ಕಾವೇರಿ: ಉರಿಯೋ ಬೆಂಕಿಗೆ ತುಪ್ಪ ಸುರಿದ ತಮಿಳುನಾಡು
ನವದೆಹಲಿ, ಸೆ 9: ಕರ್ನಾಟಕದಲ್ಲಿ ಕಾವೇರಿ ನೀರಿಗಾಗಿನ ಹೋರಾಟ ತಾರಕಕ್ಕೇರಿದ್ದರೂ, ತಮಿಳುನಾಡು ಸರಕಾರ ಹೊಸ ಬೇಡಿಕೆ ಮುಂದಿಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸಕ್ಕೆ ಮುಂದಾಗಿದೆ.
ಮುಂಗಾರು ಮಳೆ ಕೈಕೊಟ್ಟಿದ್ದರೂ, ಈ ಭಾಗದ ರೈತರ ಕಣ್ಣೀರಿಗೆ ಕ್ಯಾರೇ ಅನ್ನದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಕರ್ನಾಟಕದಿಂದ ಇನ್ನಷ್ಟು ನೀರು ಬಿಡಲು ಒತ್ತಡ ಹೇರಲಾರಂಭಿಸಿದ್ದಾರೆ. (ಕರ್ನಾಟಕ ಬಂದ್ ಎಲ್ಲೆಲ್ಲಿ ಏನು)
ಕರ್ನಾಟಕ ರಾಜ್ಯ ಸರಕಾರದ ವೈಫಲ್ಯವೋ, ಒಟ್ಟಿನಲ್ಲಿ ಸುಪ್ರೀಂಕೋರ್ಟ್ ಮೆಟ್ಟಲೇರಿ ದಿನವೊಂದಕ್ಕೆ ಹದಿನೈದು ಸಾವಿರ ಕ್ಯೂಸೆಕ್ಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ತಮಿಳುನಾಡು, ಕರ್ನಾಟಕದಿಂದ ನಮಗೆ ಇನ್ನೂ ನೀರಬರಬೇಕೆಂದು ಕಾವೇರಿ ಮೇಲುಸ್ತುವಾರಿ ಸಮಿತಿ ಮುಂದೆ ಬೇಡಿಕೆಯಿಟ್ಟಿದೆ.
ಹಾಲಿ ವರ್ಷದ 61 ಟಿಎಂಸಿ ನೀರಿನ ಕೊರತೆ ತುಂಬಲು ಸಮಿತಿ ಸೂಕ್ತ ನಿರ್ಧಾರ ಶೀಘ್ರದಲ್ಲೇ ಪ್ರಕಟಿಸಬೇಕೆಂದು ತಮಿಳುನಾಡು ಸಮಿತಿಯ ಮೊರೆಹೋಗಿದೆ.
ಕಳೆದ ಮೂರು ತಿಂಗಳಲ್ಲಿ ತಮಿಳುನಾಡಿಗೆ 94 ಟಿಎಂಸಿ ನೀರು ಹರಿದು ಬರಬೇಕಿತ್ತು, ಆದರೆ ಕರ್ನಾಟಕ 33 ಟಿಎಂಸಿ ನೀರನ್ನು ಮಾತ್ರ ಬಿಟ್ಟಿದೆ ಹೀಗಾಗಿ 61 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಸೂಚಿಸಬೇಕೆಂದು ತಮಿಳುನಾಡು ಹೊಸ ವರಸೆ ಎತ್ತಿದೆ.