ಹೈಪ್ರೊಫೈಲ್ ಕಾಮುಕರಿಗೆ ಹೆಡೆಮುರಿಕಟ್ಟಲು ಸಜ್ಜಾಗಿದೆ ಸಮಿತಿ
ಬೆಂಗಳೂರು, ಅಕ್ಟೋಬರ್ 12 : ನಿರ್ಭಯಾಳ ಅತ್ಯಾಚಾರವಾದಾಗ ಭುಗಿಲೆದ್ದಿದ್ದ ಹೋರಾಟ ಹುದುಗಿಹೋದಂತೆ ಲೈಂಗಿಕ ದೌರ್ಜನ್ಯದ ವಿರುದ್ಧ ದೇಶಾದ್ಯಂತ ಸಿಡಿದೆದ್ದಿರುವ ಮಹಿಳಾಮಣಿಗಳ #MeTooIndia ಹೋರಾಟವೂ ಇಂಗಿಹೋಗುತ್ತದೆ ಅನ್ನುವಷ್ಟರಲ್ಲಿಯೇ ಈ ದೂರುಗಳ ಅಧ್ಯಯನಕ್ಕೆಂದು ಸಮಿತಿಯೊಂದನ್ನು ರಚಿಸಲಾಗುತ್ತಿದೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಹಿರಿಯ ಕಾನೂನು ತಜ್ಞರಿರುವ ಸಮಿತಿಯೊಂದನ್ನು ರಚಿಸಲಿದ್ದು, #ಮಿಟೂಇಂಡಿಯಾ ಅಭಿಯಾನದಡಿ, ರಾಜಕಾರಣಿಗಳ ಮೇಲೆ, ಹಿರಿಯ ಸಂಪಾದಕರ ಮೇಲೆ, ಚಿತ್ರನಟರ ಮೇಲೆ, ಸಂಗೀತಗಾರರ ವಿರುದ್ಧ ಕೇಳಿಬರುತ್ತಿರುವ ಲೈಂಗಿಕ ದೌರ್ಜನ್ಯದ ದೂರುಗಳ ಅಧ್ಯಯನ ನಡೆಸಲಿದೆ.
#MeToo ಪ್ರಕರಣ ನಿರ್ವಹಿಸಲು ನ್ಯಾಯಾಧೀಶರ ಸಮಿತಿ ರಚನೆ: ಮೇನಕಾ ಗಾಂಧಿ
ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಈ ಘನಂದಾರಿ ವ್ಯಕ್ತಿಗಳ ವಿರುದ್ಧ ಕೇಳಿಬರುತ್ತಿರುವ ಲೈಂಗಿಕ ಕಿರುಕುಳದ ದೂರುಗಳು ಸಾಮಾನ್ಯವಾದದ್ದಲ್ಲ ಮತ್ತು ನಿರ್ಲಕ್ಷಿಸುವಂಥದ್ದೂ ಅಲ್ಲ. ಇವು ದಶಕಗಳ ಹಿಂದೆ ನಡೆದಿದ್ದರೂ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲೇಬೇಕಾಗಿದೆ ಮತ್ತು ಮುಂದೆ ನಡೆಯದಂತೆ ತಡೆಯುವ ಅಗತ್ಯವೂ ಇದೆ.
ತಮ್ಮ ಮೇಲೆ ದಶಕಗಳ ಹಿಂದೆಯೇ ಅತ್ಯಾಚಾರವಾಗಿತ್ತು, ಲೈಂಗಿಕ ದೌರ್ಜನ್ಯ ನಡೆದಿದ್ದು, ಅಶ್ಲೀಲ ಮಾತುಗಳನ್ನಾಡಲಾಗಿತ್ತು ಎಂದು ಈಗೇಕೆ ಹೇಳಲಾಗುತ್ತಿದೆ, ಅಂದೇ ದೂರು ಸಲ್ಲಿಸಬಹುದಾಗಿತ್ತಲ್ಲ ಎಂಬ ಮಾತು ಕೂಡ ಕೇಳಿಬರುತ್ತಿದೆಯಾದರೂ, ಮಹಿಳೆಯರು ಧೈರ್ಯ ಮಾಡಿ ಈಗ ತಮ್ಮ ವಿರುದ್ಧ ನಡೆದ ದೌರ್ಜನ್ಯಕ್ಕೆ ದನಿಯಾಗುತ್ತಿದ್ದಾರೆ. ಕಾಮುಕ ಅಪರಾಧಿಗಳಿಗೆ ಹೆಡೆಮುರಿ ಎಂದಿದ್ದರೂ ಕಟ್ಟಲೇಬೇಕಲ್ಲ?
#ಮಿಟೂ ಎನ್ನುತ್ತಿರುವ ಪತ್ರಕರ್ತೆಯರು ಮುಗ್ಧರೇನಲ್ಲ: ಬಿಜೆಪಿ ನಾಯಕಿ
ಈ ಕುರಿತು ಶ್ರೀಸಾಮಾನ್ಯರಿಂದ ಹಿಡಿದು ಗಣ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಬಹುಸಂಖ್ಯೆಯಲ್ಲಿ #MeTooIndia ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಯಾರು ಏನು ಹೇಳುತ್ತಿದ್ದಾರೆ ನೋಡೋಣ.
ಸುಬ್ರಮಣಿಯನ್ ಸ್ವಾಮಿ
ಅವರು, ತಮ್ಮದೇ ಸರಕಾರದಲ್ಲಿ ವಿದೇಶಾಂಗ ಖಾತೆ ರಾಜ್ಯ ಸಚಿವರಾಗಿರುವ ಮತ್ತು ಮಾಜಿ ಸಂಪಾದಕರಾಗಿರುವ ಎಂಜೆ ಅಕ್ಬರ್ ಮೇಲೆ ಬಂದಿರುವ ಲೈಂಗಿಕ ದೌರ್ಜನ್ಯದ ದೂರಿನ ಬಗ್ಗೆ ಪ್ರತಿಕ್ರಿಯಿಸಿದ್ದು, "ಅವರ ಮೇಲೆ ಕೇವಲ ಒಬ್ಬರಿಂದ ಮಾತ್ರ ದೂರು ಬಂದಿಲ್ಲ, ಹಲವಾರು ಮಹಿಳೆಯರು ದೂರಿದ್ದಾರೆ. ನಾನೀಗಾಗಲೇ ಹೇಳಿದ್ದೇನೆ, ನಾನು #MeToo ಹೋರಾಟವನ್ನು ಬೆಂಬಲಿಸುತ್ತೇನೆ. ಇಷ್ಟು ವರ್ಷಗಳಾದ ನಂತರ ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಈಗ ಮಾತಾಡುತ್ತಿರುವುದು ತಪ್ಪೇನಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಇದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬೇಕು" ಎಂದಿದ್ದಾರೆ.
ಕಠಿಣ ಕ್ರಮದಿಂದ ನಿಯಂತ್ರಣ ಸಾಧ್ಯ
ತಮ್ಮ ನಿರ್ಭಿಡೆಯ ವ್ಯಕ್ತಿತ್ವದಿಂದಾಗಿ ಮತ್ತು ದಬಾಂಗ್ ನಲ್ಲಿ 'ಮುನ್ನಿ ಬದ್ನಾಮ್ ಹುಯಿ' ಹಾಡಿಗೆ ಭರ್ಜರಿಯಾಗಿ ನರ್ತಿಸಿದ್ದ ಬಾಲಿವುಡ್ ನ ಮಾದಕ ನಟಿ ಮಲೈಕಾ ಆರೋರಾ ಖಾನ್ ಅವರು, ಇದು (ಮಿಟೂ) ಇದೀಗ ಆರಂಭವಾಗಿದೆ. ಎಂದೂ ಆಗದಿರುವುದಕ್ಕಿಂತ ಇಂದಾದರೂ ಆರಂಭವಾಗಿದೆ. ಇಂಥ ಹೆಜ್ಜೆ ಇಟ್ಟಾಗ ಮಾತ್ರ ಮುಂದೆ ಇಂಥ ಘಟನೆಗಳು ಮತ್ತೆ ನಡೆಯದಂತೆ ನಿಯಂತ್ರಿಸಲು ಸಾಧ್ಯ. ಮಹಿಳೆಯರು ದೈಹಿಕ, ಮಾನಸಿಕ ಅಥವಾ ಭಾವನಾತ್ಮಕ ದೌರ್ಜನ್ಯಕ್ಕೊಳಗಾದರೂ ಅವರನ್ನು ನಾನು ಎಂದಿಗೂ ಬೆಂಬಲಿಸುತ್ತೇನೆ ಎಂದು ಈ ಹೋರಾಟಕ್ಕೆ ಜೈ ಎಂದಿದ್ದಾರೆ.
ಘಾಯ್ ಮತ್ತು ಬರಿಸಿ ರೇಪ್ ಮಾಡಿದರು : ಮಹಿಳೆಯ ಭಯಾನಕ ಕಥೆ
ಕನಿಮೋಳಿ
ಮಿಟೂ ಅಭಿಯಾನದಿಂದ ಚರ್ಚೆ ಆರಂಭವಾಗಬೇಕು ಮತ್ತು ಜನರು ತಮ್ಮನ್ನು ತಾವು ಆತ್ಮವಿಮರ್ಶೆ ಮಾಡಿಕೊಳ್ಳುವಂತಾಗಬೇಕು. ಇಡೀ ಜಗತ್ತಿಗೆ ಸತ್ಯ ಏನೆಂದು ಸಾರಬೇಕು. ಈ ಹೋರಾಟ ಲೈಂಗಿಕ ದೌರ್ಜನ್ಯಕ್ಕೆ, ಮಹಿಳೆಯರ ದುರ್ಬಳಕೆಗೆ ಕೊನೆ ಹಾಡಬೇಕು. ಮುಖವಾಡದ ಹಿಂದೆ ಮುಖ ಮುಚ್ಚಿಕೊಂಡಿರುವ ಈ ಕಾಮುಕರ ಮುಖವಾಡ ಕಿತ್ತುಹಾಕಲು ಮಹಿಳೆಯರನ್ನು ಪ್ರೋತ್ಸಾಹ ಮಾಡಬೇಕು. ದೌರ್ಜನ್ಯ ಎಸಗಿದವರನ್ನು ವಿಚಾರಣೆಗೆ ಒಳಪಡಿಸಬೇಕು, ದೌರ್ಜನ್ಯಕ್ಕೊಳಗಾದವರನ್ನಲ್ಲ ಎಂದು ಡಿಎಂಕೆ ಪಕ್ಷದ ಮಹಿಳಾ ಘಟಕದ ಕಾರ್ಯದರ್ಶಿಯಾಗಿರುವ ಕನಿಮೋಳಿ ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ
ಸತ್ಯ ಏನೆಂಬುದನ್ನು ಗಟ್ಟಿ ದನಿಯಲ್ಲಿ ಸಾರಬೇಕು ಎಂದು ಹೇಳಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಮಹಿಳೆಯರನ್ನು ಅತ್ಯಂತ ಗೌರವ ಮತ್ತು ಘನತೆಯಿಂದ ನೋಡಿಕೊಳ್ಳುವ ಸಮಯ ಎಂದು ಮಿಟೂ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ರೀತಿ ದೌರ್ಜನ್ಯ ಎಸಗಿಯೂ ಏನೂ ಆಗದಿದ್ದಂತವರ ಸಮಯ ಈಗ ಬಂದಿದೆ ಎಂಬುದು ಸಂತೋಷದ ಸಂಗತಿ. ಸಮಾಜದಲ್ಲಿ ಬದಲಾವಣೆ ತರಲು ಗಟ್ಟಿ ದನಿಯಲ್ಲಿ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಹಿಳೆಯರು ಮಾತಾಡಬೇಕು ಎಂದು ಅವರು ನುಡಿದಿದ್ದಾರೆ.
ದಪ್ಪ, ಕೊಳಕ ಮಹಿಳೆಯರಿಂದ ಲೈಂಗಿಕ ದೌರ್ಜನ್ಯದ ಆರೋಪ : ಅಭಿಜಿತ್
ಪ್ರಿಯಾಂಕಾ ಗಾಂಧಿ
ಭಾರತದ ಅತೀದೊಡ್ಡ #ಮಿಟೂ ಸತ್ಯ ಇನ್ನೂ ಹೊರಬರಬೇಕಿದೆ. 2013ರಲ್ಲಿ ಆ ಮಹಿಳೆಯ ಬಗ್ಗೆ ಲೇಖನ ಬರೆದಾದ ನಂತರ ಆ ಮಹಿಳೆ ಇನ್ನೂ ಪತ್ತೆಯಾಗಿಲ್ಲ ಎಂದು ಪ್ರಿಯಾಂಕಾ ಗಾಂಧಿ ವದ್ರಾ ಅವರು ಹಳೆಯ ಘಟನೆಯನ್ನು ಕೆದರಿ ಕೆಂಡ ಕಾರಿದ್ದಾರೆ. ಆ ಲೇಖನವೇನೆಂದರೆ, 2013ರಲ್ಲಿ ನಡೆದಿದ್ದ ಚುನಾವಣೆಯ ಸಂದರ್ಭದಲ್ಲಿ ಆ 'ಯುವ ಮಹಿಳೆ'ಯ ಪ್ರತಿ ಚಲನವಲನದ ಮೇಲೆ 'ಸಾಹೇಬ'ರು ಕಣ್ಣಿಟ್ಟಿದ್ದರು. ಅದಕ್ಕಾಗಿ ಗುಜರಾತ್ ಪೊಲೀಸರನ್ನು ನಿಯೋಜಿಸಿದ್ದರು ಎಂದು ಆರೋಪಿಸಲಾಗಿತ್ತು.
ಸ್ವರಾ ಭಾಸ್ಕರ್
ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರ ಹೆಸರುಗಳನ್ನು ಧೈರ್ಯವಾಗಿ ಬಯಲುಗೊಳಿಸುತ್ತಿರುವ ಧೀರ ಮಹಿಳೆಯರ ಪರವಾದ #ಮಿಟೂ ಹೋರಾಟವನ್ನು ಬೆಂಬಲಿಸುತ್ತಿರುವ ಏಕೈಕ ರಾಷ್ಟ್ರೀಯ ನಾಯಕ ಮತ್ತು ರಾಜಕಾರಣಿ ಎಂದರೆ ಅವರು ರಾಹುಲ್ ಗಾಂಧಿ ಎಂದು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ರಾಹುಲ್ ಅವರನ್ನು ಹಾಡಿ ಹೊಗಳಿದ್ದಾರೆ. ನಿಮಗೆ ತುಂಬಾ ಧನ್ಯವಾದಗಳು ರಾಹುಲ್ ಗಾಂಧಿ ಅವರೆ. ಇತರ ನಾಯಕರೂ ನಿಮ್ಮನ್ನು ಹಿಂಬಾಲಿಸುತ್ತಾರೆ ಮತ್ತು ಹೋರಾಟಕ್ಕೆ ಬೆಂಬಲ ನೀಡುತ್ತಾರೆ ಎಂದು ಆಶಿಸುತ್ತೇನೆ. ಲೈಂಗಿಕ ದೌರ್ಜನ್ಯ ಎಸಗುವವರಿಗೆ ಯಾವುದೇ ಕ್ಷಮೆ ನೀಡಬಾರದು ಎಂದು ಕೂಗಿ ಹೇಳಿದ್ದಾರೆ. ಸ್ವರಾ ಭಾಸ್ಕರ್ ಅವರು ಪದ್ಮಾವತ್ ಚಿತ್ರವನ್ನು ತೀವ್ರವಾಗಿ ಟೀಕಿಸಿ ವಿವಾದಕ್ಕೆ ಗುರಿಯಾಗಿದ್ದರು.