Manish Sisodia: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಬಂಧನ, ಕಾರಣ ಹೇಳಿದ ಸಿಬಿಐ
ಕಳೆದ ವರ್ಷ ಜೂನ್ನಲ್ಲಿ ದೆಹಲಿಯ ಆಗಿನ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಬಂಧನದ ನಂತರ ಮನೀಶ್ ಸಿಸೋಡಿಯಾ ಬಂಧನವಾಗಿದೆ.
ನವದೆಹಲಿ, ಫೆಬ್ರವರಿ. 27: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ದೆಹಲಿಯ ಉಪ ಸಚಿವ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಭಾನುವಾರ ಬಂಧಿಸಿದೆ. ಪ್ರಕರಣದಲ್ಲಿ ಬಂಧನಕ್ಕೊಳಗಾದ ಎರಡನೇ ದೆಹಲಿ ಸಚಿವ ಮನೀಶ್ ಸಿಸೋಡಿಯಾ. ಬಂಧನಕ್ಕೆ ಕಾರಣ ತಿಳಿಸಿರುವ ಕೇಂದ್ರೀಯ ತನಿಳಾ ದಳ ಮನೀಶ್ ಸಿಸೋಡಿಯಾ ಅವರ ಉತ್ತರಗಳು ತೃಪ್ತಿಕರವಾಗಿಲ್ಲ ಎಂದಿದೆ.
2021 - 22 ರ ಅಬಕಾರಿ ನೀತಿಯ ರಚನೆ, ಟೆಂಡರ್ ಪ್ರಯೋಜನಗಳನ್ನು ಖಾಸಗಿ ವ್ಯಕ್ತಿಗಳಿಗೆ ವಿಸ್ತರಿಸುವುದು ಮತ್ತು ಅನುಷ್ಠಾನದಲ್ಲಿ ಅಕ್ರಮಗಳ ಬಗೆಗೀನ ತನಿಖೆಗಾಗಿ ಉಪಮುಖ್ಯಮಂತ್ರಿ ಮತ್ತು ಉಸ್ತುವಾರಿ ಅಬಕಾರಿ ಸಚಿವ, ದೆಹಲಿಯ ಜಿಎನ್ಸಿಟಿಡಿ ಮತ್ತು ಇತರ 14 ಜನರ ವಿರುದ್ಧ ತ್ವರಿತ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಭಾನುವಾರ ಬೆಳಗ್ಗೆ 11 ಗಂಟೆಗೆ ಸಿಬಿಐ ಕೇಂದ್ರ ಕಚೇರಿಗೆ ಆಗಮಿಸಿದ್ದ ಮನೀಶ್ ಸಿಸೋಡಿಯಾ ಅವರನ್ನು ದೆಹಲಿ ಮದ್ಯ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಎಫ್ಐಆರ್ನಲ್ಲಿ ಉಲ್ಲೇಖಿಸಲಾದ ದಿನೇಶ್ ಅರೋರಾ ಮತ್ತು ಇತರ ಆರೋಪಿಗಳೊಂದಿಗೆ ಸಂಪರ್ಕ ಮತ್ತು ಅನೇಕ ಫೋನ್ಗಳಿಂದ ಸಂದೇಶ ವಿನಿಮಯದ ವಿವರಗಳು ಸೇರಿದಂತೆ ಅಬಕಾರಿ ನೀತಿಯ ವಿವಿಧ ಅಂಶಗಳ ಮೇಲೆ ಆಮ್ ಆದ್ಮಿ ಪಕ್ಷದ ನಾಯಕನನ್ನು ವಿಚಾರಣೆ ಮಾಡಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಮನೀಶ್ ಸಿಸೋಡಿಯಾ ತನಿಖೆಗೆ ಸಹಕರಿಸುತ್ತಿಲ್ಲ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ನಿರ್ಣಾಯಕ ಅಂಶಗಳ ಬಗ್ಗೆ ಅಧಿಕಾರಿಗಳು ಕೇಳಿದ ಸ್ಪಷ್ಟೀಕರಣವನ್ನು ಮನೀಶ್ ಸಿಸೋಡಿಯಾ ನೀಡಿಲ್ಲ ಎಂದು ಏಜೆನ್ಸಿ ಅಧಿಕಾರಿಗಳು ತಿಳಿಸಿದ್ದಾರೆ. ಮನೀಶ್ ಸಿಸೋಡಿಯಾ ಕೇವಲ ತಪ್ಪಿಸಿಕೊಳ್ಳುವ ಉತ್ತರಗಳನ್ನು ನೀಡಿದರು ಮತ್ತು ವ್ಯತಿರಿಕ್ತ ಸಾಕ್ಷ್ಯಗಳನ್ನು ಮುಂದೆಯಿಟ್ಟರೂ ತನಿಖೆಗೆ ಸಹಕರಿಸಲಿಲ್ಲ ಎಂದು ಕೇಂದ್ರೀಯ ತನಿಖಾ ದಳ ಹೇಳಿದೆ.
ಸಿಸೋಡಿಯಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲು ಕಸ್ಟಡಿ ವಿಚಾರಣೆ ಅಗತ್ಯ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಸಚಿವರನ್ನು ಸೋಮವಾರ ನಿಗದಿತ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸಿಬಿಐ ತಿಳಿಸಿದೆ. ತನ್ನ ವಿರುದ್ಧದ ಪ್ರಕರಣವನ್ನು "ನಕಲಿ" ಎಂದು ಕರೆದಿದ್ದ ಮನೀಶ್ ಸಿಸೋಡಿಯಾ ಅವರು ಏಳೆಂಟು ತಿಂಗಳ ಜೈಲು ಶಿಕ್ಷೆಗೆ ಸಿದ್ಧ ಎಂದು ಸಿಬಿಐ ಕಚೇರಿಗೆ ವಿಚಾರಣೆಗೆ ತೆರಳುವ ಮುನ್ನ ಹೇಳಿದ್ದರು.

ಕಳೆದ ವರ್ಷ ಜೂನ್ನಲ್ಲಿ ದೆಹಲಿಯ ಆಗಿನ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಬಂಧನದ ನಂತರ ಮನೀಶ್ ಸಿಸೋಡಿಯಾ ಬಂಧನವಾಗಿದೆ. ಇಬ್ಬರೂ ಆಮ್ ಆದ್ಮಿ ಪಕ್ಷದ ದೆಹಲಿಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಯಶಸ್ವಿ ಪರಿವರ್ತನೆಗೆ ಕಾರಣ. ಇದರ ಜೊತೆಗೆ ಪಕ್ಷದ ಜನಪ್ರಿಯತೆ ಮತ್ತು ನಿರಂತರ ಚುನಾವಣಾ ಯಶಸ್ಸಿಗೆ ಕೊಡುಗೆ ನೀಡಿದ್ದಾರೆ.
ಮನೀಶ್ ಸಿಸೋಡಿಯಾ ಬಂಧನದಿಂದ ಕೇಜ್ರಿವಾಲ್ಗೆ ತಕ್ಷಣದ ಸವಾಲು ಎಂದರೆ ದೆಹಲಿ ಸರ್ಕಾರದ ಬಜೆಟ್ ಅನ್ನು ನಿಗದಿಪಡಿಸಿದಂತೆ ಮಂಡಿಸುವುದು ಮತ್ತು ಸಿಸೋಡಿಯಾ ಅವರ ಬದಲಿಗೆ ಮತ್ತೊಬ್ಬರನ್ನು ಕಂಡುಹಿಡಿಯುವುದು. ಆಮ್ ಆದ್ಮಿ ಪಕ್ಷದ ಮೂಲಗಳು ಕಂದಾಯ ಸಚಿವ ಕೈಲಾಶ್ ಗೆಹ್ಲೋಟ್ ಅವರು ಮುಂದಿನ ಹಣಕಾಸು ವರ್ಷಕ್ಕೆ ದೆಹಲಿ ಸರ್ಕಾರದ ಬಜೆಟ್ ಅನ್ನು ಮಂಡಿಸಬಹುದು ಎಂದು ಹೇಳಿದ್ದಾರೆ.
"ಉಪ ಮುಖ್ಯಮಂತ್ರಿಯನ್ನು ಸಿಬಿಐ ಬಂಧಿಸುವ ಸಾಧ್ಯತೆಯಿರುವುದರಿಂದ, ಕಳೆದ ಕೆಲವು ದಿನಗಳಿಂದ ಕೈಲಾಶ್ ಗೆಹ್ಲೋಟ್ ಅವರು ಬಜೆಟ್ ಸಂಬಂಧಿತ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಗೆಹ್ಲೋಟ್ 2023-24 ರ ಬಜೆಟ್ ಅನ್ನು ಮಂಡಿಸುವ ಸಾಧ್ಯತೆಯಿದೆ. ಮುಂದಿನ ತಿಂಗಳು ಬಜೆಟ್ ಮಂಡಿಸಲು ನಿರ್ಧರಿಸಲಾಗಿದೆ" ಎಂದು ಎಎಪಿ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications