ಸಿಬಿಐ Vs ಮಮತಾ ಕದನದ ಕೇಂದ್ರಬಿಂದು ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಯಾರು?
ನವದೆಹಲಿ, ಫೆಬ್ರವರಿ 5: ಪಶ್ಚಿಮ ಬಂಗಾಳದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಸಿಬಿಐ-ಮಮತಾ ಬ್ಯಾನರ್ಜಿ ಕದನ ನ್ಯಾಯಾಲಯದ ಮೆಟ್ಟಿಲೇರಿದೆ. ಶಾರದಾ ಚಿಟ್ಫಂಡ್ ಬಹುಕೋಟಿ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಪಶ್ಚಿಮ ಬಂಗಾಳದಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ತೆರಳಿದ್ದು ಇದು ಮೊದಲೇನಲ್ಲ.
ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಕೋಲ್ಕತಾದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ನಗರದ ಲಂಡನ್ ಸ್ಟ್ರೀಟ್ನಲ್ಲಿರುವ ನಿವಾಸದಿಂದ ಬಂಧಿಸಲು ಬಂದ ಅಧಿಕಾರಿಗಳನ್ನೇ ಅಲ್ಲಿನ ಪೊಲೀಸರು ಬಂಧಿಸಿದ್ದರು.
ತಮ್ಮ ಪೊಲೀಸರಿಗೆ ರಕ್ಷಣೆ ನೀಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದರು. ಬಳಿಕ ದೀದಿ ನಡೆಸಿದ ಧರಣಿಯಲ್ಲಿಯೂ ರಾಜೀವ್ ಕುಮಾರ್ ಪಾಲ್ಗೊಂಡಿದ್ದರು. ಇದು ಐದಾರು ವರ್ಷದ ಹಳೆಯ ಪ್ರಕರಣವಾಗಿದ್ದು, ಈಗಾಗಲೇ ಅನೇಕರನ್ನು ವಿಚಾರಣೆಗೆ ಒಳಪಡಿಸಿದ್ದರೂ ಇದೇ ಮೊದಲ ಬಾರಿಗೆ ಸಿಬಿಐಗೆ ಅಲ್ಲಿನ ಸರ್ಕಾರ ಸೆಡ್ಡು ಹೊಡೆದಿದೆ. ಆದರೆ, ಈ ಹಿಂದಿನಿಂದಲೂ ಅಲ್ಲಿನ ಪೊಲೀಸರು ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಮಹತ್ವದ ದಾಖಲೆಗಳು ನಾಪತ್ತೆಯಾಗಿದ್ದು, ಅವುಗಳ ಪತ್ತೆಗೆ ಪೊಲೀಸರಿಂದ ನೆರವು ಸಿಗುತ್ತಿಲ್ಲ ಎಂದು ಸಿಬಿಐ ಹೇಳಿತ್ತು.
ದೀದಿ-ಸಿಬಿಐ ವಿವಾದ LIVE: ತನಿಖೆಗೆ ಸಹಕರಿಸುವಂತೆ ಸುಪ್ರೀಂ ಆದೇಶ
ರಾಜೀವ್ ಕುಮಾರ್ ಮೂಲತಃ ಉತ್ತರ ಪ್ರದೇಶದವರು. ಅವರ ಪತ್ನಿ ಭಾರತೀಯ ಕಂದಾಯ ಸೇವೆಯಲ್ಲಿ ಅಧಿಕಾರಿಯಾಗಿದ್ದಾರೆ. ಯಾರು ಈ ರಾಜೀವ್ ಕುಮಾರ್? ಇಲ್ಲಿದೆ ವಿವರ...
ಕಂಪ್ಯೂಟರ್ ಸೈನ್ಸ್ ಪದವಿ
ರಾಜೀವ್ ಕುಮಾರ್ ರೂರ್ಕಿಯ ಐಐಟಿಯಿಂದ ಕಂಪ್ಯೂಟರ್ ಸೈನ್ಸ್ ಪದವಿ ಪಡೆದವರು. ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಟ್ರೈನಿಯಾಗಿದ್ದಾಗ 11 ಕಿ.ಮೀ. ಓಟದಲ್ಲಿ ಅತಿ ವೇಗದಿಂದ ಓಡಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಕೋಲ್ಕತಾದಲ್ಲಿರುವ ಸಚಿವಾಲಯದಲ್ಲಿ ಸ್ವಂತ ಕಚೇರಿ ಹೊಂದಿರುವ ಪ್ರಥಮ ಪೊಲೀಸ್ ಅಧಿಕಾರಿಯೂ ಹೌದು.
ಪ್ರಸ್ತುತ ಕೋಲ್ಕತಾ ಪೊಲೀಸ್ ಕಮಿಷನರ್ ಆಗಿರುವ ರಾಜೀವ್ ಕುಮಾರ್ 1989ನೇ ಬ್ಯಾಚ್ನ ಐಪಿಎಸ್ ಅಧಿಕಾರಿ. 2016ರಲ್ಲಿ ಸಿಐಡಿ ಇಲಾಖೆಗೆ ಬಡ್ತಿ ಪಡೆದ ಆಗಿನ ಕಮಿಷನರ್ ಸುರಜಿತ್ ಕರ್ ಪುರಕಾಯಸ್ಥ ಅವರ ಸ್ಥಾನಕ್ಕೆ ನೇಮಕವಾದರು.
ಇದಕ್ಕೂ ಮೊದಲು ರಾಜೀವ್ ಕುಮಾರ್ ಬಿಧಿನಗರ್ ಪೊಲೀಸ್ ಕಮಿಷನರೇಟ್ನಲ್ಲಿ ಕಮಿಷನರ್ ಆಫ್ ಪೊಲೀಸ್ ಆಗಿ ಮತ್ತು ಕೋಲ್ಕತಾ ಪೊಲೀಸ್ನ ವಿಶೇಷ ಕಾರ್ಯ ಪಡೆ (ಎಸ್ಟಿಎಫ್) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.
ಬಂಗಾಳ ಪೊಲೀಸರ ವಿರುದ್ಧ ಸಾಕ್ಷ್ಯ ಇದೆ: ಸುಪ್ರೀಂಕೋರ್ಟ್ಗೆ ಸಿಬಿಐ ಅಫಿಡವಿಟ್
ಸಿಬಿಐಗೆ ಸಹಕರಿಸಲು ನಕಾರ
2013ರಲ್ಲಿ ಬಹಿರಂಗಗೊಂಡು ಕೋಲಾಹಲ ಮೂಡಿಸಿದ ಶಾರದಾ ಚಿಟ್ ಫಂಡ್ ಮತ್ತು ರೋಸ್ ವ್ಯಾಲಿ ಹಗರಣಗಳ ತನಿಖೆಗೆ ನಿಯೋಜನೆಗೊಂಡಿದ್ದ ವಿಶೇಷ ತನಿಖಾ ತಂಡದ (ಎಸ್ಐಟಿ) ನೇತೃತ್ವ ವಹಿಸಿದ್ದರು.
ಈ ಪ್ರಕರಣ ಬಳಿಕ ಸಿಬಿಐಗೆ ವರ್ಗಾವಣೆಯಾಗಿತ್ತು. ಆಗ ಕೆಲವು ಪ್ರಮುಖ ದಾಖಲೆಗಳು ಕಣ್ಮರೆಯಾಗಿರುವ ಬಗ್ಗೆ ರಾಜೀವ್ ಕುಮಾರ್ ಮತ್ತು ಇತರೆ ಕೆಲವು ಅಧಿಕಾರಿಗಳನ್ನು ಪ್ರಶ್ನಿಸಲು ಸಿಬಿಐ ಬಯಸಿತ್ತು. ತನಿಖೆಗೆ ಸಹಕರಿಸಲು ಕೈಜೊಡಿಸುವಂತೆ ಸಿಬಿಐ ಕೋರಿದ್ದರೂ ಅಧಿಕಾರಿಗಳು ಜತೆಗೂಡಲು ನಿರಾಕರಿಸಿದ್ದರು.
ಸಿಬಿಐ v/s ಮಮತಾ ವಿವಾದ: ಮೌನವೇ ಆಭರಣ ಎಂದ ಟಿಆರ್ ಎಸ್
ಹಸ್ತಕ್ಷೇಪದ ಆರೋಪ ಮಾಡಿದ್ದ ಶಾ
2016ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜೀವ್ ಕುಮಾರ್ ವಿರುದ್ಧ ಆರೋಪ ಮಾಡಿದ್ದರು. ರಾಜೀವ್ ಕುಮಾರ್ ಅವರನ್ನು ಚುನಾವಣಾ ಕಾರ್ಯಗಳಿಂದ ದೂರ ಇರಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ವಿರೋಧ ಪಕ್ಷಗಳ ನಾಯಕರ ಮೇಲೆ ನಿಗಾ ಇರಿಸುವುದಲ್ಲದೆ, ಅವರ ಕೆಲಸಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಶಾ ಆರೋಪಿಸಿದ್ದರು.
ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದ ರಾಜೀವ್ ವಿದ್ಯುನ್ಮಾನ ಉಪಕರಣಗಳ ಮೂಲಕ ನಿಗಾ ಇರಿಸುವ ಚತುರತೆ ಹೊಂದಿದ್ದರು. ಸಿಐಡಿಯಲ್ಲಿ ವಿಶೇಷ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಮಾವೊವಾದಿಗಳ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದರು.
ಸಿಬಿಐ ಕಾಲಿಡದಂತೆ ನಿಷೇಧಿಸುವ ಅಧಿಕಾರ ರಾಜ್ಯಗಳಿಗೆ ಇದೆಯೇ? ಇಲ್ಲಿದೆ ಮಾಹಿತಿ
ಆಗ ಆರೋಪ, ಈಗ ಆಪ್ತ
ವಿಶೇಷವೆಂದರೆ ಇಂದು ರಾಜೀವ್ ಕುಮಾರ್ ಅವರ ಪರವಾಗಿ ಟೊಂಕಕಟ್ಟಿ ನಿಂತಿರುವ ಮಮತಾ ಬ್ಯಾನರ್ಜಿ, ಈ ಹಿಂದೆ ಅವರ ವಿರುದ್ಧವೇ ಆರೋಪ ಮಾಡಿದ್ದರು. ಎಡಪಕ್ಷದ ಆಡಳಿತವಿದ್ದ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಾಯ ಮಾಡಲು ವಿರೋಧ ಪಕ್ಷಗಳ ಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ. ಪಕ್ಷಗಳಲ್ಲಿನ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಅದೇ ರಾಜೀವ್ ಕುಮಾರ್ ಇಂದು ಮಮತಾರ ಆಪ್ತರ ವಲಯದಲ್ಲಿ ಒಬ್ಬರಾಗಿದ್ದಾರೆ.