದ್ದಿದ್ದರೂ ಇವರಿಗೆ ಕ್ಯಾಬಿನೆಟ್ ಸ್ಥಾನ ಸಿಗಲಿಲ್ಲ. ಖಟ್ಟರ್ ಹಿಂದೂ ಧೋರಣೆಯಿಂದ ಹಲವು ಬಾರಿ ರಾಷ್ಟ್ರಮಟ್ಟದಲ್ಲಿ ಇವರ ಹೇಳಿಕೆ ಚರ್ಚೆಯ ವಿಷಯವಾಗಿದ್ದವು ಮತ್ತು ಪಕ್ಷಕ್ಕೆ ಮುಜುಗರವನ್ನು ತಂದೊಡ್ಡಿದ್ದವು.
'ನಮ್ಮ ಧರ್ಮದ ರಕ್ಷಣೆಗಾಗಿ ನಾವು ಸಾಯಲೂ ಸಿದ್ದ, ಸಾಯಿಸಲೂ ಸಿದ್ದ, ಹಿಂದೂ ಮಹಿಳೆಯರು ಧರ್ಮ ರಕ್ಷಣೆಗಾಗಿ ನಾಲ್ಕು ಮಕ್ಕಳನ್ನು ಹೆರಬೇಕು' ಈ ರೀತಿಯ ಹೇಳಿಕೆಯನ್ನು ಸಾಕ್ಷಿ ಮಹಾರಾಜ್ ನೀಡಿದ್ದರು.

ಉತ್ತರಕನ್ನಡದ ಸಂಸದ ಅನಂತ್ ಕುಮಾರ್ ಹೆಗಡೆ
ಕಳೆದ ಕ್ಯಾಬಿನೆಟ್ ನಲ್ಲಿ ಕೌಶಲ್ಯಾಭಿವೃದ್ದಿ ಸಚಿವರಾಗಿದ್ದ ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ 2019ರ ಚುನಾವಣೆಯಲ್ಲಿ 4.85ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ತಮ್ಮದೇ ಖಾತೆಯನ್ನು "ನೀರಿಲ್ಲದ ಬಾವಿ" ಎಂದು ಈ ಹಿಂದೆ ಲೇವಡಿ ಮಾಡಿದ್ದ ಹೆಗಡೆ ಅವರ ವಿವಾದಕಾರಿ ಹೇಳಿಕೆ ಒಂದಲ್ಲಾ ಎರಡಲ್ಲಾ.
ಮಹಾತ್ಮ ಗಾಂಧಿ ಹತ್ಯೆಯ ವಿಚಾರದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ಉಲ್ಲೇಖಿಸಿ, ' ಗೋಡ್ಸೆ ಈಗ ನಡೆಯುತ್ತಿರುವ ಡಿಬೇಟ್ ನಿಂದ ಖುಷಿ ಪಟ್ಟಿರಬಹುದು' ಎಂದು ಟ್ವೀಟ್ ಮಾಡಿ, ನಂತರ ನನ್ನ ಅಕೌಂಟ್ ಹ್ಯಾಕ್ ಆಗಿದೆ ಎಂದು ಹೇಳಿದ್ದರು.
'ಮುಸ್ಲಿಂ ತಂದೆ, ಕ್ರಿಶ್ಚಿಯನ್ ತಾಯಿಯ ಮಗ ಅದು ಹೇಗೆ ಬ್ರಾಹ್ಮಣನಾಗಲು ಸಾಧ್ಯ' ಎಂದು ರಾಹುಲ್ ಗಾಂಧಿಯನ್ನು ಉಲ್ಲೇಖಿಸಿ ಹೆಗಡೆ ಹೇಳಿದ್ದು, ವ್ಯಾಪಕ ಆಕ್ರೋಶಕ್ಕೆ ಒಳಗಾಗಿತ್ತು.

ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್
ದಕ್ಷಿಣಕನ್ನಡ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರೂ, ನಳಿನ್ ಕುಮಾರ್ ಕಟೀಲ್ ಗೆ ಈ ಬಾರಿಯೂ ಸಚಿವಸ್ಥಾನ ಸಿಗಲಿಲ್ಲ. ಅವರು ಅದನ್ನು ನಿರೀಕ್ಷಿಸಿದ್ದರೋ ಇಲ್ಲವೋ, ಗೊತ್ತಿಲ್ಲ. ಆದರೆ, ಅನಂತ್ ಕುಮಾರ್ ಹೆಗಡೆಯಂತೆ ಅವರೂ ಗೋಡ್ಸೆ ವಿಚಾರದಲ್ಲಿ ಹೇಳಿಕೆ ನೀಡಿದ್ದು, ಪಕ್ಷಕ್ಕೆ ಮುಜುಗರವನ್ನು ತಂದೊಡ್ಡಿತ್ತು.
'ಗೋಡ್ಸೆ ಕೊಂದಿದ್ದು ಒಬ್ಬರನ್ನ, ಕಸಬ್ ಕೊಂದಿದ್ದು 72 ಜನರನ್ನು, ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಕೊಂದಿದ್ದು ಹದಿನೇಳು ಸಾವಿರ ಜನರನ್ನು.. ನೀವೇ ಆಲೋಚಿಸಿ ಇವರಲ್ಲಿ ಯಾರು ಅತಿಹೆಚ್ಚು ಕ್ರೂರಿಗಳು ಎಂದು' ಕಟೀಲ್ ನೀಡಿದ್ದ ಹೇಳಿಕೆ ಭಾರೀ ವಿವಾದ ಹುಟ್ಟುಹಾಕಿತ್ತು. ಇವರ ಈ ಹೇಳಿಕೆಗೆ ಅಮಿತ್ ಶಾ, ಕಾರಣ ಕೇಳಿ ನೊಟೀಸ್ ಜಾರಿ ಮಾಡಿದ್ದರು.

ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ವಿವಾದಕಾರಿ ಹೇಳಿಕೆ
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಕ್ಷೇತ್ರದಿಂದ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಅವರನ್ನು ಕಣಕ್ಕಿಳಿಸಿದಾಗ ಅದು ಭಾರೀ ಚರ್ಚೆಯ ವಿಷಯವಾಗಿತ್ತು. ಕಾಂಗ್ರೆಸ್ಸಿನ ಹೆವಿವೈಟ್, ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಅವರನ್ನು ಪ್ರಗ್ಯಾ ಸೋಲಿಸಿದ್ದರಿಂದ, ಇವರಿಗೆ ಸಂಪುಟ ಸ್ಥಾನದಲ್ಲಿ ಸ್ಥಾನ ಸಿಗಬಹುದು ಎನ್ನುವ ಮಾತೂ ಕೇಳಿಬರುತ್ತಿತ್ತು, ಜೊತೆಗೆ, ಇವರು ಗೋಡ್ಸೆ ವಿಚಾರದಲ್ಲಿ ನೀಡಿದ್ದ ಹೇಳಿಕೆಯೂ ಇವರಿಗೆ ಮುಳುವಾಗಬಹುದು ಎನ್ನುವ ಮಾತೂ ಇತ್ತು.
'ಗೋಡ್ಸೆ ಒಬ್ಬ ದೇಶಭಕ್ತ ಮತ್ತು ದೇಶಭಕ್ತನಾಗಿಯೇ ಇತಿಹಾಸದ ಪುಟದಲ್ಲಿ ಸೇರಲಿದ್ದಾರೆ' ಎನ್ನುವ ಹೇಳಿಕೆಯನ್ನು ಪ್ರಗ್ಯಾ ನೀಡಿದ್ದರು. ಈ ಹೇಳಿಕೆಗೆ ಮೋದಿ, ಅಮಿತ್ ಶಾ ಸೇರಿದಂತೆ ಸ್ವಪಕ್ಷೀಯರು ಭಾರೀ ವಿರೋಧ ವ್ಯಕ್ತಪಡಿಸಿದ್ದರು.

ಸುಲ್ತಾನ್ ಪುರ ಸಂಸದೆ ಮನೇಕಾ ಗಾಂಧಿ
ಮೋದಿ ಸರಕಾರದ ಮೊದಲ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಮನೇಕಾ ಗಾಂಧಿ, 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಯಾಸದ ಗೆಲುವನ್ನು ಸಾಧಿಸಿದ್ದರು ಮನೇಕಾ ಅವರನ್ನು ತಾತ್ಕಾಲಿಕವಾಗಿ ಸ್ಪೀಕರ್ ಆಗಿ ನೇಮಿಸುವ ಸಾಧ್ಯತೆಯಿದ್ದರೂ, ವಿವಾದಕಾರಿ ಹೇಳಿಕೆ ನೀಡಿದ್ದರಿಂದ, ಅವರಿಗೆ ಸಚಿವ ಸ್ಥಾನ ಮಿಸ್ ಆಗಿದೆ ಎನ್ನುವ ಮಾತಿದೆ.
'ಮುಸ್ಲಿಮರು ಮತ ನೀಡದೆಯೇ ನಾನು ಚುನಾವಣೆ ಗೆಲ್ಲಬೇಕೆಂದರೆ ಅದು ಒಳ್ಳೆಯ ಬೆಳವಣಿಗೆಯಲ್ಲ. ಹೀಗಿದ್ದಾಗಿಯೂ, ಅವರು ನನ್ನ ಬಳಿ ಕೆಲಸಕ್ಕಾಗಿ ಬಂದರೆ, ಅದರಲ್ಲಿ ಅರ್ಥವಿಲ್ಲ' ಎನ್ನುವ ಹೇಳಿಕೆಯನ್ನು ಚುನಾವಣೆಯ ಪ್ರಚಾರದ ವೇಳೆ ಮನೇಕಾ ಗಾಂಧಿ ನೀಡಿದ್ದರು.












Click it and Unblock the Notifications