ಸೆ.7ರ ಮಧ್ಯರಾತ್ರಿ ಚಂದ್ರನ ಮೇಲೆ ಇಳಿಯಲಿದೆ ವಿಕ್ರಮ್ ಲ್ಯಾಂಡರ್
ಬೆಂಗಳೂರು, ಆಗಸ್ಟ್ 20: ಚಂದ್ರಯಾನ-2 ನೌಕೆಯು ಭೂಮಿಯ ನಂಟನ್ನು ಸಂಪೂರ್ಣವಾಗಿ ಕಳೆದುಕೊಂಡು ಚಂದ್ರನ ಮಡಿಲಿಗೆ ಸೇರಿದ ಮಹತ್ವದ ಮೈಲಿಗಲ್ಲನ್ನು ಸಾಧಿಸಿರುವುದಕ್ಕೆ ಇಸ್ರೋ ಅಧ್ಯಕ್ಷ ಕೆ. ಶಿವನ್ ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಬೆಳಿಗ್ಗೆ 9 ಗಂಟೆಯಿಂದ 30 ನಿಮಿಷಗಳವರೆಗೆ ನೌಕೆಯನ್ನು ಕಕ್ಷೆಗೆ ಸೇರಿಸುವ ಕಾರ್ಯ ನಡೆಯಿತು. ಬಳಿಕ ಚಂದ್ರಯಾನ-2ಅನ್ನು ಕಕ್ಷೆಯಲ್ಲಿ ಇಳಿಸಲಾಯಿತು ಎಂದು ಶಿವನ್ ತಿಳಿಸಿದರು.
ಸೆ. 2ರಂದು ಮುಂದಿನ ಮಹತ್ವದ ಘಟ್ಟದ ಕಾರ್ಯ ನಡೆಯಲಿದೆ. ಅಂದು ವಿಕ್ರಮ್ ಲ್ಯಾಂಡರ್ ನೌಕೆಯಿಂದ ಬೇರ್ಪಡಲಿದೆ. ಸೆ. 3ರಂದು ನಾವು ಮೂರು ಸೆಕೆಂಡುಗಳ ಕಾಲ ಸಣ್ಣ ಪ್ರಮಾಣದ ಕಾರ್ಯಾಚರಣೆ ನಡೆಸಲಿದ್ದು, ಲ್ಯಾಂಡರ್ನ ವ್ಯವಸ್ಥೆ ಸಹಜವಾಗಿ ನಡೆಯುತ್ತಿದೆಯೇ ಎಂಬುದನ್ನುಪರಿಶೀಲಿಸಲಿದ್ದೇವೆ ಎಂದು ಹೇಳಿದರು.

ಸೆ. 7ರಂದು ರಾತ್ರಿ 1.55ಕ್ಕೆ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ ಎಂದು ತಿಳಿಸಿದರು.ಚಂದ್ರನ ಕಕ್ಷೆಗೆ ನೌಕೆಯನ್ನು ಕಳುಹಿಸುವ ಸಂದರ್ಭದಲ್ಲಿ ಇಸ್ರೋ ಕೇಂದ್ರದಲ್ಲಿ ಸುಮಾರು 200 ಅಧಿಕಾರಿಗಳು ಸೇರಿಕೊಂಡಿದ್ದರು. ಕಾರ್ಯಾಚರಣೆ ಯಶಸ್ವಿಯಾಗುತ್ತಿದ್ದಂತೆಯೇ ಅಧಿಕಾರಿಗಳು ಈ ಮಹತ್ವದ ಸಾಧನೆಯ ಸಂಭ್ರಮವನ್ನಾಚರಿಸಿದರು.
ಇಸ್ರೋ ಅಧಿಕಾರಿಗಳು ದಿನದ 24 ಗಂಟೆಯೂ ಚಂದ್ರಯಾನ ನೌಕೆಯ ಚಲನವಲನಗಳ ಮೇಲೆ ಕಣ್ಣಿರಿಸಿದ್ದಾರೆ. ನೌಕೆಯು ಚಂದ್ರನ ಮೇಲೆ ಇಳಿಯುವ ಗಳಿಗೆಗಾಗಿ ಕಾತರದಿಂದ ಕಾದಿದ್ದಾರೆ.
ಚಂದ್ರನ ಕುರಿತ ಅಧ್ಯಯನಕ್ಕೆ ತೆರಳಿರುವ ಭಾರತದ ಎರಡನೆಯ ಚಂದ್ರಯಾನ ನೌಕೆಯನ್ನು ಭೂಮಿಯ ಕಕ್ಷೆಯಿಂದ ಬೇರ್ಪಡಿಸಿ ಚಂದ್ರನ ಕಕ್ಷೆಗೆ ಏರಿಸುವ ಕಾರ್ಯವು ಬೆಳಿಗ್ಗೆ ಯಶಸ್ವಿಯಾಗಿ ನೆರವೇರಿತು. ಚಂದ್ರನ ಧ್ರುವ ಪ್ರದೇಶಕ್ಕೆ 100ಕಿ.ಮೀ. ದೂರದಲ್ಲಿರುವ ಕಕ್ಷೆಗೆ ಪ್ರವೇಶಿಸಿತು.












Click it and Unblock the Notifications