ದಲಿತರಿಗೆ ಸರ್ಕಾರ ಏನೂ ಮಾಡಿಲ್ಲ: ಪ್ರಧಾನಿಗೆ ಸಂಸದ ಪತ್ರ
ನವದೆಹಲಿ, ಏಪ್ರಿಲ್ 07: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಉತ್ತರ ಪ್ರದೇಶದ ಬಿಜೆಪಿ ಸಂಸದ ಯಶವಂತ್ ಸಿಂಗ್, ದಲಿತರನ್ನು ಕಡೆಗಣಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ನಾಗಿನ ಕ್ಷೇತ್ರದ ಸಂಸದರಾಗಿರುವ ಯಶವಂತ್ ಸಿಂಗ್, ದಲಿತರಿಗೆ ಕೇಂದ್ರ ಸರ್ಕಾರ ಸೂಕ್ತ ಆದ್ಯತೆ ನೀಡುತ್ತಿಲ್ಲ ಎಂದು ಪತ್ರದಲ್ಲಿ ದೂರಿದ್ದಾರೆ. ತಾವು ಮೀಸಲಾತಿಯ ಕಾರಣದಿಂದಲೇ ಸಂಸದರಾಗಲು ಸಾಧ್ಯವಾಗಿರುವುದು ಎಂದು ಅವರು ಹೇಳಿದ್ದಾರೆ.
ದಲಿತನಾಗಿ ನನ್ನ ಸಾಮರ್ಥ್ಯಗಳನ್ನು ಬಳಸಿಕೊಂಡಿಲ್ಲ. ನಾನು ಸಂಸದನಾಗಲು ಸಾಧ್ಯವಾಗಿರುವುದೇ ಮೀಸಲಾತಿಯ ಕಾರಣದಿಂದ. ನಾಲ್ಕು ವರ್ಷಗಳಲ್ಲಿ ಸರ್ಕಾರ ದೇಶದ 30 ಕೋಟಿ ದಲಿತರಿಗೆ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಸುಪ್ರೀಂ ಕೋರ್ಟ್ ಇತ್ತೀಚೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ದೌರ್ಜನ್ಯ ತಡೆ ಕಾಯ್ದೆ ಕುರಿತು ನೀಡಿದ ತೀರ್ಪನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಆರೋಪ ಮಾಡಿದ ಎರಡನೆಯ ದಲಿತ ಸಂಸದ
ಯಶವಂತ್ ಸಿಂಗ್ ಅವರು ದಲಿತರನ್ನು ಮತ್ತು ದಲಿತ ಸಂಸದರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಪ್ರಧಾನಿಗೆ ಪತ್ರ ಬರೆದ ಎರಡನೆಯ ಸಂಸದರಾಗಿದ್ದಾರೆ.
ಇತ್ತೀಚೆಗಷ್ಟೇ ರಾಬರ್ಟ್ಸ್ ಗಂಜ್ ಸಂಸದ ಚೋಟೆ ಲಾಲ್ ಖರ್ವಾರ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ರಾಜ್ಯ ಸರ್ಕಾರ ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ದೂರಿದ್ದರು.
ಚಾಣದೌಲಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಎರಡು ಬಾರಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ದೂರು ನೀಡಿದ್ದೆ. ಆದರೆ, ಅವರು ನನ್ನನ್ನು ನಿಂದಿಸ ಹೊರಹಾಕಿದ್ದರು ಎಂದು ಪತ್ರದಲ್ಲಿ ಆರೋಪಿಸಿದ್ದರು.
ಈ ಸಂಬಂಧ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗಕ್ಕೂ ದೂರು ನೀಡಿದ್ದರು.












Click it and Unblock the Notifications