Haryana Assembly Election 2024: ಚುನಾವಣೆ ಹೊತ್ತಲ್ಲೇ 13 ಮಂದಿಗೆ ಕಾಂಗ್ರೆಸ್ ಗೇಟ್ ಪಾಸ್
ಹರಿಯಾಣ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲೇ ಕಾಂಗ್ರೆಸ್ ಹರಿಯಾಣದ ಮಂದಿಗೆ ಶಾಕ್ ನೀಡಿದೆ. ಇಂದು ದಿಢೀರನೆ ಪಕ್ಷದ 13 ನಾಯಕರನ್ನು ಆರು ವರ್ಷಗಳ ಕಾಲ ಉಚ್ಚಾಟಿಸಿದೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಕಾಂಗ್ರೆಸ್ ಈ ನಿರ್ಧಾರ ತೆಗೆದುಕೊಂಡಿದೆ.
ಇವರು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುವುದು ಸೇರಿದಂತೆ ಹಲವು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದಿದೆ ಎಂದು ಹರಿಯಾಣ ಕಾಂಗ್ರೆಸ್ ಇಂದು ನೋಟಿಸ್ನಲ್ಲಿ ತಿಳಿಸಿದೆ.

ಸದ್ಯ ಹತ್ತಿರದಲ್ಲಿರುವ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧವೇ ಇವರು ತಂತ್ರ ರೂಪಿಸಲು ಮುಂದಾಗಿದ್ದರು. ಅಲ್ಲದೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲೂ ಇವರ ಹೆಸರು ಕೇಳಿಬಂದಿದ್ದರಿಂದ ಈ ಕುರಿತು ರಾಜ್ಯ ಕಾಂಗ್ರೆಸ್ ಅವರ ಹೆಸರನ್ನು ಪಟ್ಟಿ ಮಾಡಿತ್ತು.
ಹಾಗಾಗಿ, ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 6 ವರ್ಷಗಳ ಕಾಲ ಅವರನ್ನು ಕಾಂಗ್ರೆಸ್ನಿಂದ ಉಚ್ಚಾಟಿಸಲಾಗಿದೆ ಎಂದು ಹರಿಯಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಉದಯ್ ಭಾನ್ ನೋಟಿಸ್ನಲ್ಲಿ ತಿಳಿಸಿದ್ದಾರೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ನಲ್ಲಿ ಆಂತರಿಕ ಕಚ್ಚಾಟದ ಹೆಚ್ಚಾದ ನಂತರ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.

ಅದರಂತೆ ಕಾಂಗ್ರೆಸ್ ನಾಯಕರಾಗಿದ್ದ ನರೇಶ್ ದಂಡೆ, ಪರ್ದೀಪ್ ಗಿಲ್, ಸಜ್ಜನ್ ಸಿಂಗ್ ಧುಲ್, ದಯಾಳ್ ಸಿಂಗ್ ಸಿರೋಹಿ, ನಿತು ಮಾನ್ ಮತ್ತು ಅನಿತಾ ಧುಲ್ ಬದ್ಸಿಕ್ರಿ, ವಿಜಯ್ ಜೈನ್, ದಿಲ್ಬಾಗ್ ಸಂದಿಲ್, ಸುನೀತಾ ಬಟ್ಟನ್, ರಾಜೀವ್ ಮುಮುರಾಮ್ ಗೊಂಡರ್, ಅಜಿತ್ ಫೋಗಟ್, ಅಭಿಜೀತ್ ಸಿಂಗ್, ಸತ್ಬೀರ್ ರಾಟೇರಾ ಅವರನ್ನು ಪಕ್ಷದಿಂದ ತಕ್ಷಣವೇ ಉಚ್ಚಾಟಿಸಲಾಗಿದೆ.
ಕಾಂಗ್ರೆಸ್ ಈಗಾಗಲೇ ಹರಿಯಾಣದಲ್ಲಿ ಭರ್ಜರಿ ಪ್ರಚಾರಕ್ಕೆ ಧುಮುಕಿದ್ದು, ಕರ್ನಾಟಕದ ಮಾದರಿಯಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆ ಕೂಡ ನೀಡಿದೆ. ಮತ್ತೊಂದೆಡೆ ಬಿಜೆಪಿ ಕೂಡ ಸರಣಿ ಪ್ರಚಾರ ನಡೆಸುವ ಪ್ರತಿತಂತ್ರ ರೂಪಿಸುತ್ತಿದೆ. ಆಮ್ ಆದ್ಮಿ ಪಕ್ಷ ಕೂಡ ಎರಡು ಪಕ್ಷಗಳಿಗೆ ಟಕ್ಕರ್ ಕೊಡಲು ಮುಂದಾಗಿದ್ದು, ನಮ್ಮ ಬೆಂಬಲವಿಲ್ಲದೆ ಹರಿಯಾಣದಲ್ಲಿ ಮುಂದಿನ ಸರ್ಕಾರ ಅಧಿಕಾರಕ್ಕೆ ಬರೋದಿಲ್ಲ ಎಂಬ ವಿಶ್ವಾಸದಲ್ಲಿದೆ.
ಇತ್ತೀಚೆಗೆ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ, ಬಿಜೆಪಿಯವರು ಎಲ್ಲ ರಂಗದಲ್ಲೂ ಹರಿಯಾಣದಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಮತದಾರರು ಈ ಚುನಾವಣೆಯಲ್ಲಿ ಮೊದಲಿಗೆ ಬಿಜೆಪಿಯನ್ನು ಹೊರಹಾಕುವತ್ತ ಗಮನ ಹರಿಸಿದ್ದಾರೆ. ಇದೇ ಸಮಯದಲ್ಲಿ ಹರಿಯಾಣದ ಜನರು ನಮ್ಮ ಕಾಂಗ್ರೆಸ್ ಅನ್ನು ಬೆಂಬಲಿಸಲು ಮನಸ್ಸು ಮಾಡಿದ್ದಾರೆ ಎಂದಿದ್ದರು.
ಹರಿಯಾಣದ ಮಾಜಿ ಸಚಿವರೂ ಹಾಗೂ ಕಾಂಗ್ರೆಸ್ನ ಹಾಲಿ ರಾಜ್ಯಸಭಾ ಸಂಸದರಾಗಿರುವ ರಣದೀಪ್ ಸುರ್ಜೆವಾಲಾ ಅವರು ಕೈತಾಲ್ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಅಲ್ಲಿ ಅವರ ಮಗ ಆದಿತ್ಯ ಸುರ್ಜೆವಾಲಾ ಕೂಡ ಸ್ಪರ್ಧಿಸುತ್ತಿರುವುದು ಗಮನ ಸೆಳೆದಿದೆ. ಬಿಜೆಪಿ ಜೊತೆಗಿನ ಮತದಾರರ ಅಸಮಾಧಾನವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಪಕ್ಷವು ಸಿದ್ಧವಾಗಿದೆ. ಹಾಗಾಗಿ ಸಣ್ಣ ಪಕ್ಷಗಳ ಪ್ರಭಾವವನ್ನು ಇದು ಮರೆಮಾಡುತ್ತದೆ ಎಂದು ಸುರ್ಜೆವಾಲಾ ಹೇಳಿದ್ದರು.












Click it and Unblock the Notifications