ಉಕ್ರೇನ್-ರಷ್ಯಾ ಯುದ್ಧ: ಕೇಂದ್ರ ಸರ್ಕಾರಕ್ಕೆ ಮಮತಾ ಬ್ಯಾನರ್ಜಿ ನೀತಿಪಾಠ
ಕೋಲ್ಕತ್ತಾ, ಮಾರ್ಚ್ 2: ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ.
ಬುಧವಾರ ಉಕ್ರೇನ್ ಮತ್ತು ರಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಅಲ್ಲಿ ಸಿಲುಕಿರುವ ಭಾರತೀಯರ ಬಗ್ಗೆ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ರಾಜಕೀಯಕ್ಕಿಂತ ಮಾನವೀಯತೆ ಮುಖ್ಯ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು. ಕೇಂದ್ರದ ಎನ್ಡಿಎ ಸರ್ಕಾರ ತಕ್ಷಣವೇ ಶಾಂತಿ ಮಾತುಕತೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
"ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಕೇಂದ್ರವು ಅಲ್ಲಿ ಸಿಲುಕಿರುವ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ನಾನು ಶಾಂತಿಯ ಪರವಾಗಿರುತ್ತೇನೆ, ಯುದ್ಧವಲ್ಲ. ಕೊವಿಡ್-19 ಸಾಂಕ್ರಾಮಿಕ ರೋಗವು ಈಗಾಗಲೇ ಸಾಕಷ್ಟು ನಾಶವಾಗಿದೆ. ವಿಶ್ವಶಾಂತಿಯನ್ನು ಕಾಪಾಡಲು ಭಾರತ ಮಾತುಕತೆ ನಡೆಸಬಹುದು ಎಂದು ಬ್ಯಾನರ್ಜಿ ಹೇಳಿದ್ದಾರೆ.

ಹಾವೇರಿ ಮೂಲದ ನವೀನ್ ಸಾವಿನ ಬೆನ್ನಲ್ಲೇ ದೀದಿ ಹೇಳಿಕೆ:
ಮಂಗಳವಾರ ಪೂರ್ವ ಉಕ್ರೇನ್ ನಗರದ ಖಾರ್ಕಿವ್ನಲ್ಲಿ ರಷ್ಯಾ ನಡೆಸಿದ ತೀವ್ರ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ. ರಷ್ಯಾ -ಉಕ್ರೇನ್ ನಡುವಿನ ಯುದ್ಧದಲ್ಲಿ ಸಾವನ್ನಪ್ಪಿದವರಲ್ಲಿ ನವೀನ್ ಮೊದಲ ಭಾರತೀಯರಾಗಿದ್ದಾರೆ.
ರಾಜಕೀಯಕ್ಕಿಂತ ವಿದ್ಯಾರ್ಥಿಗಳ ಬದುಕು ಮುಖ್ಯ:
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಸಮಾಜವಾದಿ ಪಕ್ಷದ ಪರ ಪ್ರಚಾರಕ್ಕೆ ತೆರಳುವ ಮುನ್ನ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದರು. ರಾಜಕೀಯಕ್ಕಿಂತ ಮಾನವೀಯತೆ ಮುಖ್ಯವಾಗಿದ್ದು, ಕೇಂದ್ರ ಸರ್ಕಾರ ಇದನ್ನು ಅರಿತುಕೊಳ್ಳಬೇಕು. ರಾಜಕೀಯಕ್ಕಿಂತ ವಿದ್ಯಾರ್ಥಿಗಳ ಬದುಕು ಮುಖ್ಯವಾಗಿದೆ ಎಂದು ಹೇಳಿದರು.
ರಾಜಕೀಯದಲ್ಲಿ ಅವರು ಬ್ಯುಸಿ ಎಂದ ದೀದಿ:
ಸರ್ವಪಕ್ಷ ಸಭೆಗೆ ಹಾಜರಾಗುವಂತೆ ಆಹ್ವಾನ ಬಂದಿಲ್ಲವೇ ಎಂಬ ಪ್ರಶ್ನೆಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದರು. "ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಅದನ್ನು ಅವರು ನಿರ್ಧರಿಸಬೇಕು. ಬಹುಶಃ ಅವರು ಚುನಾವಣೆಯಲ್ಲಿ ನಿರತರಾಗಿರಬಹುದು," ಎಂದು ಹೇಳಿದರು. ಉಕ್ರೇನ್ ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೇಷರತ್ ಬೆಂಬಲ ನೀಡಿದ್ದರು. ಈ ವಿಷಯದ ಬಗ್ಗೆ ಒಗ್ಗಟ್ಟಿನ ನಿಲುವು ತೆಗೆದುಕೊಳ್ಳಲು ಸರ್ವಪಕ್ಷಗಳ ಸಭೆಯನ್ನು ಕರೆಯುವ ಬಗ್ಗೆ ಪರಿಗಣಿಸುವಂತೆ ಮನವಿ ಮಾಡಿದ್ದರು.












Click it and Unblock the Notifications