ಜನರ ಸಿಟ್ಟಿಗೆ ಹೆದರಿ ತೈಲ ಬೆಲೆ ಇಳಿಸಿದೆ ಕೇಂದ್ರ ಸರಕಾರ ಎಂದ ಕಾಂಗ್ರೆಸ್
ನವದೆಹಲಿ, ಅಕ್ಟೋಬರ್ 4: ನಾಲ್ಕು ರಾಜ್ಯಗಳಲ್ಲಿನ ವಿಧಾನಸಭೆ ಚುನಾವಣೆ ಕಣ್ಣೆದುರು ಇದ್ದು, ಜನರ ಮುಖದ ಮೇಲೆ ಕೋಪದ ಗೆರೆಗಳನ್ನು ಕಂಡು ಆ ಭಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಮಾಡಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೇವಾಲಾ ಕೇಂದ್ರ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಪೆಟ್ರೋಲ್/ಡೀಸೆಲ್ ಬೆಲೆಯಲ್ಲಿ ಲೀಟರ್ ಗೆ ರು.2.50 ಕಡಿಮೆ ಮಾಡಿದ ಕೇಂದ್ರ ಸರಕಾರದ ನಿರ್ಧಾರ ಘೋಷಣೆ ಮಾಡಿದ ನಂತರ ಕಾಂಗ್ರೆಸ್ ಈ ಪ್ರತಿಕ್ರಿಯೆ ನೀಡಿದೆ. ಜನರ ಕಡೆಗೆ ಹೀಗೆ 1 ಅಥವಾ 2 ರುಪಾಯಿ ತೂರುವ ಬದಲು 2014ರಲ್ಲಿ ಪೆಟ್ರೋಲ್-ಡೀಸೆಲ್ ಯಾವ ಮಟ್ಟದಲ್ಲಿತ್ತೋ ಅಲ್ಲಿಗೆ ತರಲಿ ಎಂದು ಹೇಳಿದೆ.
ಬಿಜೆಪಿ ಅಧಿಕಾರದಲ್ಲಿ ಇರುವ ಮಹಾರಾಷ್ಟ್ರ, ಛತ್ತೀಸ್ ಗಢ, ಜಾರ್ಖಂಡ್ ಮತ್ತು ರಾಜಸ್ತಾನದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚಿನ ವ್ಯಾಟ್ (ವ್ಯಾಲ್ಯೂ ಆಡೆಡ್ ಟ್ಯಾಕ್ಸ್) ಹೇರಲಾಗುತ್ತಿದೆ. ಇಂಧನವನ್ನು ಜಿಎಸ್ ಟಿ ಅಡಿಯಲ್ಲಿ ತಂದುಬಿಡಲಿ ಎಂದು ಅವರು ಹೇಳಿದ್ದಾರೆ.

ಮಾಹಿ ಹಕ್ಕು ಕಾಯ್ದೆ ಅಡಿ ಕೇಳಿದ ಮಾಹಿತಿಗೆ ಸಿಕ್ಕಿರುವ ಪ್ರತಿಕ್ರಿಯೆ ಪ್ರಕಾರ, ನರೇಂದ್ರ ಮೋದಿ ನೇತೃತ್ವದ ಸರಕಾರವು ಭಾರತದಲ್ಲಿ ಮಾರಾಟ ಮಾಡುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯ ಅರ್ಧಕ್ಕೂ ಕಡಿಮೆ ಬೆಲೆಗೆ ಬೇರೆ ದೇಶಗಳಿಗೆ ಮಾರಿಕೊಳ್ಳುತ್ತಿದೆ. ತನ್ನದೇ ಜನರಿಗೆ ಈ ಸರಕಾರ ಹೇಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ ಎಂದು ಇದರಿಂದಲೇ ಗೊತ್ತಾಗುತ್ತಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.












Click it and Unblock the Notifications