ಹೆಚ್ಚುತ್ತಿರುವ ಕೊರೊನಾ ಸೋಂಕು; ರಾಜ್ಯಗಳಿಗೆ ಬಂದ ಕೇಂದ್ರ ತಂಡ
ನವದೆಹಲಿ, ಜೂನ್ 09 : ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಭಾರತದಲ್ಲಿ ಹೆಚ್ಚುತ್ತಿದೆ. ಅದರಲ್ಲಿಯೂ ಕೆಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತಜ್ಞರ ತಂಡವನ್ನು ಕಳಿಸಿದೆ.
Recommended Video
ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ಮಂಗಳವಾರ ಈ ಕುರಿತು ಮಾಹಿತಿ ನೀಡಿದ್ದಾರೆ. 15 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು, 50 ಜಿಲ್ಲೆ/ಸ್ಥಳೀಯ ಸಂಸ್ಥೆಗಳಿಗೆ ಮೂವರು ಸದಸ್ಯರ ತಂಡ ಕಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯ/ಕೇಂದ್ರಾಡಳಿತ ಪ್ರದೇಶ/ಜಿಲ್ಲೆ/ಸ್ಥಳೀಯ ಆಡಳಿತಕ್ಕೆ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ತರಲು ಈ ತಂಡ ಮಾರ್ಗದರ್ಶನ ನೀಡಲಿದೆ. ಕೊರೊನಾ ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ತಂಡ ಕಳಿಸಲಾಗುತ್ತಿದೆ.
ಸೋಮವಾರ ಒಂದೇ ದಿನ 9,987 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದೇಶದಲ್ಲಿ ದಾಖಲಾಗಿದೆ. ಕಳೆದ ಒಂದು ವಾರದಿಂದ ಹೊಸ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿದ್ದು, ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ.

ಎಲ್ಲಿಗೆ, ಎಷ್ಟು ತಂಡಗಳು?
ಮಹಾರಾಷ್ಟ್ರಕ್ಕೆ 7, ತೆಲಂಗಾಣಕ್ಕೆ 4, ತಮಿಳುನಾಡಿಗೆ 7, ರಾಜಸ್ಥಾನಕ್ಕೆ 5, ಅಸ್ಸಾಂಗೆ 6, ಹರ್ಯಾಣಕ್ಕೆ 4, ಗುಜರಾತ್ಗೆ 4, ಕರ್ನಾಟಕಕ್ಕೆ 4, ಉತ್ತರಾಖಂಡ್ಗೆ 3, ಮಧ್ಯಪ್ರದೇಶಕ್ಕೆ 5, ಪಶ್ಚಿಮ ಬಂಗಾಳಕ್ಕೆ 3, ದೆಹಲಿಗೆ 3, ಬಿಹಾರಕ್ಕೆ 4, ಉತ್ತರ ಪ್ರದೇಶಕ್ಕೆ 4 ಮತ್ತು ಒಡಿಶಾಗೆ 5 ಕೇಂದ್ರ ತಂಡಗಳು ಆಗಮಿಸಲಿವೆ.

ಹೇಗೆ ಸಹಾಯ ಮಾಡಲಿವೆ?
ಮೂವರು ತಜ್ಞರನ್ನು ಒಳಗೊಂಡಿರುವ ಕೇಂದ್ರ ತಂಡ ಸ್ಥಳೀಯ ಆಡಳಿತಕ್ಕೆ ತಾಂತ್ರಿಕ ಸಹಾಯವನ್ನು ನೀಡಲಿವೆ. ಪರೀಕ್ಷೆ, ಕಂಟೈನ್ಮೆಂಟ್ ಝೋನ್ ನಿರ್ವಹಣೆ, ಕೋವಿಡ್ - 19 ಹಬ್ಬುವಿಕೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು ಮುಂತಾದ ವಿಚಾರದಲ್ಲಿ ಸಹಾಯ ಮಾಡಲಿವೆ.

ಆಸ್ಪತ್ರೆಗೆ ಭೇಟಿ ನೀಡಲಿವೆ
ಈ ತಂಡಗಳು ಸ್ಥಳೀಯ ಆಡಳಿತದ ಜೊತೆಗೆ ಕೇವಲ ಸಭೆಗಳನ್ನು ಮಾಡುವುದಿಲ್ಲ. ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಲಿವೆ, ಲ್ಯಾಬ್ನಲ್ಲಿ ಪರೀಕ್ಷೆಗೆ ಸಹಕಾರ ನೀಡಲಿವೆ, ಕಂಟೈನ್ಮೆಂಟ್ ಝೋನ್ ನಿರ್ವಹಣೆ ಬಗ್ಗೆ ಮಾಹಿತಿಗಳನ್ನು ಪಡೆದು, ಸಲಹೆಗಳನ್ನು ಕೊಡಲಿವೆ. ಕೋವಿಡ್ -19 ನಿಯಂತ್ರಣಕ್ಕೆ ತರಲು ಈ ತಂಡಗಳನ್ನು ಕಳಿಸಲಾಗುತ್ತಿದೆ.

ಪ್ರತಿ ದಿನ ಹೆಚ್ಚಾಗುತ್ತಲಿದೆ
ಕಳೆದ ಏಳು ದಿನಗಳಿಂದ ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದಲ್ಲಿ ಪ್ರಸ್ತುತ ಸೋಂಕಿತರ ಸಂಖ್ಯೆ 2,66,598ಕ್ಕೆ ಏರಿಕೆಯಾಗಿದೆ. 7 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಸರ್ಕಾರ ಸೋಂಕು ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಸುತ್ತಲೇ ಇದೆ.












Click it and Unblock the Notifications