ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ಚೆನ್ನೈ-ಮೈಸೂರು ಮಾರ್ಗದ ಸಮಯ, ನಿಲ್ದಾಣಗಳ ವಿವರಗಳು
ನವದೆಹಲಿ, ನ. 10: ದಕ್ಷಿಣ ಭಾರತದ ರೈಲು ಪ್ರಯಾಣಿಕರು ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸಬಹುದು. ಭಾರತೀಯ ರೈಲ್ವೇ ಪ್ರಕಾರ ಇದು ಐದನೇ ವಂದೇ ಭಾರತ್ ಎಕ್ಸ್ಪ್ರೆಸ್ ಆಗಿದ್ದು, ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಚಲಿಸಲಿದೆ. ಈ ರೈಲು ನವೆಂಬರ್ 11 ರಂದು ಪ್ರಯಾಣವನ್ನು ಪ್ರಾರಂಭಿಸಲಿದೆ. 497 ಕಿಮೀ ದೂರವನ್ನು ಕ್ರಮಿಸಲು 6 ಗಂಟೆ 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಇತ್ತೀಚೆಗೆ ಭಾರತೀಯ ರೈಲ್ವೆಯು ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ನ ಪ್ರಾಯೋಗಿಕ ಓಡಾಟವನ್ನು ಯಶಸ್ವಿಯಾಗಿ ನಡೆಸಿದೆ. ಚೆನ್ನೈನ ಎಂಜಿ ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣದಿಂದ ರೈಲಿನ ಪ್ರಾಯೋಗಿಕ ಓಡಾಟವನ್ನು ನಡೆಸಲಾಗಿದೆ. ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ ದಕ್ಷಿಣ ಭಾರತದಿಂದ ಮೊದಲ ಹೈ-ಸ್ಪೀಡ್ ರೈಲು ಸೇವೆಯಾಗಿದೆ.
"ದಕ್ಷಿಣ ಭಾರತವು ತನ್ನ ಮೊದಲ ವಂದೇ ಭಾರತ್ ರೈಲನ್ನು ಶೀಘ್ರದಲ್ಲೇ ಪಡೆಯಲಿದೆ. ಚೆನ್ನೈ ಮತ್ತು ಮೈಸೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ನ ಪ್ರಾಯೋಗಿಕ ಓಡಾಟವನ್ನು ಯಶಸ್ವಿಯಾಗಿ ನಡೆಸಲಾಗಿದೆ" ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗ
ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಚೆನ್ನೈ ಸೆಂಟ್ರಲ್, ಬೆಂಗಳೂರು ಸಿಟಿ ಮತ್ತು ಮೈಸೂರು ಜಂಕ್ಷನ್ ಈ ಮಾರ್ಗವನ್ನು ಒಳಗೊಂಡಿದೆ. ಈ ಮೂರು ನಿಲ್ದಾಣಗಳ ನಡುವೆ ಇದು ಪೆರಂಬೂರ್, ವೆಪ್ಪಂಪಟ್ಟು, ಕಟ್ಪಾಡಿ ಜಂಕ್ಷನ್, ಗುಡುಪಲ್ಲಿ ಮತ್ತು ಮಾಲೂರು ಬರಲಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ಚೆನ್ನೈ-ಬೆಂಗಳೂರು-ಮೈಸೂರು ರೈಲು ಒಂದೇ ಒಂದು ನಿಲುಗಡೆ ಹೊಂದಿದೆ. ಚೆನ್ನೈ ಸೆಂಟ್ರಲ್ ಮತ್ತು ಮೈಸೂರು ನಡುವೆ ಬೆಂಗಳೂರು ಸಿಟಿ ಜಂಕ್ಷನ್ನಲ್ಲಿ ಒಂದು ಸ್ಟಾಪ್ ನೀಡಲಿದೆ.
ಶೀಘ್ರದಲ್ಲೇ ವಂದೇ ಭಾರತ್ ರೈಲಿನ ಆನ್ಲೈನ್ ಬುಕಿಂಗ್ ಆರಂಭ
ವಂದೇ ಭಾರತ್ ಎಕ್ಸ್ಪ್ರೆಸ್ ಚೆನ್ನೈ ಸೆಂಟ್ರಲ್ನಿಂದ ಮೈಸೂರು ಜಂಕ್ಷನ್ಗೆ ತೆರಳಲಿರುವ ರೈಲಿನ ಸಂಖ್ಯೆ 20608. ವಂದೇ ಭಾರತ್ ಎಕ್ಸ್ಪ್ರೆಸ್ ಮೈಸೂರು ಜಂಕ್ಷನ್ನಿಂದ ಚೆನ್ನೈ ಸೆಂಟ್ರಲ್ಗೆ ತಲುಪಲಿರುವ ರೈಲು ಸಂಖ್ಯೆ 20607.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ರೈಲು ಟಿಕೆಟ್ಗಳ ಬುಕಿಂಗ್ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ. ರೈಲು ನವೆಂಬರ್ 11 ರಂದು ಪ್ರಯಾಣವನ್ನು ಪ್ರಾರಂಭಿಸಲಿದೆ.
ದಕ್ಷಿಣ ಭಾರತದ ವಂದೇ ಭಾರತ್ ರೈಲಿನ ವೇಳಾಪಟ್ಟಿ
ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ ವಾರದಲ್ಲಿ ಆರು ದಿನಗಳು ಚಲಿಸುತ್ತದೆ.- ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ.
ವಂದೇ ಭಾರತ್ ಎಕ್ಸ್ಪ್ರೆಸ್ ಚೆನ್ನೈ ಸೆಂಟ್ರಲ್ನಿಂದ ಬೆಳಗ್ಗೆ 05:50 ಕ್ಕೆ ತನ್ನ ಪ್ರಯಾಣವನ್ನು ಪ್ರಾರಂಭಿಸಿ ಬೆಳಗ್ಗೆ 10:25 ಕ್ಕೆ ಬೆಂಗಳೂರು ಸಿಟಿ ಜಂಕ್ಷನ್ಗೆ ತಲುಪುತ್ತದೆ. ಈ ಎರಡು ನಿಲ್ದಾಣಗಳ ನಡುವೆ ಇದು 359 ಕಿ.ಮೀ. ಇದೆ. ರೈಲು ಜಂಕ್ಷನ್ನಲ್ಲಿ 5 ನಿಮಿಷಗಳ ಕಾಲ ನಿಲ್ಲುತ್ತದೆ. ಬಳಿಕ 10:30 ಕ್ಕೆ ಹೊರಡಲಿದೆ. ನಂತರ ಅದು 137.6 ಕಿಮೀ ದೂರವನ್ನು ಕ್ರಮಿಸುವ ಮೂಲಕ ಮೈಸೂರು ಜಂಕ್ಷನ್ಗೆ ಮಧ್ಯಾಹ್ನ 12:30 ಕ್ಕೆ ತಲುಪುತ್ತದೆ.
ಹಿಂದಿರುಗುವ ಪ್ರಯಾಣದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಮೈಸೂರು ಜಂಕ್ಷನ್ನಿಂದ ಮಧ್ಯಾಹ್ನ 1:05 ಕ್ಕೆ ಹೊರಡಲಿದ್ದು, ಮಧ್ಯಾಹ್ನ 2:55 ಕ್ಕೆ ಬೆಂಗಳೂರು ಸಿಟಿ ಜಂಕ್ಷನ್ಗೆ ತಲುಪಲಿದೆ. 5 ನಿಮಿಷಗಳ ನಿಲುಗಡೆ ನಂತರ, ರೈಲು ಬೆಂಗಳೂರು ಸಿಟಿ ಜಂಕ್ಷನ್ನಿಂದ ಮಧ್ಯಾಹ್ನ 3:00 ಗಂಟೆಗೆ ಹೊರಡಲಿದೆ. ರಾತ್ರಿ 7:35 ಕ್ಕೆ ಚೆನ್ನೈ ಸೆಂಟ್ರಲ್ ತಲುಪಲಿದೆ. ಇದು 359 ಕಿಮೀ ದೂರವನ್ನು ಕ್ರಮಿಸುತ್ತದೆ.
ವಂದೇ ಭಾರತ್ ರೈಲು ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರು ನವೆಂಬರ್ 11 ರಂದು ಬೆಂಗಳೂರು ಭೇಟಿ ನೀಡುತ್ತಿದ್ದು ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ಮೊದಲ 'ವಂದೇ ಭಾರತ್ ಎಕ್ಸ್ಪ್ರೆಸ್' ರೈಲಿಗೆ ಚಾಲನೆ ನೀಡಲಿದ್ದಾರೆ.
ವಂದೇ ಭಾರತ್ ಎಕ್ಸ್ಪ್ರೆಸ್ ಭಾರತದ ಮೊದಲ ಸೆಮಿ ಹೈಸ್ಪೀಡ್ ರೈಲು. ಇದು ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದೆ. ಎಲ್ಲಾ ವಂದೇ ಭಾರತ್ ಕೋಚ್ಗಳು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿವೆ. ಜಿಪಿಎಸ್ ಆಧಾರಿತ ಆಡಿಯೋ- ದೃಶ್ಯ, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಗಳಿಗಾಗಿ ಆನ್-ಬೋರ್ಡ್ ಹಾಟ್ಸ್ಪಾಟ್ ವೈಫೈ ಮತ್ತು ಅತ್ಯಂತ ಆರಾಮದಾಯಕ ಆಸನ ಹಾಗೂ ಎಕ್ಸಿಕ್ಯೂಟಿವ್ ಕ್ಲಾಸ್ನಲ್ಲಿ ತಿರುಗುವ ಕುರ್ಚಿಗಳನ್ನು ಸಹ ಹೊಂದಿದೆ.