ಬಿಜೆಪಿ ಹೈಕಮಾಂಡಿಗೆ ಕಪ್ಪ: ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹ
ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ ಪ್ರತ್ಯಾರೋಪ ತಾರಕಕ್ಕೆರಿದೆ. ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು ಅನಂತ್ ಕುಮಾರ್ - ಯಡಿಯೂರಪ್ಪ ನಡುವಿನ ಸಂಭಾಷಣೆಯ ಸಿಡಿ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು, ಫೆಬ್ರವರಿ 13: ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ ಪ್ರತ್ಯಾರೋಪ ತಾರಕಕ್ಕೇರಿದೆ. ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು 'ಅನಂತ್ ಕುಮಾರ್ - ಯಡಿಯೂರಪ್ಪ' ನಡುವಿನ ಸಂಭಾಷಣೆಯ ಸಿಡಿ ಬಿಡುಗಡೆ ಮಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸರಕಾರ ಉರುಳಿಸಲು ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಷಡ್ಯಂತ್ರ ಹೂಡಿದ್ದಾರೆ ಎಂದು ಕೈ ನಾಯಕರು ದೂರಿದ್ದಾರೆ. ಸಿಡಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜತೆ ಅನಂತ್ ಕುಮಾರ್ ಮಾತನಾಡಿರುವ ಸಂಭಾಷಣೆಯ ರೆಕಾರ್ಡಿಂಗ್ ನ್ನು ಇದೆ. ಅನಂತ್ ಕುಮಾರ್ ಮತ್ತು ಬಿಎಸ್ ಯಡಿಯೂರಪ್ಪ ಸಂಭಾಷಣೆ ವೇಳೆ ಹೈಕಮಾಂಡಿಗೆ ಹಣ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ವಿ.ಎಸ್ ಉಗ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.[ಸಿದ್ದರಾಮಯ್ಯಗೆ 65 ಕೋಟಿ ಕಿಕ್ ಬ್ಯಾಕ್ : ಬಿಎಸ್ವೈ ಮತ್ತೊಂದು ಬಾಂಬ್]

ನ್ಯಾಯಾಂಗ ತನಿಖೆ ಆಗ್ಬೇಕು
ಬಿಜೆಪಿ ಹೈಕಮಾಂಡಿಗೆ ಕಪ್ಪ ನೀಡಿರುವುದನ್ನು ಅನಂತ್ ಕುಮಾರ್ ಮತ್ತು ಯಡಿಯೂರಪ್ಪ ಬಿಜೆಪಿ ಕಾರ್ಯಕಾರಿಣಿ ಸಂಭಾಷಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣವನ್ನು ಹಾಲಿ ಸುಪ್ರಿಂ ಕೋರ್ಟಿನ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ದಾಖಲೆ ನೀಡಿ
ಕಾಂಗ್ರೆಸ್ ಹೈಕಮಾಂಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 1,000 ಕೋಟಿ ಕಪ್ಪ ನೀಡಿದ್ದಾರೆ ಎಂದು ಯಡಿಯೂರಪ್ಪ ಆರೋಪ ಮಾಡಿದ್ದಾರೆ. ಯಡಿಯೂರಪ್ಪನವರು ರಾಜ್ಯದ ಜನತೆಯ ಮುಂದೆ 24 ಗಂಟೆಯೊಳಗೆ ದಾಖಲೆ ಇಡಬೇಕು ಎಂದು ವಿ.ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ.

ಹಗಲು ದರೋಡೆ
ಯಡಿಯೂರಪ್ಪ ಆಡಳಿತಾವಧಿಯಲ್ಲಿ ಹಗಲು ದರೋಡೆ ನಡೆದಿದೆ. ಅಕ್ರಮ ಗಣಿಗಾರಿಕೆ, ಕೆಐಎಡಿಬಿ, ಬಿಡಿಎಯಿಂದ 1 ಲಕ್ಷ ಕೋಟಿ ಲೂಟಿ ಹೊಡೆದಿದ್ದಾರೆ. ಇದರಲ್ಲಿ ಹೈಕಮಾಂಡಿಗೆ ಕಪ್ಪ ಹೋಗಿದೆಯೇ ಎಂಬುದು ತಿಳಿಯಬೇಕು. ಸಿದ್ದರಾಮಯ್ಯನವರ ಆಡಳಿತಾವಧಿಯಲ್ಲಿ ಮಾತ್ರ ಒಂದೇ ಒಂದು ರೂಪಾಯಿಯನ್ನೂ ಹೈಕಮಾಂಡಿಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಐಟಿ, ಇಡಿ ಬಿಜೆಪಿ ಅಂಗವೋ?
ಯಡಿಯೂರಪ್ಪ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೋ, ಇಲ್ಲ ಆದಾಯ ತೆರಿಗೆ ಇಲಾಖೆ ಬಿಜೆಪಿಯ ಅಂಗವೋ ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ. ಐಟಿ ಮತ್ತು ಇಡಿಯ ದಾಖಲೆಗಳು ಹೇಗೆ ಸೋರಿಕೆಯಾಗುತ್ತವೆ? ಅಪನಗದೀಕರಣ, ಭ್ರಷ್ಟಾಚಾರ, ಕಪ್ಪುಹಣದ ಬಗ್ಗೆ ಮಾತನಾಡುವ ಪ್ರಧಾನಿಗಳು ಈ ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಯಡಿಯೂರಪ್ಪ ಇತಿಹಾಸ ಗೊತ್ತು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮತ್ತೊಬ್ಬ ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ, ಇಡೀ ದೇಶಕ್ಕೆ ಯಡಿಯೂರಪ್ಪನವರ ಇತಿಹಾಸ ಗೊತ್ತು. ಅವರ ಅಧಿಕಾರಾವಧಿಯಲ್ಲಿ ನಡೆದ ಭ್ರಷ್ಟಾಚಾರ, ಅವರ ಸಂಪುಟದ ಮಂತ್ರಿಗಳು ಮಾಡಿದ ಅನಾಚಾರ, ಅತ್ಯಾಚಾರಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ರಾಜ್ಯದಲ್ಲೇ ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋದ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಕಿಡಿಕಾರಿದವರು.

ನಾಚಿಕೆಗೇಡು
ಯಡಿಯೂರಪ್ಪ ಬೇಜಾವಬ್ದಾರಿಯ ಹೇಳಿಕೆ ನೀಡಿದ್ದಾರೆ. ಸಿದ್ಧರಾಮಯ್ಯ ಹೈಕಮಾಂಡಿಗೆ 1,000 ಕೋಟಿ ರೂಪಾಯಿ ನೀಡಿದ್ದಾರೆ ಎಂದು ಹೇಳಿರುವುದು ಅವರ ಹತಾಶೆಯ ಪರಮಾವಧಿ. ಸಿದ್ದರಾಮಯ್ಯ ಸರಕಾರದ ಮೂರೂವರೆ ವರ್ಷದ ಆಡಳಿತ ನೋಡಲಾರದೆ ಹೀಗೆ ಟೀಕೆ ಮಾಡುತ್ತಿದ್ದಾರೆ. ಅವರ ಮೇಲೆಯೇ ಭ್ರಷ್ಟಾಚಾರದ ಆರೋಪ ಇದ್ದು ಇನ್ನೊಬ್ಬರ ವಿರುದ್ಧ ಆಧಾರಗಳಿಲ್ಲದೆ ಆರೋಪ ಮಾಡುವ ಯಾವ ನೈತಿಕತೆ ಅವರಿಗಿದೆ ಎಂದು ರಾಯರೆಡ್ಡಿ ಪ್ರಶ್ನಿಸಿದರು.

ಕಾನೂನು ಬಾಹಿರ
ಯಡಿಯೂರಪ್ಪ ದಾಖಲೆಗಳಿದ್ದರೆ ಬಿಡುಗಡೆ ಮಾಡಬೇಕು. ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮನೆ ಮೇಲೆ ದಾಳಿ ನಡೆಸಿದ ಸಂದರ್ಭ ಡೈರಿ ವಶಕ್ಕೆ ಪಡೆದಿದ್ದು, ಸ್ಟೀಲ್ ಫ್ಲೈ ಓವರ್ ನಿರ್ಮಾಣದಲ್ಲಿ ಕಮಿಷನ್ ಪಡೆಯಲಾಗಿದೆ ಎಂದು ಆರೋಪ ಮಾಡಿದರೆ ಸಾಲದು. ದಾಳಿಯಲ್ಲಿ ವಶಕ್ಕೆ ಪಡೆದ ದಾಖಲೆಗಳನ್ನು ಮೂರನೇ ವ್ಯಕ್ತಿಗೆ ನೀಡುವುದು ಕಾನೂನು ಬಾಹಿರವಾಗಿದೆ. ಅವರಿಗೆ ಡೈರಿಯ ಮಾಹಿತಿ ಸಿಕ್ಕಿದ್ದೇಗೆ? ಎಂದು ರಾಯರೆಡ್ಡಿ ಪ್ರಶ್ನಿಸಿದರು.

ತೇಜೋವಧೆ ಭೂಷಣವಲ್ಲ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಆರ್ ರಮೇಶ್ ಕೂಡಾ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ತಾವು ಜೈಲಿಗೆ ಹೋಗಿ ಅನುಭವಿಸಿದ ನೋವನ್ನು ಯಡಿಯೂರಪ್ಪ ಇನ್ನೊಬ್ಬರಿಗೂ ನೀಡುವುದೆಷ್ಟು ಸರಿ? ಓರ್ವ ಮಾಜಿ ಮುಖ್ಯಮಂತ್ರಿಯಾಗಿ ಕೇವಲ ರಾಜಕಾರಣಕ್ಕಾಗಿ ವ್ಯಕ್ತಿಯ ತೇಜೋವಧೆ ಮಾಡುವುದು ಸರಿಯಲ್ಲ. ಒಂದೊಮ್ಮೆ ಯಡಿಯೂರಪ್ಪ ಹೇಳಿದಂತೆ ಹೈಕಮಾಂಡಿಗೆ ಕಪ್ಪ ನೀಡಿರುವುದು ಸಾಬೀತಾದರೆ ಸಿದ್ಧರಾಮಯ್ಯ ಒಂದು ಕ್ಷಣವೂ ಕುರ್ಚಿಯಲ್ಲಿರುವುದಿಲ್ಲ ಎಂದು ರಮೇಶ್ ಕುಮಾರ್ ಹೇಳಿದರು.
ವಿಧಾನ ಸೌಧದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಚ್.ಎಂ ರೇವಣ್ಣ, ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್, ಎಂ.ಬಿ ಪಾಟೀಲ್, ಈಶ್ವರ್ ಖಂಡ್ರೆ ಉಪಸ್ಥಿತರಿದ್ದರು.












Click it and Unblock the Notifications