Breaking: ಕೊಯಮತ್ತೂರು ಬಾಂಬ್ ಸ್ಫೋಟ ಕೇಸ್, ಮತ್ತಿಬ್ಬರ ಬಂಧನ
ಕೊಯಮತ್ತೂರ್, ಡಿಸೆಂಬರ್ 28: ತಮಿಳುನಾಡಿನ ಕೊಯಮತ್ತೂರು ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬುಧವಾರ ಮತ್ತಿಬ್ಬರು ಭಯೋತ್ಪಾದಕರನ್ನು ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಶೇಖ್ ಹಿದಾಯತುಲ್ಲಾ ಮತ್ತು ಸನೋಫರ್ ಅಲಿ ಎಂದು ಗುರುತಿಸಲಾಗಿದೆ. ಈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಒಟ್ಟು ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ.
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಅಧಿಕೃತವಾಗಿ ಎನ್ಐಎ ತನಿಖೆಗೆ ಹಸ್ತಾಂತರ
ಕಳೆದ ಫೆಬ್ರವರಿ 2022 ರಲ್ಲಿ ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲಂ ಅರಣ್ಯದ ಅಸನೂರು ಮತ್ತು ಕಡಂಬೂರ್ ಅರಣ್ಯ ಪ್ರದೇಶದ ಒಳಭಾಗದಲ್ಲಿ ಆರೋಪಿಗಳು ಕ್ರಿಮಿನಲ್ ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ಈ ಹಿಂದೆ ಬಂಧಿತ ಆರೋಪಿ ಉಮರ್ ಫಾರೂಕ್ ನೇತೃತ್ವದ ಸಭೆಗಳಲ್ಲಿ ಆರೋಪಿಗಳಾದ ಜಮೇಶಾ ಮುಬೀನ್, ಮೊಹಮ್ಮದ್ ಅಜರುದ್ದೀನ್, ಶೇಖ್ ಹಿದಾಯತುಲ್ಲಾ ಮತ್ತು ಸನೋಫರ್ ಅಲಿ ಇದ್ದರು. ಅಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ತಯಾರಿ ನಡೆಸಲು ಮತ್ತು ಕಾರ್ಯಗತಗೊಳಿಸಲು ಸಂಚು ರೂಪಿಸಿದ್ದರು.
ಅಕ್ಟೋಬರ್ ತಿಂಗಳಿನಲ್ಲಿ ನಡೆದಿದ್ದ ಸ್ಫೋಟ:
ಕಳೆದ ಅಕ್ಟೋಬರ್ 23ರಂದು ಮುಂಜಾನೆ 4.30ರ ಸುಮಾರಿಗೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಮಾರುತಿ 800 ಕಾರಿನೊಳಗೆ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡಿತು. ಕೊಟ್ಟೈ ಈಶ್ವರನ್ ದೇವಸ್ಥಾನದ ಬಳಿ ಸ್ಫೋಟ ಸಂಭವಿಸಿದ್ದು, ಜಮೇಶಾ ಮುಬೀನ್ ಎಂದು ಗುರುತಿಸಲಾದ 25 ವರ್ಷದ ಯುವಕ ಸಾವನ್ನಪ್ಪಿದ್ದನು. ಆರಂಭದಲ್ಲಿ, ಈ ಸ್ಫೋಟವನ್ನು ಒಂದು ಅಪಘಾತ ಎಂದು ಭಾವಿಸಲಾಗಿತ್ತು. ಆದಾಗ್ಯೂ, ತನಿಖೆಯ ನಂತರ ರಾಜ್ಯ ಡಿಜಿಪಿ ಸೈಲೇಂದ್ರ ಬಾಬು ಅವರು ಭಯೋತ್ಪಾದಕ ಕೋನವನ್ನು ಬಹಿರಂಗಪಡಿಸುವ ಕೆಲವು ಆಘಾತಕಾರಿ ಆವಿಷ್ಕಾರಗಳನ್ನು ಮಾಡಿದ್ದಾರೆ.
ಕಾರ್ ಸ್ಫೋಟದ ಬಗ್ಗೆ ಡಿಜಿಪಿ ಹೇಳಿದ್ದೇನು?:
"ನಾವು ಆ ವಾಹನದಲ್ಲಿ ಮೊಳೆಗಳು, ಮಾರ್ಬಲ್ಗಳು ಮತ್ತು ಇತರ ವಸ್ತುಗಳನ್ನು ಫೋರೆನ್ಸಿಕ್ ವಿಭಾಗವು ಪರಿಶೀಲಿಸುತ್ತಿದ್ದೇವೆ. ಅವರ ಮನೆಯಲ್ಲಿ ನಡೆಸಿದ ಶೋಧದ ನಂತರ ನಾವು ಕೆಲವು ಕಡಿಮೆ ತೀವ್ರತೆಯ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದೇವೆ - ಪೊಟ್ಯಾಸಿಯಮ್ ನೈಟ್ರೇಟ್, ಅಲ್ಯೂಮಿನಿಯಂ ಪೌಡರ್, ಇದ್ದಿಲು, ಗಂಧಕ - ಕಂಟ್ರಿ ಬಾಂಬ್ಗಳನ್ನು ತಯಾರಿಸಲು ಬಳಸಲಾಗುತ್ತಿತ್ತು, "ಡಿಜಿಪಿ ಹೇಳಿದರು.
ಈ ಸ್ಫೋಟ ಸಂಭವಿಸಿದ ಒಂದು ದಿನದ ನಂತರ, ಮುಬಿನ್ ನಿವಾಸದ ಹೊರಗಿನ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದವು. ಸ್ಫೋಟದ ದಿನದಂದು ನಾಲ್ವರು ಭಾರವಾದ ವಸ್ತುವನ್ನು ಗೋಣಿಚೀಲದಲ್ಲಿ ಸುತ್ತಿ ಸಾಗಿಸುತ್ತಿರುವ ದೃಶ್ಯಗಳು ಕಂಡುಬಂದವು. ಈ ಸಂಬಂಧ ಆರೋಪಿ ಮುಬೀನ್, ಐಸಿಸ್ಗೆ ಬಯಾತ್ (ನಿಷ್ಠೆ) ಪ್ರಮಾಣ ಮಾಡಿದ ನಂತರ ಸಮುದಾಯದಲ್ಲಿ ಭಯೋತ್ಪಾದನೆ ಮಾಡುವ ಉದ್ದೇಶದಿಂದ ಆತ್ಮಾಹುತಿ ದಾಳಿ ನಡೆಸಲು ಮತ್ತು ದೇವಾಲಯದ ಸಂಕೀರ್ಣಕ್ಕೆ ವ್ಯಾಪಕ ಹಾನಿಯನ್ನುಂಟು ಮಾಡಲು ಯೋಜಿಸುತ್ತಿದ್ದನು ಎಂದು ಗೊತ್ತಾಗಿತ್ತು. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.