ಮುಂದುವರಿದ ಕಾಂಗ್ರೆಸ್ ನಾಯಕರ ನಿಂದನೆ; 'ಹುಚ್ಚ ಮೋದಿ' ಎಂದ ಅಧೀರ್ ರಂಜನ್ ಚೌಧರಿ
ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಸದ ಅಧೀರ್ ರಂಜನ್ ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನೆ ಮುಂದುವರೆಸಿದ್ದಾರೆ. ಟೀಕಿಸುವ ಭರದಲ್ಲಿ ಪಗ್ಲಾ ಮೋದಿ (ಹುಚ್ಚ ಮೋದಿ) ಎಂದು ನಿಂದಿಸುವ ಮೂಲಕ ಮತ್ತೊಂದು ವಿವಾದ ಮೈಮೇಲೆಳೆದುಕೊಂಡಿದ್ದಾರೆ.
ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೆಯೇ ಅಧೀರ್ ರಂಜನ್ ಚೌಧರಿ ಸ್ಪಷ್ಟನೆ ನೀಡಿದ್ದು, ನಾನು ಸಾರ್ವಜನಿಕರಲ್ಲಿ 2 ಸಾವಿರ ರೂ. ನೋಟು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಯಾವ ಭಾವನೆ ಇದೆ ಎನ್ನುವುದನ್ನು ತಿಳಿಸಲು ಪ್ರಯತ್ನಿಸಿದೆ. ಅದರ ಹೊರತಾಗಿ ಬೇರೆ ಯಾವುದೇ ಉದ್ದೇಶವಿರಲಿಲ್ಲ ಎಂದು ತಿಳಿಸಿದ್ದಾರೆ.

ಆರ್ಬಿಐ ಕಳೆದ ವಾರ 2 ಸಾವಿರ ರೂ. ನೋಟು ಹಿಂತೆಗೆದುಕೊಳ್ಳುವ ಬಗ್ಗೆ ಆದೇಶ ಹೊರಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಧೀರ್ ರಂಜನ್ ಚೌಧರಿ, "ಅವರು ಕೇವಲ ಮೋದಿಯಲ್ಲಿ ಹುಚ್ಚ ಮೋದಿ (ಪಗ್ಲಾ ಮೋದಿ), ಜನರು ಅವರನ್ನು ಅದೇ ರೀತಿ ಕರೆಯುತ್ತಾರೆ," ಎಂದು ಹೇಳಿದ್ದರು.
ಇನ್ನು ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿ ಕುರಿತು ಮಾತನಾಡಿದ ಅಧೀರ್ ರಂಜನ್ ಚೌಧರಿ, "ದೇಶದ ಜನರಲ್ಲಿ ನರೇಂದ್ರ ಮೋದಿ ಬಗ್ಗೆ ಹತಾಶೆ ಹೆಚ್ಚುತ್ತಿದೆ. ಜನರು ಮೋದಿಯನ್ನು ಪಾಗಲ್ ಎಂದು ಕರೆಯುತ್ತಿದ್ದಾರೆ. ಸಾರ್ವಜನಿಕರು ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದೇ ವೇಳೆ ಎಎಪಿ ಮತ್ತು ಟಿಎಂಸಿಯಂತಹ ಪಕ್ಷಗಳು ಪ್ರಸ್ತುತೆಯನ್ನು ಮರಳಿ ಪಡೆಯಲು ಯತ್ನಿಸುತ್ತಿವೆ," ಎಂದು ತಿಳಿಸಿದರು.

ಅಧೀರ್ ರಂಜನ್ ಚೌಧರಿ ಅವರ ಮೋದಿ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್, "ಅಧೀರ್ ರಂಜನ್ ಚೌಧರಿ ಅವರು ಪದೇ ಪದೇ ತಪ್ಪು ಮಾಡುವ ವ್ಯಕ್ತಿ. ತಮ್ಮ ಹೇಳಿಕೆಗೆ ಕೂಡಲೇ ಕ್ಷಮೆ ಕೇಳಬೇಕು," ಆಗ್ರಹಿಸಿದರು.
"ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಪ್ರಧಾನಿ ಮೋದಿ ಅವರನ್ನು ಮತ್ತೆ ನಿಂದಿಸಿ "ಪಗ್ಲಾ ಮೋದಿ' ಎಂದು ಕರೆದಿದ್ದಾರೆ. ಪದೇ ಪದೇ ಪ್ರಧಾನಿ ವಿರುದ್ಧ ನಿಂದನೀಯ ಪದಗಳನ್ನು ಬಳಸುತ್ತಿದ್ದಾರೆ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಅವರು ತಕ್ಷಣವೇ ಕ್ಷಮೆಯಾಚಿಸಬೇಕು," ಎಂದು ಸುಕಾಂತ ಮಜುಂದಾರ್ ಒತ್ತಾಯಿಸಿದ್ದಾರೆ.
ಸದ್ಯ ಚಲಾವಣೆಯಲ್ಲಿರುವ ಅತಿ ಹೆಚ್ಚು ಮೌಲ್ಯದ ಕರೆನ್ಸಿ ನೋಟುಗಳನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕ್ರಮದ ಬಗ್ಗೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಇದನ್ನು 2016ರಲ್ಲಿ ನರೇಂದ್ರ ಮೋದಿ ಸರ್ಕಾರದ ನೋಟು ಅಮಾನ್ಯೀಕರಣದ ನಿರ್ಧಾರಕ್ಕೆ ಹೋಲಿಸಿದ್ದಾರೆ. 2 ಸಾವಿರ ರೂಪಾಯಿ ನೋಟಿನ ಹಿಂಪಡೆಯುವಿಕೆ ಸಾಮಾನ್ಯ ಜನರಿಗೆ ಮತ್ತೊಮ್ಮೆ ಸಂಕಷ್ಟ ತರಲಿದೆ ಎಂದು ಟೀಕಿಸಿದ್ದಾರೆ.












Click it and Unblock the Notifications