ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ, ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಖಚಿತ ?
ನವದೆಹಲಿ, ಅಕ್ಟೋಬರ 01: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ ನಿನ್ನೆಯಷ್ಟೇ ಅವರು ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಅವರಿಗೆ ಬೆಂಬಲ ನೀಡಲು ಕಾಂಗ್ರೆಸ್ನ ಹಲವು ಪ್ರಮುಖ ನಾಯಕರು ಆಗಮಿಸಿದ್ದರು. ಹಾಗಾಗಿ ಅವರ ಗೆಲುವಿನ ಸಾಧ್ಯತೆ ತುಂಬಾ ಹೆಚ್ಚಿದೆ.
ಸುಮಾರು ಒಂದೂವರೆ ವರ್ಷಗಳ ಹಿಂದೆ ಫೆಬ್ರವರಿ 2021ರಲ್ಲಿ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಖರ್ಗೆ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಇದೀಗ ಖರ್ಗೆ ಅವರ ಸ್ಥಾನಕ್ಕೆ ಪ್ರತಿಪಕ್ಷದ ನೂತನ ನಾಯಕ ಆಯ್ಕೆಯಾಗಲಿದ್ದಾರೆ. ಹಿರಿಯ ನಾಯಕರಾದ ಪಿ ಚಿದಂಬರಂ, ದಿಗ್ವಿಜಯ್ ಸಿಂಗ್, ಕೆಸಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಈ ರೇಸ್ನಲ್ಲಿ ಭಾಗಿಯಾಗಿದ್ದಾರೆ.
ರಾಹುಲ್ ಗಾಂಧಿ ಜತೆ ಮಾತನಾಡಿ ಖರ್ಗೆ ಹೆಸರು
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ, ಮುಕುಲ್ ವಾಸ್ನಿಕ್, ಸುಶೀಲ್ ಕುಮಾರ್ ಶಿಂಧೆ ಮತ್ತು ಕುಮಾರಿ ಸೆಲ್ಜಾ ಅವರ ಹೆಸರನ್ನು ಪರಿಗಣಿಸಲಾಗಿತ್ತು. ಖರ್ಗೆ ಮತ್ತು ಶಿಂಧೆ ವಯಸ್ಸಿನ ಕಾರಣ ಮುಕುಲ್ ವಾಸ್ನಿಕ್ ಚರ್ಚೆಗೆ ಗ್ರಾಸವಾಯಿತು. ವಾಸ್ನಿಕ್ ಜೊತೆ ಮಾತನಾಡುವ ಜವಾಬ್ದಾರಿಯನ್ನು ಅಶೋಕ್ ಗೆಹ್ಲೋಟ್ ಅವರಿಗೆ ನೀಡಲಾಗಿತ್ತು. ಗುರುವಾರ ತಡರಾತ್ರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಎ.ಕೆ.ಆಂಟನಿ ಮತ್ತು ಕೆ.ಸಿ.ವೇಣುಗೋಪಾಲ್ ಸಭೆ ನಡೆದಿತ್ತು. ರಾಹುಲ್ ಗಾಂಧಿ ಅವರೊಂದಿಗೂ ಚರ್ಚೆ ನಡೆಸಿ ಖರ್ಗೆ ಅವರ ಹೆಸರನ್ನು ನಿರ್ಧರಿಸಲಾಯಿತು.
ಇದಾದ ಬಳಿಕ ಶುಕ್ರವಾರ ಕೆ.ಸಿ.ವೇಣುಗೋಪಾಲ್ ಅವರು ಪಕ್ಷದ ಎಲ್ಲ ಹಿರಿಯ ನಾಯಕರ ಜತೆ ಮಾತುಕತೆ ನಡೆಸಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಿಗೆ ಒಪ್ಪಿಗೆ ಸೂಚಿಸಿದ್ದಾರೆ. ಖರ್ಗೆಯವರ ಹೆಸರಲ್ಲಿ ಭಿನ್ನಮತೀಯ ಬಣದ ನಾಯಕರಿಗೂ ಅಭ್ಯಂತರವಿಲ್ಲ ಎಂಬುದು ಇದರ ಹಿಂದಿರುವ ಒಂದು ಕಾರಣ. ವಾಸ್ನಿಕ್ ಭಿನ್ನಮತೀಯ ಬಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ಹೈಕಮಾಂಡ್ ವಾಸ್ನಿಕ್ ಅವರ ನಿಷ್ಠೆಯ ಮೇಲೆ ಅಷ್ಟಾಗಿ ನಂಬಿಕೆ ಇಟ್ಟಿರಲಿಲ್ಲ.
ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚರ್ಚೆ
ಭಾರತ್ ಜೋಡೋ ಯಾತ್ರೆ ಆರಂಭಕ್ಕೂ ಮುನ್ನ ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಯನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ಈ ಸಭೆಯಲ್ಲಿ ಇಬ್ಬರ ಹೆಸರು ಕೇಳಿ ಬಂದಿತ್ತು. ಈ ಹೆಸರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರದ್ದಾಗಿತ್ತು. ಗಾಂಧಿ ಕುಟುಂಬದವರೂ ಈ ಹೆಸರುಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗೆಹ್ಲೋಟ್ ಮೊದಲ ಆಯ್ಕೆಯಾದರು. ಪಕ್ಷದಲ್ಲಿನ ಆಂತರಿಕ ಗೊಂದಲದ ನಂತರ ಅಂತಿಮವಾಗಿ ಖರ್ಗೆ ಅವರ ಹೆಸರನ್ನು ನಿರ್ಧರಿಸಲಾಯಿತು.