ಕೊರೊನಾ ಮೂರನೇ ಅಲೆ; ಎಚ್ಚರಿಕೆ ಕೊಟ್ಟ ನೀತಿ ಆಯೋಗ
ನವದೆಹಲಿ, ಜೂನ್ 04: ದೇಶದಲ್ಲಿ ಕೊರೊನಾ ಎರಡನೇ ಅಲೆ ತಗ್ಗುತ್ತಿದ್ದು, ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದರೆ ಕೊರೊನಾ ಸೋಂಕು ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ. ಹೀಗಾಗಿ ಜಾಗ್ರತೆಯಿಂದಿರುವ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಿದೆ ಎಂದು ಕೇಂದ್ರ ಎಚ್ಚರಿಕೆ ನೀಡಿದೆ.
"ಕಳೆದ ಡಿಸೆಂಬರ್, ಜನವರಿಯಲ್ಲಿ ನಾವು ತೋರಿದ ನಿರ್ಲಕ್ಷ್ಯವನ್ನು ಮುಂದುವರೆಸಿದರೆ ಈ ಪರಿಸ್ಥಿತಿ ಮತ್ತಷ್ಟು ಕಠಿಣವಾಗಲಿದೆ" ಎಂದು ನೀತಿ ಆಯೋಗ ಸದಸ್ಯ ವಿಕೆ ಪೌಲ್ ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಮೇ 7ರಿಂದ ದಿನನಿತ್ಯದ ಕೊರೊನಾ ಪ್ರಕರಣಗಳಲ್ಲಿ 68% ಇಳಿಕೆ ಕಂಡುಬಂದಿದೆ. 377 ಜಿಲ್ಲೆಗಳಲ್ಲಿ 5%ಗೂ ಕಡಿಮೆ ಪಾಸಿಟಿವಿಟಿ ದಾಖಲಾಗಿದೆ. 257 ಜಿಲ್ಲೆಗಳಲ್ಲಿ ದಿನನಿತ್ಯ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.

ಆದರೆ ಇವೆಲ್ಲವೂ ತಂತಾನೇ ನಡೆಯುತ್ತಿಲ್ಲ. ಜನದಟ್ಟಣೆ ಇಲ್ಲ. ಕೊರೊನಾ ಹರಡಲು ನಾವು ದಾರಿ ಮಾಡಿಕೊಟ್ಟಿಲ್ಲ ಹೀಗಾಗಿ ಇಳಿಕೆ ಸಾಧ್ಯವಾಗಿದೆ. ಆದರೆ ಹೀಗೆ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ನಾವು ಕಳೆದ ಬಾರಿ ತೋರಿದ ನಿರ್ಲಕ್ಷ್ಯವನ್ನೇ ಮತ್ತೆ ತೋರಿದರೆ ಕಠಿಣ ಪರಿಸ್ಥಿತಿ ಮತ್ತೆ ಎದುರಾಗುತ್ತದೆ ಎಂದು ಪೌಲ್ ಹೇಳಿದ್ದಾರೆ.
ಜನವರಿ, ಫೆಬ್ರವರಿ ತಿಂಗಳಿನಂತೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದರೆ, ಇನ್ನಷ್ಟು ವೇಗವಾಗಿ ಮೂರನೇ ಅಲೆಯನ್ನು ಕಾಣುತ್ತೇವೆ. ಆದರೆ ನಿಯಮಗಳನ್ನು ಪಾಲಿಸಿದರೆ ಮುಂದಿನ ಅಲೆಯ ಪ್ರಭಾವವನ್ನು ತಗ್ಗಿಸಲು ಸಾಧ್ಯವಿದೆ. ಅದಕ್ಕೆ ಮೊದಲು ಲಸಿಕೆಗಳನ್ನೂ ಶೀಘ್ರವಾಗಿ ನೀಡುವ ಕಾರ್ಯ ನಡೆಸಲಾಗುವುದು ಎಂದು ಹೇಳಿದ್ದಾರೆ.
ಮೂರನೇ ಅಲೆಯಲ್ಲಿ ಕೊರೊನಾ ಸೋಂಕು ಎರಡನೇ ಅಲೆಯಂತೆಯೇ ಇರುತ್ತದೆ. ಸಾವಿನ ಸಂಖ್ಯೆ ತಗ್ಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜೂನ್ 4ರಂದು ದೇಶದಲ್ಲಿ 1,32,364 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 2,07,071 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾ ವೈರಸ್ಗೆ ಮಹಾಮಾರಿಗೆ 2713 ಮಂದಿ ಪ್ರಾಣ ಬಿಟ್ಟಿದ್ದಾರೆ.












Click it and Unblock the Notifications