ಹಳ್ಳಿಹಳ್ಳಿಗೂ ಕೊರೊನಾವೈರಸ್: ಮಹಾಮಾರಿ ನಿಯಂತ್ರಣಕ್ಕೆ ಉಪಾಯಗಳೇನು?
ನವದೆಹಲಿ, ಮೇ 16: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಮಹಾನಗರ, ನಗರ, ಅರೆ-ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹರಡುತ್ತಿರುವ ಅಪಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹರಡುವಿಕೆ ಭೀತಿಯಿಂದ ಸುರಕ್ಷಿತವಾಗಿರಲು ಕೇಂದ್ರ ಸರ್ಕಾರ ಹೊಸ ಎಸ್ಓಪಿ(ಸ್ಟಾಂಡೆರ್ಡ್ ಆಪರೇಟಿಂಗ್ ಪ್ರೊಸಿಜರ್) ಅನ್ನು ಹೊರಡಿಸಿದೆ.
ಸಮುದಾಯದ ಹಂತದಲ್ಲಿ ವೈದ್ಯಕೀಯ ಸೇವೆ, ಪ್ರಾಥಮಿಕ ಆರೋಗ್ಯದ ಮೂಲಸೌಕರ್ಯಗಳು ಗ್ರಾಮೀಣ ಪ್ರದೇಶಗಳಲ್ಲೂ ಸಜ್ಜಾಗಿದೆ ಎನ್ನುವುದನ್ನು ಖಚಿತಪಡಿಸುವುದಕ್ಕೆ ಈ ಎಸ್ಓಪಿ ಪ್ರಮುಖವಾಗಿ ಇರುತ್ತದೆ.
ಅಂತ್ಯಕ್ರಿಯೆಗೆ ಕೆಲವೇ ನಿಮಿಷ ಮೊದಲು ಎದ್ದು ಕುಳಿತ ಕೊರೊನಾ ಸೋಂಕಿತೆ
ದೇಶದ ಪ್ರತಿಯೊಂದು ಗ್ರಾಮದಲ್ಲಿ ಶೀತಜ್ವರ ರೀತಿಯ ಅನಾರೋಗ್ಯ ಹಾಗೂ ಉಸಿರಾಟ ತೊಂದರೆ ರೀತಿ ಸಮಸ್ಯೆಗಳನ್ನು ಎದುರಿಸುತ್ತಿರುವವರ ಮೇಲೆ ತೀವ್ರ ಕಣ್ಗಾವಲು ಇಡಲಾಗುತ್ತದೆ. ಆಶಾ ಕಾರ್ಯಕರ್ತೆಯರ ಸಹಕಾರದೊಂದಿಗೆ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೋಷಣೆ ಸಮಿತಿ ಈ ಕಾರ್ಯದಲ್ಲಿ ತೊಡಗಿರುತ್ತದೆ ಎಂದು ಎಸ್ಓಪಿಯಲ್ಲಿ ಹೇಳಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ರೋಗ ಕಣ್ಗಾವಲು ಕಾರ್ಯ
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚಿದ ಸಂದರ್ಭದಲ್ಲಿ ಹೆಚ್ಚಿನ ಕಣ್ಗಾವಲು ವಹಿಸಬೇಕಾಗುತ್ತದೆ. ಅಗತ್ಯ ಪ್ರಮಾಣದ ಆಕ್ಸಿಜನ್ ವ್ಯವಸ್ಥೆಯನ್ನು ಕೇಂದ್ರ ವಿಭಾಗಗಳಿಂದ ಗ್ರಾಮಗಳಿಗೆ ಕಳುಹಿಸುವುದು. ಕೊವಿಡ್-19 ಸಂಖ್ಯೆ ಹೆಚ್ಚುತ್ತಿದ್ದಂತೆ ಸೋಂಕಿತರ ಸಂಪರ್ಕದಲ್ಲಿ ಇರುವವರನ್ನು ಪತ್ತೆ ಮಾಡುವುದು. ಪ್ರಾಥಮಿಕ ಸಂಪರ್ಕಿತರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಆಮ್ಲಜನಕದ ಶುದ್ಧತೆ ಪರಿಶೀಲನೆಯ ಬಗ್ಗೆ ಅತಿಮುಖ್ಯ
ಕೊರೊನಾವೈರಸ್ ಸೋಂಕಿತರ ಪತ್ತೆ ಜೊತೆಗೆ ಅಗತ್ಯವಾಗಿರುವ ವೈದ್ಯಕೀಯ ಆಮ್ಲಜನಕದ ಶುದ್ಧತೆ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಎಸ್ಓಪಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕಾರ್ಯಕ್ಕಾಗಿ ಪ್ರತಿಯೊಂದು ಹಳ್ಳಿಗಳಲ್ಲಿ ನಾಡಿ ಪರೀಕ್ಷೆ ಸಾಧನ ಹಾಗೂ ಥರ್ಮಾಮೀಟರ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ.
ಕೊರೊನಾ ಸೋಂಕಿತರಿಗೆ ಹೋಮ್ ಐಸೋಲೇಷನ್ ಕಿಟ್
ಕೊರೊನಾವೈರಸ್ ಸೋಂಕು ತಗುಲಿರುವ ರೋಗಿಗಳಿಗೆ ಹೋಮ್ ಐಸೋಲೇಷನ್ ಕಿಟ್ ನೀಡುವುದು. ಈ ವೈದ್ಯಕೀಯ ಕಿಟ್ ಪ್ಯಾರಾಸಿಟಮಲ್, ಐವರ್ ಮೆಕ್ಟಿನ್, ಕಾಫ್ ಸಿರಪ್ ಮತ್ತು ಮಲ್ಟಿ ವಿಟಮಿನ್ಸ್ ಜೊತೆಗೆ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬ ಮಾರ್ಗಸೂಚಿಯನ್ನು ಒಳಗೊಂಡಿರುವ ಪ್ರಕಟಣೆ ಪತ್ರವನ್ನು ಹೊಂದಿರಬೇಕು. ಇದರ ಜೊತೆಗೆ ರೋಗಿಯ ಆರೋಗ್ಯ ಸ್ಥಿತಿ ಬಗ್ಗೆ ಯಾರಿಗೆ ಮಾಹಿತಿ ನೀಡಬೇಕು ಹಾಗೂ ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾದ ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ಒಳಗೊಂಡಿರಬೇಕು ಎಂದು ಎಸ್ಓಪಿಯಲ್ಲಿ ಉಲ್ಲೇಖಿಸಲಾಗಿದೆ.
ಹೋಮ್ ಐಸೋಲೇಷನ್ ಬಳಿಕ ಪರೀಕ್ಷೆ ಅನಿವಾರ್ಯವಲ್ಲ
ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟ ನಂತರ ರೋಗಿಗಳು 10 ದಿನಗಳವರೆಗೆ ಹೋಮ್ ಐಸೋಲೇಷನ್ ಇರುವುದು. ಈ ಅವಧಿ ನಂತರದಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸದಿದ್ದಲ್ಲಿ ಅಥವಾ ಮೂರು ದಿನಗಳವರೆಗೂ ಜ್ವರ ಕಾಣಿಸದವರೆಗೂ ಗೃಹ ದಿಗ್ಬಂಧನದಲ್ಲಿ ಇರಬೇಕು. ಒಂದು ಬಾರಿ ಹೋಮ್ ಐಸೋಲೇಷನ್ ಅವಧಿ ಪೂರ್ಣಗೊಂಡ ಬಳಿಕ ಮತ್ತೊಮ್ಮೆ ಕೊರೊನಾವೈರಸ್ ಸೋಂಕಿನ ತಪಾಸಣೆ ನಡೆಸುವ ಅಗತ್ಯವಿರುವುದಿಲ್ಲ.
ದೇಶದಲ್ಲಿ ಕೊವಿಡ್-19 ಸೋಂಕಿನ ತಪಾಸಣೆ ವೇಗ
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪತ್ತೆಗೆ ತಪಾಸಣೆ ವೇಗವನ್ನು ಹೆಚ್ಚಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 18,32,950 ಜನರ ಮಾದರಿಯನ್ನು ತಪಾಸಣೆಗೊಳಪಡಿಸಲಾಗಿದೆ. ದೇಶದಲ್ಲಿ ಈವರೆಗೂ 31,48,50,143 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.
ದೇಶದಲ್ಲಿ ಕೊವಿಡ್-19 ಸೋಂಕಿತರ ಅಂಕಿ-ಸಂಖ್ಯೆ
ದೇದಶದಲ್ಲಿ ಕಳೆದ 24 ಗಂಟೆಗಳಲ್ಲಿ 3,11,170 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 4,077 ಮಂದಿ ಕೊವಿಡ್-19 ಸೋಂಕಿತರು ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದು, 3,62,437 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು 2,46,84,077 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,07,95,335 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ ಈವರೆಗೂ 2,70,284 ಜನರು ಬಲಿಯಾಗಿದ್ದಾರೆ. ಇದರ ಹೊರತಾಗಿ 36,18,458 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.