ಸೋನಿಯಾ, ರಾಹುಲ್ ವಿರುದ್ದ ಕಾಂಗ್ರೆಸ್ಸಿಗರ ಮಸಲತ್ತು!
ಲಕ್ನೋ, ದೆಹಲಿ (ಪಿಟಿಐ), ಜು 17: ಸದಾ ವಿವಾದವನ್ನು ಮೈಗೆಳೆದುಕೊಳ್ಳುವ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಬೇನಿ ಪ್ರಸಾದ್ ವರ್ಮಾ ಪಕ್ಷ ಮುಜುಗರಕ್ಕೊಳಗಾಗುವ ಹೇಳಿಕೆಯೊಂದನ್ನು ನೀಡಿದ್ದಾರೆ.
ಪಕ್ಷದ ಹಿರಿಯ ಮುಖಂಡರೇ ಸೋನಿಯಾ ಗಾಂಧಿ ಕುಟುಂಬದ ವಿರುದ್ದ ಮಸಲತ್ತು ನಡೆಸುತ್ತಿದ್ದಾರೆ. ಹೊಗಳುಭಟ್ಟರಂತೆ ವರ್ತಿಸುತ್ತಿದ್ದ ಇವರುಗಳು ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಪ್ರಮುಖವಾಗಿ ರಾಹುಲ್ ಗಾಂಧಿ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದು ಬೇನಿ ಪ್ರಸಾದ್ ಹೇಳಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರೇ ಸೋನಿಯಾ ಕುಟುಂಬದ ವಿರುದ್ದ ಅಪಪ್ರಚಾರ ನಡೆಸುತ್ತಿದ್ದಾರೆ. ಪಕ್ಷ ಇಂದು ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕಾದ ಈ ಮುಖಂಡರು ರಾಹುಲ್ ವಿರುದ್ದ ಮಸಲತ್ತು ನಡೆಸುತ್ತಿರುವುದು ಖಂಡನೀಯ ಎಂದು ಬೇನಿ ಪ್ರಸಾದ್ ತಮ್ಮ ಪಕ್ಷದ ಕೆಲವು ನಾಯಕರ ವಿರುದ್ದ ಕಿಡಿಕಾರಿದ್ದಾರೆ.
2012ರಲ್ಲಿ ಕೆಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟನ್ನು ಮಾರಾಟ ಮಾಡಿದ ಈ ಮುಖಂಡರು ಅಗಾಧ ಹಣ ಸಂಪಾದಿಸಿದ್ದಾರೆ. ಈಗ ಅಧಿಕಾರ ಇಲ್ಲ, ಹಾಗಾಗಿ ರಾಹುಲ್ ಗಾಂಧಿ ವಿರುದ್ದ ತಂತ್ರಗಾರಿಕೆ ಹಣೆಯುತ್ತಿದ್ದಾರೆಂದು ಬೇನಿ ಪ್ರಸಾದ್ , ತಮ್ಮ ಪಕ್ಷದ ಮುಖಂಡರನ್ನು ಪರೋಕ್ಷವಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ.
ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರಕಾರ ಸದ್ಯದಲ್ಲೇ ಸಂಕಷ್ಟವನ್ನು ಎದುರಿಸಲಿದೆ. ಈ ಬಗ್ಗೆ ಈಗಾಗಲೇ ಮುಲಾಯಂ ಸಿಂಗ್ ಯಾದವ್ ಅವರಿಗೆ ಸುಳಿವನ್ನು ನೀಡಿದ್ದೇನೆ ಎಂದು ಬೇನಿ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಪದತ್ಯಾಗದ ಬೇಡಿಕೆ ಇಡುತ್ತಿರುವ ಕಾಂಗ್ರೆಸ್ಸಿಗರು
ರಾಹುಲ್ ಗಾಂಧಿಯವರನ್ನು ಮನಸೋ ಇಚ್ಚೆ ಹೊಗಳುತ್ತಿದ್ದ ನಮ್ಮ ಪಕ್ಷದ ಕೆಲವು ಮುಖಂಡರು ಈಗ ಅವರ ಪದತ್ಯಾಗಕ್ಕೆ ಬೇಡಿಕೆ ಇಡುತ್ತಿದ್ದಾರೆ. ಅಧಿಕಾರ ಶಾಸ್ವತವಲ್ಲ, ನಮಗೆ ಎಲ್ಲಾ ನೀಡಿದ ಪಕ್ಷ ಮುಖ್ಯ ಎನ್ನುವುದು ಮುಂದಿನ ದಿನದಲ್ಲಿ ಅವರಿಗೆ ಅರಿವಾಗಲಿದೆ - ಬೇನಿ ಪ್ರಸಾದ್ ವರ್ಮಾ.

ಮಾಧ್ಯಮದ ಪ್ರಶ್ನೆಗೆ ನೇರ ಉತ್ತರವಿಲ್ಲ
ಸೋನಿಯಾ ಕುಟುಂಬದ ವಿರುದ್ದ ಮಸಲತ್ತು ನಡೆಸುತ್ತಿರುವವರು ಯಾರು ಎನ್ನುವ ಮಾಧ್ಯಮದವರ ಪ್ರಶ್ನೆಗೆ ನೇರವಾಗಿ ಉತ್ತರಿಸದ ಬೇನಿ ಪ್ರಸಾದ್, ಈ ನಾಯಕರು ಯಾರು ಎನ್ನುವುದು ಪಕ್ಷದಲ್ಲಿ ಎಲ್ಲರಿಗೂ ತಿಳಿದಿರುವ ವಿಚಾರ, ಪ್ರಮುಖವಾಗಿ ಹೈಕಮಾಂಡಿಗೆ ಈ ವಿಚಾರ ತಿಳಿದಿದೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಹೊರಬೀಳಲಿದೆ ಎಂದು ಬೇನಿ ಪ್ರಸಾದ್ ಹೇಳಿದ್ದಾರೆ.

ಮೋದಿಗೆ ಸರಿಸಾಟಿಯೆಂದರೆ ರಾಹುಲ್ ಮಾತ್ರ
ರಾಷ್ಟ್ರಮಟ್ಟದಲ್ಲಿ ನರೇಂದ್ರ ಮೋದಿಗೆ ಪೈಪೋಟಿ ನೀಡಬಲ್ಲವರೆಂದರೆ ಅದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತ್ರ. ರಾಹುಲ್ ಗಾಂಧಿಗೆ ರಾಜಕೀಯವಾಗಿ ಮತ್ತು ದೇಶದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಉತ್ತಮ ಜ್ಞಾನವಿದೆ ಎಂದು ಬೇನಿ ಪ್ರಸಾದ್ ತನ್ನ ನಾಯಕನನ್ನು ಹೊಗಳಿದ್ದಾರೆ.

ಅಖಿಲೇಶ್ ರಾಜೀನಾಮೆ ನೀಡಲಿ
ಅಖಿಲೇಶ್ ಯಾದವ್ ಅವರ ರಾಜೀನಾಮೆಯನ್ನು ಮುಲಾಯಂ ಆದಷ್ಟು ಶೀಘ್ರವಾಗಿ ತೆಗೆದುಕೊಳ್ಳದೇ ಇದ್ದ ಪಕ್ಷದಲ್ಲಿ ಸಮಾಜವಾದಿ ಪಕ್ಷದ ಭವಿಷ್ಯ ಅಧೋಗತಿಗೆ ಇಳಿಯಲಿದೆ. ಈ ವಿಷಯವನ್ನು ಈಗಾಗಲೇ ಮುಲಾಯಂ ಅವರ ಬಳಿ ಚರ್ಚಿಸಿದ್ದೇನೆ. ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಚಾರ ಅವರಿಗೆ ಬಿಟ್ಟಿದ್ದು - ಬೇನಿ ಪ್ರಸಾದ್ ವರ್ಮಾ.

ಅಮಿತ್ ಶಾ ಕೈಯಲ್ಲಿದೆ ಅಖಿಲೇಶ್ ಭವಿಷ್ಯ
ಸಮಾಜವಾದಿ ಪಕ್ಷದ ಐವತ್ತು ಶಾಸಕರು ಬಿಜೆಪಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಎಸ್ಪಿ ಸರಕಾರ ಪತನಗೊಳ್ಳುವ ಸಾಧ್ಯತೆಯಿದೆ. ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಬಯಸಿದ ದಿನ ಅಖಿಲೇಶ್ ಸರಕಾರದ ಅಂತ್ಯವಾಗಲಿದೆ ಎಂದು ಬೇನಿ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications