ರಾಜಸ್ಥಾನದಲ್ಲಿ ಬಿಜೆಪಿಯನ್ನು ಹಣಿದುಹಾಕಲು ಕಾಂಗ್ರೆಸ್ಸಿಗೆ ಹೊಸ ಅಸ್ತ್ರ
ಜೈಪುರ, ನವೆಂಬರ್ 13 : ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವನ್ನು ಹಣಿದು ಹಾಕಲು ಕಾದು ಕುಳಿತಿರುವ ಕಾಂಗ್ರೆಸ್, ರಾಜ್ಯದಲ್ಲಿ ಬಿಜೆಪಿ ಅಧಿಕಾರಾವಧಿಯಲ್ಲಿ ನೆಲಸಮ ಮಾಡಿರುವ ದೇವಸ್ಥಾನಗಳ ವಿಷಯವನ್ನು ಕೆದಕಲಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಜೈಪುರದಲ್ಲಿರುವ ರೋಜಗಾರೇಶ್ವರ ದೇವಸ್ಥಾನವನ್ನು ಬಿಜೆಪಿ ಕೆಡವಿರುವ ಸಂಗತಿ, ಈ ಚುನಾವಣೆಯ ಸಮಯದಲ್ಲಿ ಬಿಜೆಪಿಯನ್ನು ಕಾಡಿದಲೂ ಅಚ್ಚರಿಯಿಲ್ಲ. ಮೆಟ್ರೋ ನಿರ್ಮಾಣ ಮಾಡಬೇಕೆಂದು ರೋಜಗಾರೇಶ್ವರ ದೇವಸ್ಥಾನವನ್ನು ಬಿಜೆಪಿ ಆಡಳಿತ ಕೆಡವಿತ್ತು.
ಅದೇ ರೀತಿ ಇಡೀ ರಾಜ್ಯದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಹಲವಾರು ಹಳೆಯ ದೇವಸ್ಥಾನಗಳನ್ನು ನೆಲಸಮ ಮಾಡಲು ಭಾರತೀಯ ಜನತಾ ಪಕ್ಷ ನಿರ್ಧರಿಸಿತ್ತು ಎಂದು ಮೂಲಗಳು ತಿಳಿಸಿವೆ. ಇದು ಬಿಜೆಪಿಯಲ್ಲಿಯೇ ಭಾರೀ ಅಸಮಾಧಾನವನ್ನು ಹುಟ್ಟುಹಾಕಿತ್ತು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಷಯವನ್ನು ರಾಜಸ್ತಾನದಲ್ಲಿಯೂ ಬಿಜೆಪಿ ಎತ್ತಿಕೊಳ್ಳಲಿರುವುದು ಕಾಂಗ್ರೆಸ್ಸಿಗೆ ತಲೆನೋವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ, ಬಿಜೆಪಿಯಿಂದಲೇ ಕೆಲವಾರು ದೇವಸ್ಥಾನಗಳನ್ನು ನೆಲಸಮ ಮಾಡಿರುವುದನ್ನು ಜನರೆದಿರುವ ಪ್ರಸ್ತಾಪಿಸಿ ಬಿಜೆಪಿಗೆ ತಿರುಗೇಟು ನಿಡಲು ಕಾಂಗ್ರೆಸ್ ನಿರ್ಧರಿಸಿದೆ.
ಒಂದು ವೇಳೆ ಬಿಜೆಪಿ ರಾಮ ಮಂದಿರ ನಿರ್ಮಾಣದ ಸಂಗತಿಯನ್ನು ಎತ್ತಿಕೊಂಡರೆ, ರಾಜಸ್ಥಾನದಲ್ಲಿ ಮಾತ್ರವಲ್ಲ ಬಿಜೆಪಿ ಆಡಳಿತ ನಡೆಸುತ್ತಿರುವ ಮಧ್ಯ ಪ್ರದೇಶ, ಛತ್ತೀಸ್ ಘಡದಲ್ಲಿಯೂ ದೇವಸ್ಥಾನಗಳನ್ನು ನೆಲಸಮ ಮಾಡಿರುವ ಬಗ್ಗೆ ಪ್ರಸ್ತಾಪಿಸಿ ಬಿಜೆಪಿಗೆ ಧರ್ಮದೇಟು ನೀಡಲು ಕಾಂಗ್ರೆಸ್ ಅಣಿಯಾಗಿದೆ.
ಜೈಪುರವೊಂದರಲ್ಲಿಯೇ 250ಕ್ಕೂ ಹೆಚ್ಚು ದೇವಸ್ಥಾನಗಳನ್ನು ಭಾರತೀಯ ಜನತಾ ಪಕ್ಷ ಸರಕಾರ ಬೀಳಿಸಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಆದರೆ, ಇಷ್ಟೆಲ್ಲ ದೇವಸ್ಥಾನಗಳು ನೆಲಸಮವಾಗುತ್ತಿದ್ದರೂ ದೆಹಲಿಯಲ್ಲಿ ಕುಳಿತಿರುವ ಬಿಜೆಪಿಯ ಹಿರಿಯ ನಾಯಕರು ಏಕೆ ಕಣ್ಣುಮುಚ್ಚಿ ಕುಳಿತಿದ್ದರು ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ.
ನಾಥ ಜನಾಂಗಕ್ಕೆ ಸೇರಿದ ಪ್ರತಾಪ ನಗರದಲ್ಲಿರುವ ಅತಿ ಹಳೆಯದಾದ ದೇಗುಲದ ನೆಲಸಮಯವನ್ನು ಪ್ರಶ್ನಿಸಿ ಅಲ್ಲಿನ ಸ್ಥಳೀಯರೇ ರೊಚ್ಚಿಗೆದ್ದಿದ್ದರು, ಪ್ರತಿಭಟನೆ ನಡೆಸಿದ್ದರು. ಜನರ ಆಕ್ರೋಶ ಮುಗಿಲು ಮುಟ್ಟುತ್ತಿದ್ದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೇ ಆ ದೇಗುಲವನ್ನು ಉಳಿಸಬೇಕೆಂದು ಮನವಿ ಮಾಡಿಕೊಂಡಿದ್ದರು.
ಮೆಟ್ರೋ ನಿರ್ಮಾಣದ ಕಾರಣ ಹೇಳಿ ರೋಜಗಾರೇಶ್ವರ ದೇವಸ್ಥಾನವನ್ನು ನೆಲಸಮ ಮಾಡಿದಾಗಲೂ ಸ್ಥಳೀಯರು ತಿರುಗಿಬಿದ್ದಿದ್ದು ಮಾತ್ರವಲ್ಲ, ಪಕ್ಷದೊಳಗಿಂದಲೇ ಪ್ರತಿರೋಧ ವ್ಯಕ್ತವಾಗಿತ್ತು. ದೇವಸ್ಥಾನ ನೆಲಸಮ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಂಥ ಶಾಸಕರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದೂ ಆಗ್ರಹಿಸಿದ್ದರು ಎಂದು ಕಾಂಗ್ರೆಸ್ ಹೇಳಿದೆ.
ರಾಜಸ್ತಾನ ಕಾಂಗ್ರೆಸ್ ವಕ್ತಾರರಾಗಿರುವ ಪ್ರತಾಪ್ ಸಿಂಗ್ ಖಚರಿಯಾವಾಸ್ ಪ್ರಕಾರ, ಅಭಿವೃದ್ಧಿ, ಉದ್ಯೋಗ, ಹಣದುಬ್ಬರ, ಭ್ರಷ್ಟಾಚಾರ, ಕಪ್ಪುಹಣದ ವಿಷಯವನ್ನು ಎಂದೋ ಕಸದಬುಟ್ಟಿಗೆ ಹಾಕಿದ್ದು, ಭಾರತೀಯ ಜನತಾ ಪಕ್ಷದ ನೀತಿ ಕಟ್ಟುವುದಲ್ಲ ಬೀಳಿಸುವುದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications