ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಈ ತಿಂಗಳು ಭಾನುವಾರ, ರಜಾದಿನಗಳಲ್ಲೂ ವಿರಾಮ ಇಲ್ಲ!
ನವದೆಹಲಿ, ಏಪ್ರಿಲ್ 1: ಕೋವಿಡ್-19 ಪ್ರಕರಣಗಳಲ್ಲಿ ಕಳವಳಕಾರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಸಿಕೆ ಕಾರ್ಯಕ್ರಮವನ್ನು ಚುರುಕುಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಏಪ್ರಿಲ್ ತಿಂಗಳಲ್ಲಿ ಎಲ್ಲ ದಿನವೂ ವ್ಯಾಪಕವಾಗಿ ಲಸಿಕೆ ಕಾರ್ಯಕ್ರಮಕ್ಕೆ ಅವಕಾಶ ನೀಡುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.
ಏಪ್ರಿಲ್ 1ರಿಂದ ದೇಶವ್ಯಾಪಿ ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಆರಂಭವಾಗಿದ್ದು, 45 ವರ್ಷ ಮೇಲಿನ ಎಲ್ಲರಿಗೂ ಲಸಿಕೆ ನೀಡುವುದನ್ನು ಪ್ರಾರಂಭಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ ಎಲ್ಲ ದಿನವೂ ಲಸಿಕೆ ಕಾರ್ಯಕ್ರಮ ನಡೆಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸೂಚನೆ ನೀಡಿದೆ. ಏಪ್ರಿಲ್ ತಿಂಗಳಲ್ಲಿನ ಗೆಜೆಟೆಡ್ ರಜಾದಿನಗಳಲ್ಲಿಯೂ ಲಸಿಕೆ ನೀಡುವುದನ್ನು ಮುಂದುವರಿಸಬೇಕು ಎಂದು ಅದು ಹೇಳಿದೆ.
ಕೋವಿಡ್-19 ಏರಿಕೆಗೆ ಯುವಜನರು ಹೆಚ್ಚು ಕಾರಣ: ಏಮ್ಸ್ ನಿರ್ದೇಶಕ
ಮಾರ್ಚ್ 31ರಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ವಿವರವಾಗಿ ಸಮಾಲೋಚನೆ ನಡೆಸಿದ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ. ಲಸಿಕೆ ಕಾರ್ಯಕ್ರಮವನ್ನು ಚುರುಕುಗೊಳಿಸಲು ಮತ್ತು ಮತ್ತಷ್ಟು ವ್ಯಾಪಕವಾಗಿ ನಡೆಸಲು ಸಾರ್ವಜನಿಕ ಹಾಗೂ ಖಾಸಗಿ ವಲಯಗಳಲ್ಲಿನ ಎಲ್ಲ ಕೋವಿಡ್-19 ಲಸಿಕೆ ಕೇಂದ್ರಗಳನ್ನು ಸಮರ್ಪಕವಾಗಿ ಬಳಸುವುದು ಇದರ ಗುರಿಯಾಗಿದೆ.
ಸರ್ಕಾರದ ಆದೇಶದಿಂದ ಗುಡ್ಫ್ರೈಡೇ, ಯುಗಾದಿ, ಅಂಬೇಡ್ಕರ್ ಜಯಮತಿ, ಎರಡನೆಯ ಶನಿವಾರ ಹೀಗೆ ವಿವಿಧ ರಜಾದಿನಗಳು ಸೇರಿದಂತೆ ಭಾನುವಾರ ಕೂಡ ಲಸಿಕೆ ಕಾರ್ಯಕ್ರಮಕ್ಕೆ ವಿರಾಮ ಇರುವುದಿಲ್ಲ.
ಕೊರೊನಾ ಲಸಿಕೆ ಹಾಕಿಕೊಂಡ ನಂತರ ಆಲ್ಕೋಹಾಲ್ ಡೇಂಜರ್? ವೈದ್ಯರ ಉತ್ತರ ಇಲ್ಲಿದೆ
ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ಬಳಸುತ್ತಿದ್ದು, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಗಳನ್ನು ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು. ಎರಡನೆಯ ಹಂತದಲ್ಲಿ 60 ವರ್ಷ ಮೇಲಿನ ಜನರನ್ನು ಆಯ್ಕೆ ಮಾಡಲಾಗಿತ್ತು. ಈಗ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ.