'ಹಾವುಗಳ' ಸಹವಾಸಕ್ಕಿಂತ ವಿರೋಧ ಪಕ್ಷದಲ್ಲಿ ಕೂರುವುದೇ ವಾಸಿ: ಮಾಯಾವತಿ
ರಾಯ್ ಪುರ, ನವೆಂಬರ್ 16: ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಜತೆಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ವಿರೋಧ ಪಕ್ಷದ ಸ್ಥಾನದಲ್ಲಿಯೇ ಕೂರುವುದು ಉತ್ತಮ ಎಂದು ಉತ್ತರ ಪ್ರದೇಶದ ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.
ಕಾಂಗ್ರೆಸ್ ಮತ್ತಿ ಬಿಜೆಪಿಯನ್ನು ಅವರು 'ಸಾನ್ಪ್ನಾತ್ ಮತ್ತು ನಾಗನಾಥ್' (ಎರಡೂ ಹಾವುಗಳು) ಎಂದು ಅವರು ಹೋಲಿಸಿದ್ದಾರೆ.
ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದ ಮಾಯಾವತಿ, ಬಳಿಕ ಅದರಿಂದ ಹಠಾತ್ತಾಗಿ ಹಿಂದಕ್ಕೆ ಸರಿದಿದ್ದರು. ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷವೂ ಬಡವರು, ನಿರ್ಗತಿಕರು, ರೈತರು ಮತ್ತು ಕಾರ್ಮಿಕರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ವಿಧಾನಸಭೆ ಚುನಾವಣೆಗಳು ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಅವರು ಘೋಷಿಸಿದ್ದಾರೆ. ಆದರೆ, ಛತ್ತೀಸ್ ಗಢದಲ್ಲಿ ಅವರು, ಕಾಂಗ್ರೆಸ್ನ ಬಂಡಾಯ ನಾಯಕ ಮತ್ತು ರಾಜ್ಯದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಜತೆ ಕೈಜೋಡಿಸಿದ್ದಾರೆ.
ನಾವು ಸಂಪೂರ್ಣ ಬಹುಮತದೊಂದಿಗೆ ಜಯಗಳಿಸುವ ಭರವಸೆ ಇದೆ. ಹೀಗಾಗಿ ಯಾರದ್ದೇ ಬೆಂಬಲ ಪಡೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ನಮಗೆ ಬಹುಮತ ಬರದೇ ಇದ್ದರೆ ನಾವು ವಿರೋಧಪಕ್ಷದ ಸ್ಥಾನದಲ್ಲಿ ಕೂರುತ್ತೇವೆಯೇ ವಿನಾ, ಬಿಜೆಪಿ ಅಥವಾ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗುವುದಿಲ್ಲ ಎಂದಿದ್ದಾರೆ.












Click it and Unblock the Notifications