ರಾಜಸ್ಥಾನದಲ್ಲಿ ಮೈಕೊಡವಿಕೊಂಡು ಏಳಲಿರುವ ಕಾಂಗ್ರೆಸ್ ಸೇವಾದಳ!
ಜೈಪುರ, ಅಕ್ಟೋಬರ್ 26: ರಾಜಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಎದ್ದಿರುವ ಆಡಳಿತವಿರೋಧಿ ಅಲೆಯನ್ನು ಬಳಸಿಕೊಂಡು ಗೆಲ್ಲಲೇಬೇಕೆಂಬ ಜಿದ್ದಿಗೆ ಬಿದ್ದಿದೆ ಕಾಂಗ್ರೆಸ್! ಆದರೆ ಕಾಂಗ್ರೆಸ್ ಪಕ್ಷಕ್ಕೆ ಪರೀಕ್ಷೆ ಎನ್ನಿಸಿರುವ ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಕಾಂಗ್ರೆಸ್ಸಿಗೆ ಹೊಸ ಭರವಸೆಯಾಗಿ ಕಂಡಿದ್ದು ಕಾಂಗ್ರೆಸ್ ಸೇವಾದಳ!
ಶಿಥಿಲಾವಸ್ಥೆಗೆ ತಲುಪಿರುವ ಕಾಂಗ್ರೆಸ್ ಸೇವಾದಳ ಇದೀಗ ಮೈಕೊಡವಿಕೊಂಡು ಎದ್ದಿದೆ. ರಾಜಸ್ಥಾನ ವಿಧಾನಸಭಾ ಚುನಾವಣೆ ಕಾಂಗ್ರೆಸ್ಸಿಗೆ ಮಾತ್ರವಲ್ಲ, ಕಾಂಗ್ರೆಸ್ ಸೇವಾದಳಕ್ಕೂ ಅಗ್ನಿಪರೀಕ್ಷೆ!
ಹಿರಿಯ ನಾಯಕರ ಕೈಯಲ್ಲಿ ಅಭ್ಯರ್ಥಿಗಳ ಪಟ್ಟಿ, ರಾಹುಲ್ ಗೆ ತಲೆನೋವು?!
ಸುಮಾರು 50 ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿಯನ್ನು ಸೇವಾದಳಕ್ಕೆ ಕಾಂಗ್ರೆಸ್ ನಾಯಕರು ವಹಿಸಲಿದ್ದು, ಈ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಯನ್ನು ಸೇವಾದಳಕ್ಕೆ ನೀಡಲಾಗಿದೆ.
ಏನಿದು ಕಾಂಗ್ರೆಸ್ ಸೇವಾದಳ?
ಕಾಂಗ್ರೆಸ್ ಸೇವಾದಳ ಎಂಬುದು ಕಾಂಗ್ರೆಸ್ ಪಕ್ಷದ ಆಂತರಿಕ ಸಂಘಟನೆ. ಕೆಲ ವರ್ಷಗಳಲ ಹಿಂದೆ ಸಾಕಷ್ಟು ಬಲಾಡ್ಯವಾಗಿದ್ದ ಈ ಸಂಘಟನೆ ಎಷ್ಟೊ ರಾಜ್ಯಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ ಹೆಗ್ಗಳಿಕೆ ಗಳಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಘಟನೆ ಸಂಪೂರ್ಣ ಶಿಥಿವಾಸ್ಥೆಗೆ ತೆರಳಿದೆ. ರಾಜಸ್ಥಾನದ ವಿಧಾನಸಭೆ ಹಿನ್ನೆಲೆಯಲ್ಲಿ ಸೇವಾದಳದ ಪುನರುಜ್ಜೀವನದ ಬಗ್ಗೆ ಕಾಂಗ್ರೆಸ್ ಯೋಚಿಸಿದೆ.
ಸೇವಾದಳಕ್ಕೆ ಟಾಸ್ಕ್ ನೀಡಿದ ಕಾಂಗ್ರೆಸ್
ಸೇವಾದಳಕ್ಕೆ ಈಗಾಗಲೇ ಕಾಂಗ್ರೆಸ್ ನಾಯಕರು ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ಪ್ರಕಾರ ಸೇವಾದಳದ ಸದಸ್ಯರು ರಾಜಸ್ಥಾನದಲ್ಲಿನ ನಿರ್ದಿಷ್ಟ 50 ಕ್ಷೇತ್ರಗಳಲ್ಲಿ ಅವಿರತ ಕೆಲಸ ಮಾಡಬೇಕು. ಅಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲು ಅಗ್ಯವಿರುವ ಎಲ್ಲಾ ರೀತಿಯ ಕೆಲಸಗಳಲ್ಲೂ ತೊಡಗಿಸಿಕೊಳ್ಳಬೇಕು. ಇದು ಸೇವಾದಳಕ್ಕೂ ಪರೀಕ್ಷೆಯಾಗಿದೆ. ಅಕಸ್ಮಾತ್ ಈ ಟಾಸ್ಕ್ ನಲ್ಲಿ ಸೇವಾದಳ ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ ಮುಂದೆಯೂ ಅದು ಜೀವಂತವಾಗಿರುತ್ತದೆ. ಇಲ್ಲವೆಂದರೆ ಈ ಸಂಘಟನೆ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಸೇವಾದಳಕ್ಕೆ ರಾಜಸ್ಥಾನ ವಿಧಾನಸಭೆ ಚುನಾವಣೆ ಅಳಿವು ಉಳಿವಿನ ಪ್ರಶ್ನೆಯಾಗಿದೆ.
ರಾಜಸ್ಥಾನದಲ್ಲಿ ಬಿಜೆಪಿಗೆ ಬಹುದೊಡ್ಡ ತಲೆನೋವಾಗಲಿರುವ ರಾಮ್ ರಹೀಮ್!
ಯಾವ ಕ್ಷೇತ್ರಗಳಲ್ಲಿ ಸೇವಾದಳದ ಕಾರ್ಯನಿರ್ವಹಣೆ?
ನಾಯಕರು ನೀಡಿದ 50 ಕ್ಷೇತ್ರಗಳಲ್ಲಿ ಪ್ರಮುಖವಾದವು ಸಂಗನೆರ್, ವಿದ್ಯಾಧರ್ ನಗರ, ಆದರ್ಶ ನಗರ, ಕಿಶಾನ್ಪೊಲ್, ಬುಂಡಿ, ಲಾಡ್ಪುರ, ರಾಜಸ್ಮಂಡಿ, ಭೀಮ್, ಶೇರ್ಗರ್, ಲೊಹಾವತ್, ಮಾರ್ವಾಡ ಜಂಕ್ಷನ್, ಪ್ರಬಸ್ತರ್, ದೆಗಾನ ಮತ್ತು ಜೋದ್ಪುರ ನಗರ ಮುಂತಾದವು. ಇದರೊಟ್ಟಿಗೆ ಪಸ್ರಸ್ತುತ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಪ್ರತಿನಿಧಿಸುವ ಝಲರ್ಪಟಾಣ್ ಕ್ಷೇತ್ರವೂ ಈ ಪಟ್ಟಿಯಲ್ಲಿದೆ.
ಆಪರೇಷನ್ ಶುರು!
ಸೇವಾದಳ ಈಗಾಗಲೇ ತನ್ನ ಕಾರ್ಯಾಚರಣೆ ಆರಂಭಿಸಿದ್ದು, ತನಗೆ ವಹಿಸಿದ ಐವತ್ತು ಕ್ಷೇತ್ರಗಳಲ್ಲಿ ಮನೆ ಮನೆ ಪ್ರಚಾರ ಆರಂಭಿಸಿದೆ. ಅಷ್ಟೇ ಅಲ್ಲ, ಈ ಕ್ಷೇತ್ರಗಳ ಮತದಾರರ ಒಲವು, ಯಾವ ಪಕ್ಷದ ಕಡೆ ಹೆಚ್ಚು ಜನರಿದ್ದಾರೆ ಎಂಬಿತ್ಯಾದಿ ಅಗತ್ಯ ಮಾಹಿತಿಯನ್ನೂ ಈಗಾಗಲೇ ಕಲೆಹಾಕಿದೆ. ಈ ಭಾಗದ ಜನರ ಮನಸ್ಥಿತಿಯನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಕೆಲಸ ಮಾಡಲು ಆರಂಭಿಸಿದೆ. ಸ್ಥಳೀಯ ಸಮಸ್ಯೆಗಳನ್ನು ಪಟ್ಟಿ ಮಾಡಿ ಅವುಗಳ ಪರಿಹಾರದ ಬಗ್ಗೆ ಯೋಚಿಸಲು ನಾಯಕರಿಗೆ ಮನವಿ ಮಾಡಿದೆ. ಪ್ರಚಾರದ ಸಮಯದಲ್ಲೂ ಇದೇ ವಿಷಯಗಳತ್ತ ಗಮನ ಹರಿಸಲು ಸೂಚನೆ ನೀಡಿದೆ.
'ಬ್ರಿಟಿಷರು ಇನ್ನೂ ನೂರು ವರ್ಷ ಭಾರತವನ್ನು ಆಳಿದ್ದರೆ ಚೆನ್ನಾಗಿರುತ್ತಿತ್ತು!'
ಜಿದ್ದಾಜಿದ್ದಿಗೆ ವೇದಿಕೆ ರೆಡಿ!
ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಪಕ್ಷವೊಂದು ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 101. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಮತ್ತು ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ವಿರುದ್ಧ ಜನರಿಗ ಉತ್ತಮ ಅಭಿಪ್ರಾಯವಿಲ್ಲ. ಈ ಆಡಳಿತವಿರೋಧಿ ಅಲೆಯನ್ನೇ ಕಾಂಗ್ರೆಸ್ ತನ್ನ ಗೆಲುವಿನ ಮೆಟ್ಟಿಲನ್ನಾಗಿ ಬಳಸಿಕೊಳ್ಳಬಹುದು.