ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮುಂದಿರುವ ಸವಾಲುಗಳು!
ನವದೆಹಲಿ, ಅಕ್ಟೋಬರ್ 19; ಕಾಂಗ್ರೆಸ್ನ ಹಿರಿಯ ನಾಯಕ, ಕರ್ನಾಟಕ ಮೂಲದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 22 ವರ್ಷಗಳ ಬಳಿಕ ಅಧ್ಯಕೀಯ ಪಟ್ಟಕ್ಕೆ ನಡೆದ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಕಟ್ಟಾ ಬೆಂಬಲಿಗರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.
ಅಕ್ಟೋಬರ್ 17ರಂದು ನಡೆದಿದ್ದ ಕಾಂಗ್ರೆಸ್ ಅಧ್ಯಕೀಯ ಚುನಾವಣೆ ಫಲಿತಾಂಶ ಬುಧವಾರ ಪ್ರಕಟವಾಯಿತು. 80 ವರ್ಷದ ಮಲ್ಲಿಕಾರ್ಜುನ ಖರ್ಗೆ 7,897 ಮತಗಳನ್ನು ಪಡೆದು ಜಯಗಳಿಸಿದರು. ಅಧ್ಯಕ್ಷ ಚುನಾವಣಾ ಕಣದಲ್ಲಿದ್ದ ಶಶಿ ತರೂರ್ 1072 ಮತಗಳನ್ನು ಪಡೆದರು.
ಮಲ್ಲಿಕಾರ್ಜುನ ಖರ್ಗೆ ಕನ್ನಡಿಗರ ಹೆಮ್ಮೆ: ರಾಜ್ಯ ಕಾಂಗ್ರೆಸ್ ನಾಯಕರ ಶುಭಾಶಯ
ಗಾಂಧಿ ಕುಟುಂಬದ ನಂಬಿಕಸ್ಥ ನಾಯಕ, ಸೋನಿಯಾ ಮತ್ತು ರಾಹುಲ್ ಗಾಂಧಿ ಪರಮಾಪ್ತರಾದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲಿದ್ದಾರೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪಕ್ಷದ ನಾಯಕರು ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆಯನ್ನು ಅಭಿನಂದಿಸುತ್ತಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ: ಹೋರಾಟದ ಬದುಕು, ಪಕ್ಷನಿಷ್ಠೆಗೆ ಒಲಿದ ಗೌರವ
ಕೇಂದ್ರ ಸಚಿವರಾಗಿ, ಲೋಕಸಭೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಣೆ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಸದ್ಯ ರಾಜ್ಯಸಭಾ ಸದಸ್ಯರು. ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಎದುರು ಹಲವು ಸವಾಲುಗಳಿವೆ. ಅವುಗಳ ಕುರಿತ ಒಂದು ವರದಿ ಇಲ್ಲಿದೆ.
ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಬದುಕಿನ ಪ್ರಮುಖ ಅಂಶಗಳು
ರಬ್ಬರ್ ಸ್ಟಾಂಪ್ ಎಂಬ ಹಣೆಪಟ್ಟಿ ಕಳಚುವುದು
ಮಲ್ಲಿಕಾರ್ಜುನ ಖರ್ಗೆ ಗಾಂಧಿ ಕುಟುಂಬದ ಆಪ್ತರು, ಕುಟುಂಬಕ್ಕೆ ನಿಷ್ಠೆ ಹೊಂದಿರುವವರು. ಅವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದಾಗಲೇ ಬಿಜೆಪಿ ನಾಯಕರು ಗಾಂಧಿ ಕುಟುಂಬದ ರಬ್ಬರ್ ಸ್ಟಾಂಪ್ ಎಂದು ಆರೋಪ ಮಾಡಿದ್ದರು. ಈಗ ಖರ್ಗೆ ಅವರ ಮುಂದಿರುವ ಸವಾಲು ಸಹ ಅದೇ ಆಗಿದೆ.
ಪಕ್ಷ ಸಂಘಟನೆ ವಿಚಾರದಲ್ಲಿ ಖರ್ಗೆ ತೆಗೆದುಕೊಳ್ಳುವ ತೀರ್ಮಾನಗಳಲ್ಲಿ ಗಾಂಧಿ ಕುಟುಂಬದ ಪ್ರಭಾವ ಇರದಂತೆ ನೋಡಿಕೊಳ್ಳಬೇಕು. ಮತ್ತೆ ಗಾಂಧಿ ಕುಟುಂಬದ ಮಾತಿನ ಪ್ರಭಾವಕ್ಕೆ ಒಳಗಾಗಿ ನಿರ್ಧಾರಗಳನ್ನು ಕೈಗೊಂಡರೆ ರಬ್ಬರ್ ಸ್ಟಾಂಪ್ ಎಂಬ ಆರೋಪ ನಿಜವಾಗಲಿದೆ.
ಪಕ್ಷದ ನಾಯಕರ ನಡುವೆ ಸಮನ್ವಯತೆ
ಮಲ್ಲಿಕಾರ್ಜುನ ಖರ್ಗೆ ಮುಂದಿರುವ ಸವಾಲು ಪಕ್ಷದಲ್ಲಿನ ನಾಯಕರ ನಡುವೆ ಸಮನ್ವಯತೆ ಸಾಧಿಸುವುದು ಒಂದು. ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಬಳಿಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ. ಈ ಜಿ-23 ನಾಯಕರ ವಿಶ್ವಾಸವನ್ನುಗಳಿಸುವುದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸವಾಲು.
ಪಕ್ಷದ ನಾಯಕತ್ವ ಬದಲಾಗಬೇಕು. ರಚನಾತ್ಮಕ ಬದಲಾವಣೆಗಳು ಆಗಬೇಕು ಎಂದು 23 ನಾಯಕರ ಗುಂಪು ಒತ್ತಾಯ ಮಾಡಿತ್ತು. ಸರಣಿ ಸಭೆಗಳನ್ನು ನಡೆಸಿತ್ತು. ಈಗ ಈ ನಾಯಕರ ನಿಲುವು ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಸರಣಿ ವಿಧಾನಸಭಾ ಚುನಾವಣೆಗಳು
2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗಳನ್ನು ಎದುರಿಸುವುದು ಸಹ ಖರ್ಗೆ ಮುಂದಿರುವ ಸವಾಲು. ಅದರಲ್ಲೂ ಕರ್ನಾಟದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ತೆಲಂಗಾಣ, ರಾಜಸ್ಥಾನ, ಛತ್ತೀಸ್ಗಢ್, ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ, ಪಕ್ಷವನ್ನು ಅಧಿಕಾರಕ್ಕೆ ತರುವ ಸವಾಲು ಖರ್ಗೆ ಮುಂದಿದೆ.
ರಾಷ್ಟ್ರೀಯ ಮಟ್ಟದಲ್ಲಿ ಪಕ್ಷ ಸಂಘಟನೆ
2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು ಕಂಡಿದೆ. ಪ್ರಧಾನಿ ಮೋದಿ ವರ್ಚಸ್ಸು, ಬಿಜೆಪಿಯ ಸಂಘಟನಾತ್ಮಕ ಬಲವನ್ನು ಎದುರಿಸಲು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದಿದೆ.
ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಗಾಂಧಿ ಕುಟುಂಬದ ಸಹಾಯದ ಜೊತೆ, ಮೈತ್ರಿ ಮಾಡಿಕೊಳ್ಳುವ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಖರ್ಗೆ ಪಕ್ಷ ಸಂಘಟನೆಗೆ ತಂತ್ರಗಳನ್ನು ರೂಪಿಸಬೇಕು. ಆ ಮೂಲಕ 2024ರ ಲೋಕಸಭೆ ಚುನಾವಣೆಗೆ ಸಿದ್ಧರಾಗಬೇಕಿದೆ.