ಚಿಕನ್ ತಿನ್ನೋದಿಕ್ಕೆ ಒಂದು ವಾರ ರಜಾ ಕೇಳಿ ಪಡೆದ ರೈಲ್ವೆ ನೌಕರ
ರಾಯ್ ಪುರ್, ಜೂನ್ 21: ಇದೊಂದು ರಜಾ ಚೀಟಿಯೇ ಎಂಬ ಅನುಮಾನ ಬರಬಹುದು. ಅದರೆ ಖಂಡಿತಾ ರಜಾಗೆ ಅನುಮತಿ ಕೋರಿದ ಪತ್ರ ಇದು. ಆದರೆ ಈ ಮಹಾಶಯ ಒಂದು ವಾರ ರಜಾ ಕೇಳಿರುವುದು ಕೋಳಿ ಮಾಂಸ ತಿನ್ನುವ ಸಲುವಾಗಿ ಎಂಬುದು ಆಸಕ್ತಿಕರ ಸಂಗತಿ.
ಈತನ ಹೆಸರು ಪಂಕಜ್ ರಾಜ್. ಛತ್ತೀಸ್ ಗಢದ ಬಿಲಾಸ್ ಪುರ್ ಜಿಲ್ಲೆಯಲ್ಲಿ ಉದ್ಯೋಗ ಮಾಡುತ್ತಿರುವ ವ್ಯಕ್ತಿ. ರಜಾ ಕೇಳಿ ಒಂದು ಪುಟದ ಪತ್ರವನ್ನು ಇಲ್ಲಿನ ಸ್ಟೇಷನ್ ಮಾಸ್ಟರ್ ಗೆ ಬರೆದಿದ್ದು, ಆ ಪತ್ರವೀಗ ವಿಪರೀತ ತಮಾಷೆಯಾಗಿಯೂ ಚರ್ಚೆಗೆ ಕಾರಣವಾಗಿಯೂ ಹರಿದಾಡುತ್ತಿದೆ.
ನನಗೆ ಒಂದು ವಾರ ರಜಾ ಕೊಡಿ. ಶ್ರಾವಣ ಶುರುವಾಗುವುದರೊಳಗೆ ಎಷ್ಟು ಚಿಕನ್ ತಿನ್ನುವುದಕ್ಕೆ ಸಾಧ್ಯವೋ ಅಷ್ಟು ತಿಂದುಬಿಡ್ತೀನಿ. ಒಮ್ಮೆ ಶ್ರಾವಣ ಶುರುವಾಗಿಬಿಟ್ಟರೆ ನಾನು ಮಾಂಸಾಹಾರ ಸೇವಿಸುವಂತಿಲ್ಲ. ಆದ್ದರಿಂದ ಜೂನ್ ಇಪ್ಪತ್ತರಿಂದ ಇಪ್ಪತ್ತೇಳರವರೆಗೆ ರಜಾ ನೀಡಿ. ಆಗ ನಾನು ಚಿಕನ್ ತಿನ್ನಬಹುದು. ಇದರಿಂದ ಕೆಲಸ ಮಾಡುವುದಕ್ಕೆ ತಾಕತ್ತು ಹೆಚ್ಚಾಗುತ್ತದೆ ಎಂಬುದು ಪತ್ರದ ಒಕ್ಕಣೆ.
ಚಿಕನ್ ಮಾಡದ ಹೆಂಡ್ತಿ ಮೇಲಿನ ಕೋಪಕ್ಕೆ ಮಕ್ಕಳನ್ನು ಕೊಂದ ತಂದೆ
ಪತ್ರದ ಕೆಳಭಾಗದಲ್ಲಿ ಸ್ಟೇಷನ್ ಮಾಸ್ಟರ್ ರ ಸೀಲು ಬಿದ್ದಿದೆ. ಈ ಸ್ಟೇಷನ್ ನಲ್ಲಿ ಪೋರ್ಟರ್ ಆಗಿ ಕೆಲಸ ಮಾಡುವ ಪಂಕಜ್ ಬಹಳ ಫೇಮಸ್ ಆಗಿದ್ದಾರೆ. ಅಂದಹಾಗೆ ಹಿಂದೂಗಳ ಪೈಕಿ ಬಹಳ ಮಂದಿ ಮಳೆಗಾಲದಲ್ಲಿ ಬರುವ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡುವುದಿಲ್ಲ.
ಅಂದಹಾಗೆ ಈ ಪಂಕಜ್ ರಜಾ ಸಿಕ್ಕಿರುವ ಏಳೂ ದಿನ ಮಾಂಸಾಹಾರ ಸೇವಿಸಿ ದಷ್ಟಪುಷ್ಟ ಆಗಬೇಕಂತೆ. ಮುಂದಿನ ಒಂದು ತಿಂಗಳ ಕಾಲ ಮಾಂಸಾಹಾರ ಸೇವಿಸದಿದ್ದರೂ ಶಕ್ತಿ ಬೇಕು ಎಂದು ಕೇಳಿಕೊಂಡಿದ್ದಾನೆ.