ಯುವತಿಯನ್ನು ಹಿಂಬಾಲಿಸಿದ ಹರಿಯಾಣ ಬಿಜೆಪಿ ಅಧ್ಯಕ್ಷರ ಪುತ್ರನಿಗೆ ಸಮನ್ಸ್
ಚಂಡೀಗಢ, ಆಗಸ್ಟ್ 9: ಹರಿಯಾಣ ಬಿಜೆಪಿ ಘಟಕದ ಅಧ್ಯಕ್ಷ ಸುಭಾಷ್ ಬರಲಾ ಪುತ್ರ ವಿಕಾಸ್ ಬರಲಾಗೆ ಪೊಲೀಸರು ಸಮನ್ಸ್ ನೀಡಿದ್ದಾರೆ. 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.
ಹರಿಯಾಣ ಬಿಜೆಪಿ ಅಧ್ಯಕ್ಷರ ಪುತ್ರನ ಆಟಾಟೋಪಕ್ಕೆ ನಲುಗಿದ ಯುವತಿ
ಆಗಸ್ಟ್ 4ರಂದು ರಾತ್ರಿ 12.30 ನಿಮಿಷಕ್ಕೆ ಯುವತಿಯೊಬ್ಬಳನ್ನು ಹಿಂಬಾಲಿಸಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಹತ್ವದ ಸಾಕ್ಷ್ಯ ಲಭ್ಯವಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಎಸ್.ಯು.ವಿ ಕಾರಿನಲ್ಲಿ ಸುಭಾಷ್ ಬರಲಾ ಪುತ್ರ ವಿಕಾಸ್ ಬರಲಾ ಮತ್ತು ಆತನ ಗೆಳೆಯ ಆಶಿಶ್ ಕುಮಾರ್ ಹರಿಯಾಣದ ಐಎಎಸ್ ಅಧಿಕಾರಿಯ ಪುತ್ರಿ ವರ್ಣಿಕಾ ಕುಂದುರನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಿತ್ತು.
ತನ್ನನ್ನು ಹಿಂಬಾಲಿ ಬೆದರಿಕೆ ಹಾಕಿದ್ದಲ್ಲದೇ ಅಪಹರಣಕ್ಕೆ ಯತ್ನಿಸಿದ್ದಾರೆ ಎಂದು ವರ್ಣಿಕಾ ಕುಂದು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಹಿನ್ನಲೆಯಲ್ಲಿ ಅಪಹರಣ ಯತ್ನ ಪ್ರಕರಣವನ್ನು ವಿಕಾಸ್ ಬರಲಾ ಮೇಲೆ ಪೊಲೀಸರು ದಾಖಲಿಸಿಲ್ಲ.
ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿದ್ದರೂ ಅದರಲ್ಲಿ ಎಲ್ಲೂ ಅಪಹರಣ ಯತ್ನದ ದೃಶ್ಯಾವಳಿಗಳು ಸಿಕ್ಕಿಲ್ಲ. ಜತೆಗೆ ಯುವತಿ ನೀಡಿದ ಹೇಳಿಕೆಯನ್ನೇ ನಂಬಲು ಪೊಲೀಸರೂ ಸಿದ್ದವಿಲ್ಲ. ಹೀಗಾಗಿ ಅಪಹರಣ ಹತ್ನ ಪ್ರಕರಣ ದಾಖಲಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಪೊಲೀಸರಿದ್ದಾರೆ.
ಹರಿಯಾಣ ಬಿಜೆಪಿ ಅಧ್ಯಕ್ಷರ ಪುತ್ರನ ಆಟಾಟೋಪದ ಸಿಸಿಟಿವಿ ದೃಶ್ಯ ಪತ್ತೆ
ಇದೀಗ ವಿಚಾರಣೆಗೆ ಕರೆದಿರುವುದರಿಂದ ವಿಚಾರಣೆಯ ನಂತರ ಪೊಲೀಸರು ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.