ಆಂಧ್ರಕ್ಕೆ ವಿಶೇಷ ಸ್ಥಾನಮಾನ, ಸಂಸತ್ ಮುಂದೆ ವಿಭಿನ್ನ ಪ್ರತಿಭಟನೆ!
ನವದೆಹಲಿ, ಫೆಬ್ರವರಿ 09 : ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂದು ಒತ್ತಾಯಿಸಿ ತೆಲಗು ದೇಶಂ ಪಕ್ಷದ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೂಜಾರಿಯಂತೆ ವೇಷ ತೊಟ್ಟ ಸಂಸದ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾನೆ.
ಶುಕ್ರವಾರ ಚಿತ್ತೂರು ಸಂಸದ ಎನ್.ಶಿವಪ್ರಸಾದ್ ವಿಭಿನ್ನವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸಂಸತ್ ಭವನದ ಮುಂದೆ ಪೂಜಾರಿಯಂತೆ ವೇಷ ತೊಟ್ಟು, ಪೂಜೆ ಮಾಡಿ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಚಂದ್ರಬಾಬು ನಾಯ್ಡು ಬಿಜೆಪಿ ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ ಏಕೆ?
'ಆಂಧ್ರ ಪ್ರದೇಶದ ಜನರೊಂದಿಗೆ ಮೋದಿ ಆಟವಾಡುತ್ತಿದ್ದಾರೆ. ರಾಜ್ಯದ ಜನರಿಗೆ ಅವರು ಹಲವಾರು ಭರವಸೆಗಳನ್ನು ನೀಡಿದ್ದರು, ಎಲ್ಲವನ್ನು ಮರೆತಿದ್ದಾರೆ. ದೇವರು ನನಗೆ ಮೋದಿಗೆ ಎಚ್ಚರದಿಂದ ಇರುವಂತೆ ಹೇಳಲು ತಿಳಿಸಿದ್ದಾನೆ' ಎಂದು ಶಿವಪ್ರಸಾದ್ ಹೇಳಿದ್ದಾರೆ.
ಬಿಜೆಪಿ ಮೈತ್ರಿಕೂಟದಲ್ಲಿ ಮಹಾ ಬಿರುಕು: ತೆಲುಗುದೇಶಂ ಹೊರಕ್ಕೆ?
ಸಂಸತ್ ಕಲಾಪಕ್ಕೂ ತೆಲಗು ದೇಶಂ ಪಕ್ಷದ ಸಂಸದರು ಶುಕ್ರವಾರ ಅಡ್ಡಿ ಪಡಿಸಿದರು. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕಲಾಪವನ್ನು ಮಾರ್ಚ್ 5ಕ್ಕೆ ಮುಂದೂಡಲಾಗಿದೆ. ಸಂಸದರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..
ಕಲಾಪಕ್ಕೆ ಅಡ್ಡಿ
ಶುಕ್ರವಾರ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಟಿಡಿಪಿ ಸಂಸದರು ಸದನದ ಬಾವಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಂಧ್ರಪ್ರದೇಶದಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ಕಲಾಪವನ್ನು 1 ಗಂಟೆಗಳ ಕಾಲ ಮುಂದೂಡಲಾಯಿತು.
ಕಲಾಪ ಮಾ.5ಕ್ಕೆ ಮುಂದೂಡಿಕೆ
ಕಲಾಪ ಪುನಃ ಆರಂಭವಾದರೂ ಟಿಡಿಪಿ ಸಂಸದರು ಪ್ರತಿಭಟನೆಯನ್ನು ವಾಪಸ್ ಪಡೆಯಲಿಲ್ಲ. ಆದ್ದರಿಂದ, ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ಮಾರ್ಚ್ 5ಕ್ಕೆ ಮುಂದೂಡಿದರು.
ಪೂಜಾರಿಯಂತೆ ವೇಷ
ಚಿತ್ತೂರು ಸಂಸದ ಎನ್.ಶಿವಪ್ರಸಾದ್ ಮತ್ತು ಇತರ ಸಂಸದರು ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಿವಪ್ರಸಾದ್ ಪೂಜಾರಿಯ ಉಡುಗೆ ತೊಟ್ಟು ಅರೆಬೆತ್ತಲಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡದರು.
ಎನ್.ಶಿವಪ್ರಸಾದ್ ವಿಭಿನ್ನ ಪ್ರತಿಭಟನೆ
ಎನ್.ಶಿವಪ್ರಸಾದ್ ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿರುವುದು ಇದೇ ಮೊದಲಲ್ಲ. 2016ರಲ್ಲಿ ನೋಟುಗಳ ನಿಷೇಧವಾದಾಗಲೂ ವಿನೂತನವಾಗಿ ವೇಷ ಧರಿಸಿ ಪ್ರತಿಭಟಿಸಿದ್ದರು.