ಉದ್ಯೋಗ ಮಾಡಲು ಸಾಮರ್ಥ್ಯ ಇಲ್ಲದ ಸಿಬ್ಬಂದಿಗೆ ಕೇಂದ್ರದಿಂದ ಕಡ್ಡಾಯ ನಿವೃತ್ತಿ
Recommended Video
ನವದೆಹಲಿ, ಜುಲೈ 10: ತಮ್ಮ ಉದ್ಯೋಗವನ್ನು ಮಾಡಲು ಸಾಮರ್ಥ್ಯ ಇಲ್ಲದ ಸರಕಾರಿ ಉದ್ಯೋಗಿಗಳ ಸೇವೆ ಕೊನೆಗೊಳಿಸಲು ಸರಕಾರ ಎಲ್ಲ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಕಳೆದ ತಿಂಗಳು ತೆರಿಗೆ ಇಲಾಖೆಯ ಪ್ರಿನ್ಸಿಪಾಲ್ ಹಾಗೂ ಚೀಫ್ ಕಮಿಷನರ್ ಗಳನ್ನು ಕಡ್ಡಾಯವಾಗಿ ನಿವೃತ್ತಿ ಪಡೆಯುವಂತೆ ಮಾಡಲಾಯಿತು.
ಆದರಲ್ಲಿ ಹಲವರ ವಿರುದ್ಧ ದೂರುಗಳು ಹಾಗೂ ಭ್ರಷ್ಟಾಚಾರದ ಪ್ರಕರಣಗಳು ಬಾಕಿ ಇವೆ. ಒಂದು ಪ್ರಕರಣದಲ್ಲಿ ಸೇವೆಯಿಂದ ನಿವೃತ್ತರಾದ ತೆರಿಗೆ ಅಧಿಕಾರಿ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ. ಆ ಅಧಿಕಾರಿ ಮನೆಯಲ್ಲಿ ಶೋಧ ಮಾಡುವಾಗ ಎರಡೂವರೆ ಕೋಟಿಯಷ್ಟು ಆಭರಣ, ಹದಿನಾರು ಲಕ್ಷ ನಗದು, ಹತ್ತು ಲಕ್ಷ ಮೌಲ್ಯದ ವಾಚ್ ಹಾಗೂ ಒಂದೂ ಕಾಲು ಕೋಟಿ ಬ್ಯಾಂಕ್ ಠೇವಣಿ ಪತ್ತೆಯಾಗಿತ್ತು.
ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯ ಇತ್ತೀಚಿನ ಆದೇಶದ ಪ್ರಕಾರ, ಎಷ್ಟು ಮಂದಿ ನಿವೃತ್ತರಾಗುತ್ತಿದ್ದಾರೆ ಎಂದು ಪ್ರತಿ ತಿಂಗಳೂ ವರದಿ ಕಳುಹಿಸಬೇಕು. ಜತೆಗೆ ಎಷ್ಟು ಮಂದಿ ಕೆಲಸದ ಸಾಮರ್ಥ್ಯವನ್ನು ಅಳೆಯಲಾಗಿದೆ ಎಂಬುದನ್ನು ದಾಖಲಿಸಬೇಕು.

ಎಲ್ಲ ಸಚಿವಾಲಯ ಅಥವಾ ಇಲಾಖೆಯಿಂದ ಈ ಬಗ್ಗೆ ವರದಿಯನ್ನು ಪ್ರತಿ ತಿಂಗಳ ಹದಿನೈದನೇ ತಾರೀಕಿನ ಒಳಗೆ ಸಿಬ್ಬಂದಿ ಹಾಗೂ ತರಬೇತಿ ಇಲಾಖೆಗೆ ಸಲ್ಲಿಸಬೇಕು. ಈ ನಿಯಮ ಜುಲೈ ಒಂದರಿಂದ ಜಾರಿಗೆ ಬಂದಿದೆ. ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ವರದಿ ನೇರವಾಗಿ ಪ್ರಧಾನಿ ಕಾರ್ಯಾಲಯಕ್ಕೆ ತಲುಪುತ್ತದೆ.
ಕೇಂದ್ರ ಸರಕಾರಿ ಸಿಬ್ಬಂದಿ ನೇಮಕಾತಿ, ತರಬೇತಿ, ವೃತ್ತಿ ಬೆಳವಣಿಗೆ ಹಾಗೂ ನಿವೃತ್ತಿ ವಿಚಾರಗಳನ್ನು ತಿಳಿಸಲಾಗುತ್ತದೆ. ಯಾವ ಸಿಬ್ಬಂದಿಯನ್ನು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸಬೇಕೋ ಅಂಥವರನ್ನು ಹಾಗೆ ಮಾಡುವ ಹಕ್ಕು ಸರಕಾರಕ್ಕೆ ಇದೆ ಎಂದು ತಿಳಿಸಲಾಗಿದೆ.
ಯಾವುದೇ ಸಿಬ್ಬಂದಿಗೆ ಐವತ್ತು ಮತ್ತು ಐವತ್ತೈದು ವರ್ಷ ತುಂಬುವ ಮುನ್ನ ಆರು ತಿಂಗಳಿಗೆ ಒಮ್ಮೆ ತಮ್ಮ ಉದ್ಯೋಗದಲ್ಲಿ ಮುಂದುವರಿಯುವ ಕ್ಷಮತೆ ಇದೆಯೋ ಇಲ್ಲವೋ ಎಂದು ಪರಿಶೀಲನೆ ಮಾಡಬೇಕು ಎಂದು ನಿಯಮ ಇದೆ ಎಂದು ತಿಳಿಸಲಾಗಿದೆ. ಇಂಥ ಪರಿಶೀಲನೆಯನ್ನು ಇನ್ನೂ ಮುಂಚಿತವಾಗಿ ಮಾಡಬೇಕಾ ಎಂಬ ಬಗ್ಗೆ ಪರಾಮರ್ಶೆ ನಡೆಯುತ್ತಿದೆ.












Click it and Unblock the Notifications