ಸಕ್ರಿಯ ರಾಜಕಾರಣದಿಂದ ಸೋನಿಯಾ ಗಾಂಧಿ ನಿವೃತ್ತಿ?
ನವದೆಹಲಿ, ಅ 9: ಭಾರತದ ರಾಜಕೀಯ ಇತಿಹಾಸದಲ್ಲಿ 'ರಾಜಕಾರಿಣಿಗಳು' ಸ್ವಯಂ ನಿವೃತ್ತಿಯಾಗುವ ಉದಾಹರಣೆಗಳು ಬಹಳ ವಿರಳ.
ಖ್ಯಾತ ಪತ್ರಕರ್ತ ಮತ್ತು ಅಂಕಣಕಾರ ರಶೀದ್ ಕಿದ್ವಾಯಿ ತಮ್ಮ ಪುಸ್ತಕದಲ್ಲಿ ಸೋನಿಯಾ ಗಾಂಧಿ ಇನ್ನೇನು ಮೂರು ವರ್ಷಗಳಲ್ಲಿ ಸಕ್ರಿಯ ರಾಜಕಾರಣದಿಂದ ದೂರ ಸರಿಯಲಿದ್ದಾರೆನ್ನುವ ವಿಷಯವನ್ನು ತಿಳಿಸಿದ್ದಾರೆ ಎಂದು ಆ ಪುಸ್ತಕವನ್ನು ಉಲ್ಲೇಖಿಸಿ ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಶೀದ್ ಅವರ '24 ಅಕ್ಬರ್ ರೋಡ್ (ಹಚೆಟ್ ಇಂಡಿಯಾ)' ಎನ್ನುವ ಪುಸ್ತಕದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ 2016ರಲ್ಲಿ ತನ್ನ ಎಪ್ಪತ್ತನೇ ಹುಟ್ಟುಹಬ್ಬದ ಸಂದರ್ಭದಲ್ಲಿ ರಾಜಕೀಯದಿಂದ ದೂರ ಸರಿಯ ಬೇಕೆನ್ನುವ ಉದ್ದೇಶವನ್ನು ಹೊಂದಿದ್ದಾರೆಂದು ರಶೀದ್ ತಮ್ಮ ಪುಸ್ತಕದಲ್ಲಿ ನಮೂದಿಸಿದ್ದಾರೆ.
ಕಳೆದ ವರ್ಷ ತನ್ನ ಹುಟ್ಟುಹಬ್ಬದ ದಿನವಾದ ಡಿಸೆಂಬರ್ 9ರಂದು ಸೋನಿಯಾ ರಾಜಕೀಯ ರಂಗದಲ್ಲಿನ ತನ್ನ ಆಪ್ತರ ಜೊತೆ ಈ ವಿಷಯ ಪ್ರಸ್ತಾಪಿಸಿದ್ದಾರೆ ಎಂದೂ ಪುಸ್ತಕದಲ್ಲಿ ಹೇಳಲಾಗಿದೆ.
ಸೋನಿಯಾ ಅವರ ಈ ನಿರ್ಧಾರಕ್ಕೆ ದಿಗ್ಭ್ರಮೆ ವ್ಯಕ್ತ ಪಡಿಸಿದ ಕಾಂಗ್ರೆಸ್ ನಾಯಕರು ಅಷ್ಟೊರೊಳಗಾಗಿ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳ ಬೇಕೆಂದು ಮೇಡಂ ಅವರಲ್ಲಿ ವಿನಂತಿಸಿ ಕೊಂಡಿದ್ದರು ಎಂದು ರಶೀದ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. (IANS)

ರಾಹುಲ್ ಗಾಂಧಿ
ಈ ಘಟನೆಯ ನಂತರ ರಾಹುಲ್ ಗಾಂಧಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಒತ್ತಡ ತರಲಾರಂಭಿಸಿದರು. ಇದಕ್ಕೆ ರಾಹುಲ್ ಗಾಂಧಿ ಪೂರಕವಾಗಿ ಸ್ಪಂಧಿಸದಿದ್ದಾಗ ಅವರಿಗೆ ಪಕ್ಷದ ಎರಡನೇ ದೊಡ್ಡ ಹುದ್ದೆ ನೀಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು ಎಂದು ಪುಸ್ತಕದಲ್ಲಿ ಬರೆಯಲಾಗಿದೆ. ಜನವರಿ 19,2013ರಂದು ಜೈಪುರದಲ್ಲಿ ನಡೆದ ಪಕ್ಷದ 'ಚಿಂತನ್ ಶಿಬಿರ್' ನಲ್ಲಿ ರಾಹುಲ್ ಗಾಂಧಿ ಪಕ್ಷದ ಉಪಾಧ್ಯಕ್ಷರಾಗಿ ಅಧಿಕೃತವಾಗಿ ಘೋಷಣೆಯಾದರು. (IANS)

ಸೋನಿಯಾ ಗಾಂಧಿ
ರಶೀದ್ ತನ್ನ ಪುಸ್ತಕದಲ್ಲಿ ಬರೆದಿರುವ ಪ್ರಕಾರ ರಾಹುಲ್ ಗಾಂಧಿ ಉಪಾಧ್ಯಕ್ಷರಾಗಿ ಆಯ್ಕೆಯಾದರೂ ಸೋನಿಯಾ ನಿವೃತ್ತಿ ಯೋಚನೆ ಮೂಲ ಕಾಂಗ್ರೆಸ್ಸಿಗರಲ್ಲಿ ಗಾಢವಾಗಿ ಕಾಡುತ್ತಿದೆ. ಸೋನಿಯಾ ನಿರ್ಧಾರದಿಂದ ಹಿರಿಯ ಕಾಂಗ್ರೆಸ್ಸಿಗರು ಈಗಲೂ ಧೈರ್ಯಹೀನರಾಗಿದ್ದಾರೆ. (IANS)

ರಾಹುಲ್ ಕಾರ್ಯವೈಖರಿ
ಹೆಸರು ಹೇಳಲಿಚ್ಚಿಸದ ಕಾಂಗ್ರೆಸ್ ನಾಯಕರೊಬ್ಬರ ಪ್ರಕಾರ, ರಾಹುಲ್ ಗಾಂಧಿಯವರ ಕಾರ್ಯವೈಖರಿ ಮತ್ತು ಕಾರ್ಯಕ್ಷಮತೆ ಹಲವರಿಗೆ ಚಿಂತೆಯಾಗಿ ಪರಿಣಮಿಸಿದೆ. ಸೋನಿಯಾ ಗಾಂಧಿಯ ತುಂಬಾ ತಾಳ್ಮೆಯಿಂದ ಪಕ್ಷವನ್ನು ಮುನ್ನಡೆಸುತ್ತಿದ್ದರು ಎನ್ನುವುದು ಇವರ ಚಿಂತೆ ಎಂದು ರಶೀದ್ ಪುಸ್ತಕದಲ್ಲಿ ನಮೂದಿಸಿದ್ದಾರೆ. (IANS)

ರಶೀದ್ ಕಿದ್ವಾಯಿ
ರಾಹುಲ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಅಂದರೆ 2007 ಮತ್ತು 2013ರಲ್ಲಿ ಅವರಿಗೆ ನಿರ್ದಿಷ್ಟವಾದ ಕಾರ್ಯತಂತ್ರ ರೂಪಿಸಿ ಪಕ್ಷವನ್ನು ಮುನ್ನೆಡೆಸಿ ಕೊಂಡು ಹೋಗುವಲ್ಲಿ ನಿರಾಶಕ್ತರಾಗಿದ್ದರು ಎಂದು ರಶೀದ್ ಪುಸ್ತಕವನ್ನು ಉಲ್ಲೇಖಿಸಿ ಐಎಎನ್ಎಸ್ ವರದಿ ಮಾಡಿದೆ. (IANS)

ಉತ್ತರಪ್ರದೇಶ ಚುನಾವಣೆ
2012ರಲ್ಲಿ ನಡೆದ ಉತ್ತರಪ್ರದೇಶ ಚುನಾವಣೆಯಲ್ಲಿ ರಾಹುಲ್ ನಾಯಕತ್ವದಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿತ್ತು. ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ರಾಹುಲ್ ಗಾಂಧಿ ತಮ್ಮನ್ನು ತೊಡಗಿಸಿ ಕೊಂಡಿದ್ದರೂ ಕಾಂಗ್ರೆಸ್ ಅಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಕಾಂಗ್ರೆಸ್ ಅಲ್ಲಿ ಕೇವಲ 28 ಸ್ಥಾನಗಳನ್ನು ಗಳಿಸಲಷ್ಟೇ ಶಕ್ತವಾಯಿತು. (IANS)












Click it and Unblock the Notifications