ಕಾಂಗ್ರೆಸ್ ನಾಯಕರ ಟ್ವಿಟ್ಟರ್ ಖಾತೆ ಲಾಕ್: ಸಂಸ್ಥೆ ಕೊಟ್ಟ ಸ್ಪಷ್ಟನೆ ಏನು?
ನವದೆಹಲಿ, ಆಗಸ್ಟ್ 12: ಎಲ್ಲರಿಗೂ ನಿಷ್ಪಕ್ಷಪಾತವಾಗಿ, ನ್ಯಾಯಯುತವಾಗಿ ನಿಯಮಗಳು ಅನ್ವಯವಾಗುತ್ತವೆ ಎಂದು ಟ್ವಿಟ್ಟರ್ ಸಂಸ್ಥೆ ಹೇಳಿದೆ. ಐದು ಮಂದಿ ಕಾಂಗ್ರೆಸ್ ನಾಯಕರ ಖಾತೆಗಳನ್ನು ತಡೆಹಿಡಿದಿರುವ ಕ್ರಮದ ಬಗ್ಗೆ ಟ್ವಿಟ್ಟರ್ ಸ್ಪಷ್ಟನೆ ನೀಡಿದೆ.
ಈ ಕುರಿತು ಹೇಳಿಕೆ ನೀಡಿರುವ ಟ್ವಿಟ್ಟರ್ ವಕ್ತಾರ, ಸೋಷಿಯಲ್ ಮೀಡಿಯಾದ ನಿಯಮಗಳನ್ನು ಮೀರಿದ ಯಾರೇ ಆದರೂ ಅವರ ವಿರುದ್ಧ ಸೂಕ್ತ ಕ್ರಮ ಪೂರ್ವಭಾವಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಖಾತೆಗಳನ್ನು ನಿರ್ಬಂಧಿಸುವ ಹಿಂದಿನ ಕಾರಣವನ್ನು ಉಲ್ಲೇಖಿಸಿರುವ ಸಂಸ್ಥೆ, ಲೈಂಗಿಕ ದೌರ್ಜನ್ಯಕ್ಕೊಳಗಾದವರ (ಮತ್ತು ಅಪ್ರಾಪ್ತ ವಯಸ್ಕರ) ಹೆತ್ತವರ ಗುರುತನ್ನು ಬಹಿರಂಗಪಡಿಸುವ ಆಪಾದಿತ ವಿಷಯದ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಎಚ್ಚರಿಸಿತ್ತು, ಭಾರತೀಯ ಕಾನೂನಿನಡಿಯಲ್ಲಿ ನಾವು ಟ್ವಿಟ್ಟರ್ ನೀತಿ-ನಿಯಮಗಳನ್ನು ಮತ್ತೆ ಪರಾಮರ್ಶಿಸಿದೆವು.
ನಮ್ಮ ಸಹಾಯ ಕೇಂದ್ರದಲ್ಲಿ ವಿವರಿಸಿದಂತೆ, ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಖಾತೆದಾರರಿಗೆ ಸೂಚನೆ ನೀಡುತ್ತೇವೆ, ಅವರು ಇನ್ನೂ ಆ ಟ್ವೀಟ್ ಅಳಿಸದೇ ಇದ್ದಲ್ಲಿ, ಖಾತೆಯನ್ನು ತಡೆಹಿಡಿಯುತ್ತೇವೆ ಎಂದು ವಿವರಿಸಿದ್ದಾರೆ.

ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರ ಟ್ವಿಟ್ಟರ್ ಖಾತೆಗಳನ್ನು ತಡೆಹಿಡಿದ ನಂತರ ಇಂದು ಕಾಂಗ್ರೆಸ್ ಅಧಿಕೃತ ಖಾತೆಯನ್ನು ಸಹ ತಡೆಹಿಡಿಯಲಾಗಿದೆ.
ನಮ್ಮ ಸೇವೆಯಲ್ಲಿರುವ ಎಲ್ಲರಿಗೂ ಟ್ವಿಟರ್ ನಿಯಮಗಳನ್ನು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಜಾರಿಗೊಳಿಸಲಾಗಿದೆ. ನಮ್ಮ ನಿಯಮಗಳನ್ನು ಉಲ್ಲಂಘಿಸುವಂತಹ ಚಿತ್ರವನ್ನು ಪೋಸ್ಟ್ ಮಾಡಿದ ಹಲವಾರು ಟ್ವೀಟ್ಗಳ ಮೇಲೆ ನಾವು ಪೂರ್ವಭಾವಿಯಾಗಿ ಕ್ರಮ ಕೈಗೊಂಡಿದ್ದೇವೆ, ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ.
ಕೆಲವು ರೀತಿಯ ಖಾಸಗಿ ಮಾಹಿತಿಗಳು ಹೆಚ್ಚಿನ ಅಪಾಯಗಳನ್ನು ಹೊಂದಿರುತ್ತದೆ. ನಮ್ಮ ಗುರಿ ಯಾವಾಗಲೂ ವ್ಯಕ್ತಿಗಳ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸುವುದಾಗಿರುತ್ತದೆ ಎಂದು ವಕ್ತಾರರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಅಜಯ್ ಮಾಕೆನ್, ಮಾಣಿಕ್ಕಂ ಟಾಗೋರ್, ಜಿತೇಂದ್ರ ಸಿಂಗ್, ಸುಶ್ಮಿತಾ ದೇವ್ ಅವರ ಟ್ವಿಟ್ಟರ್ ಲಾಕ್ ಮಾಡಲಾಗಿದೆ.
ಆದರೆ ಭಾರತೀಯ ಕಾಂಗ್ರೆಸ್ನ ಪ್ರತಿಭಟನೆ ಮುಂದುವರೆಯಲಿದೆ ಎಂದು ಕಾಂಗ್ರೆಸ್ ಹೇಳಿದೆ.
ರಾಹುಲ್ ಗಾಂಧಿ ಅವರು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಿದ್ದ ಚಿತ್ರವೊಂದು ವಿವಾದ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಅಮಾನತುಗೊಳಿಸಲಾಗಿತ್ತು.
ದಿಲ್ಲಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ದಲಿತ ಬಾಲಕಿಯ ಮನೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಬಾಲಕಿಯ ಪೋಷಕರಿಗೆ ಸಮಾಧಾನ ಹೇಳುವ ಚಿತ್ರವನ್ನು ಹಂಚಿಕೊಂಡಿದ್ದರು.
ಪೋಷಕರ ಚಿತ್ರವನ್ನು ಹಂಚಿಕೊಂಡಿರುವುದರಿಂದ ಬಾಲಕಿಯ ಗುರುತು ಬಹಿರಂಗವಾಗುವ ಅಪಾಯವಿದೆ. ಇದು ಪೋಕ್ಸೋ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್), ಟ್ವಿಟ್ಟರ್ ಹಾಗೂ ದಿಲ್ಲಿ ಪೊಲೀಸರಿಗೆ ಪತ್ರ ಬರೆದಿತ್ತು.
ಇತ್ತೀಚೆಗೆ ಭಾರತದ ಖ್ಯಾತನಾಮರ ಟ್ವಿಟ್ಟರ್ ಅಕೌಂಟ್ಗಳಲ್ಲಿ ಅಡಚಣೆಗಳು ಸಾಮಾನ್ಯವಾಗಿ ಹೋಗಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಧೋನಿ ಅಕೌಂಟ್ನ ಬ್ಲೂ ಟಿಕ್ ಮಾಯಾವಾಗಿತ್ತು.
ಕೆಲ ಸಮಯದ ಬಳಿಕ ಬ್ಲೂ ಟಿಕ್ ಮರಳಿತ್ತು. ಈಗ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಟ್ವಿಟ್ಟರ್ ಖಾತೆ ತಾತ್ಕಾಲಿಕವಾಗಿ ಅಮಾನತ್ತಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ರಾಹುಲ್ ಗಾಂಧಿ ಅವರು ಟ್ವಿಟ್ಟರ್ ಖಾತೆ ತಾತ್ಕಾಲಿಕವಾಗಿ ಅಮಾನತ್ತಾಗಿದೆ ಎಂದು ತಿಳಿಸಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications