ಚೀನಾ ಏರ್ ಲೈನ್ಸ್ ನಿಂದ ಭಾರತೀಯ ಪ್ರಯಾಣಿಕರಿಗೆ ಅವಮಾನ
ದೋಕ್ಲಾಂ ಉದ್ವಿಗ್ನತೆಯನ್ನೇ ಮುಂದು ಮಾಡಿಕೊಂಡು ಭಾರತೀಯ ಪ್ರಯಾಣಿಕರ ಜತೆ ಚೀನಾ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ. ಈ ಬಗ್ಗೆ ದೂರು ಕೂಡ ದಾಖಲಿಸಲಾಗಿದೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಗಮನಕ್ಕೆ ಈ ಘಟನೆ ಬಂದ ಮೇಲೆ ಚೀನಾದ ವಿದೇಶಾಂಗ ಸಚಿವಾಲಯದ ಶಾಂಘೈ ವಿದೇಶಾಂಗ ವ್ಯವಹಾರಗಳ ಕಚೇರಿ ಹಾಗೂ ಪುಡಾಂಗ್ ವಿಮಾನ ನಿಲ್ದಾಣ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಬಂಧಪಟ್ಟ ವಸ್ತುಗಳು ಹಾಗೂ ಸಿಸಿಟಿವಿ ಫೂಟೇಜ್ ಪರಿಶೀಲಿಸಿದ್ದು, ಅಂಥ ಯಾವ ಘಟನೆಯೂ ನಡೆದಿಲ್ಲ ಎಂದು ಚೀನಾದ ಈಸ್ಟರ್ನ್ ಏರ್ ಲೈನ್ಸ್ ಆರೋಪ ನಿರಾಕರಿಸಿದೆ. ಘಟನೆ ಬಗ್ಗೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಚೀನಾದ ಸರಕಾರಿ ಮಾಧ್ಯಮವು ಭಾನುವಾರ ರಾತ್ರಿ ವರದಿ ಮಾಡಿದೆ.
ವಿಮಾನಯಾನ ಕಂಪನಿ ಉದ್ಯೋಗಿಗಳು ಅದ್ಭುತವಾದ ಸೇವೆ ನೀಡಿದ್ದಾರೆ ಎಂದು ಕಂಪನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಜಗತ್ತಿನಾದ್ಯಂತ ಇರುವ ಪ್ರಯಾಣಿಕರಿಗೆ ಸೇವೆ ಒದಗಿಸಲು ನಾವಿದ್ದೇವೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಉತ್ತರ ಅಮೆರಿಕ ಪಂಜಾಬಿ ಒಕ್ಕೂಟದ ಕಾರ್ಯಕಾರಿ ನಿರ್ದೇಶಕ ಸತ್ನಾಂ ಸಿಂಗ್ ಚಾಹಲ್ ಅವರು ಸುಷ್ಮಾ ಸ್ವರಾಜ್ ಗೆ ಪತ್ರ ಬರೆದಿದ್ದಾರೆ. ವಿಮಾನದಿಂದ ಹೊರಬರುವ ಗೇಟ್ ನಲ್ಲಿ ವ್ಹೀಲ್ ಚೇರ್ ನಲ್ಲಿದ್ದ ಭಾರತೀಯ ಪ್ರಯಾಣಿಕರನ್ನು ಅವಮಾನ ಮಾಡಿದರು ಎಂದು ತಿಳಿಸಿದ್ದಾರೆ.
ಚಾಹಲ್ ಅವರು ಆಗಸ್ಟ್ ಆರರಂದು ಚೀನಾ ಈಸ್ಟರ್ನ್ ಏರ್ ಲೈನ್ಸ್ ನ ವಿಮಾನದಲ್ಲಿ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಿದ್ದರು. ಶಾಂಘೈನ ಪುಡಾಂಗ್ ನಲ್ಲಿ ಅವರ ಮುಂದಿನ ವಿಮಾನಕ್ಕೆ ತೆರಳಲು ನಿಲ್ಲಿಸಲಾಗಿತ್ತು. ಈ ಏರ್ ಲೈನ್ಸ್ ಬಗ್ಗೆ ದೂರು ನೀಡಲು ತೆರಳಿದಾಗ ಅಧಿಕಾರಿಗಳು ದೊಡ್ಡ ಧ್ವನಿಯಲ್ಲಿ ಚೀರಾಡಿದ್ದಾರೆ.
"ಭಾರತ- ಚೀನಾ ಮಧ್ಯೆ ಉದ್ವಿಗ್ನ ಸ್ಥಿತಿ ಏರ್ಪಟ್ಟಿದ್ದರಿಂದ ಆ ಅಧಿಕಾರಿಗಳು ಸಿಟ್ಟಾದಂತೆ ಕಂಡುಬಂದರು" ಎಂದು ಚಾಹಲ್ ತಿಳಿಸಿದ್ದಾರೆ. ಚೀನಾ ಮೂಲಕ ತೆರಳದಂತೆ ಭಾರತೀಯ ಪ್ರಯಾಣಿಕರಿಗೆ ಎಚ್ಚರಿಕೆಯ ಸಂದೇಶ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಭಾರತದಲ್ಲಿರುವ ಚೀನಾ ಪ್ರಜೆಗಳು ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಕಳೆದ ತಿಂಗಳು ಚೀನಾ ಸಲಹೆ ಮಾಡಿತ್ತು.












Click it and Unblock the Notifications