ಕ್ಯಾತೆ ತೆಗೆದ ಚೀನಾ, ಸಿಕ್ಕಿಂ ಗಡಿಯಲ್ಲಿ ಉದ್ವಿಗ್ನ
ನವದೆಹಲಿ, ಜೂನ್ 26: ಚೀನಾ ದೇಶದ ಸೈನ್ಯ ಕ್ಯಾತೆ ತೆಗೆದಿದೆ. ಸಿಕ್ಕಿಂ ವಲಯದ ಭಾರತದ ಗಡಿಯ ಬಳಿ ಚೀನಾ ಸೈನಿಕರು ಅಕ್ರಮಣಕಾರಿ ಧೋರಣೆ ತೋರಿಸಿದ್ದು, ಭಾರತದ ಎರಡು ಬಂಕರ್ ಗಳನ್ನು ಧ್ವಂಸಗೊಳಿಸಿದೆ. ಇದರ ಜತೆಗೆ ಭಾರತೀಯ ಸೈನಿಕರ ಜತೆಗೆ ಘರ್ಷಣೆಗೆ ಇಳಿದಿದ್ದಾರೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.
10 ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಕ್ಷಿಪಣಿ ಪರೀಕ್ಷೆ ಮಾಡಿದ ಚೀನಾ
ಕಳೆದ ಹತ್ತು ದಿನಗಳಿಂದ ಈ ರೀತಿ ಮುಖಾಮುಖಿ ಆಗುತ್ತಿದೆ. ಭಾರತದ ಗಡಿಯೊಳಗೆ ಚೀನಾ ಸೈನಿಕರು ಮತ್ತಷ್ಟು ಒಳನುಸುಳದಂತೆ ತಡೆಯಲು ಭಾರತದ ಯೋಧರು ಎಲ್ಲ ಪ್ರಯತ್ನ ನಡೆಸುತ್ತಿದ್ದಾರೆ. ಮಾನವ ತಡೆಗೋಡೆ ನಿರ್ಮಿಸಿ, ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ ಎಸಿ) ಬಳಿ ಚೀನಾ ಯೋಧರನ್ನು ತಡೆಯಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಫೋಟೋ ಹಾಗೂ ವಿಡಿಯೋಗಳು ಕೂಡ ದೊರೆತಿದೆ.
ಎರಡೂ ಕಡೆಯ ಹಿರಿಯ ಸೇನಾಧಿಕಾರಿಗಳ ಮಧ್ಯೆ ಜೂನ್ ಇಪ್ಪತ್ತರಂದು ಸಭೆ ಕೂಡ ನಡೆದಿದೆ. ಆದರೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ದೋಕೋ ಲಾ ಎಂಬ ಇದೇ ಪ್ರದೇಶದಲ್ಲೇ 2008ರ ನವೆಂಬರ್ ನಲ್ಲಿ ಚೀನಾ ಸೇನೆಯು ಭಾರತದ ಬಂಕರ್ ಗಳನ್ನು ನಾಶಪಡಿಸಿದ್ದವು. ಇದೇ ವೇಳೆ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಭಾರತದ ಪ್ರವಾಸಿಗರಿಗೂ ಚೀನಾ ಅವಕಾಶ ನೀಡುತ್ತಿಲ್ಲ.