ಕಾವೇರಿ ವಿವಾದ: ಮರಳಿನ ರಾಶಿಯಲ್ಲಿ ಶವದಂತೆ ಮಲಗಿದ ರೈತರು
ತಿರುಚ್ಚಿ (ತಮಿಳುನಾಡು), ಏಪ್ರಿಲ್ 06: ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿಯನ್ನು ತಕ್ಷಣವೇ ರಚಿಸಬೇಕೆಂದು ಆಗ್ರಹಿಸಿ ತಮಿಳುನಾಡಿನ ತಿರುಚ್ಚಿಯಲ್ಲಿ ರೈತರು ಮರಳಿನಲ್ಲಿ ತಮ್ಮನ್ನು ಹುಗಿದುಕೊಂಡು ಶವದಂತೆ ಮಲಗಿ ಪ್ರತಿಭಟನೆ ನಡೆಸಿದರು.
ದಕ್ಷಿಣ ಭಾರತದ ನದಿಗಳ ಅಂತರ್ ಜೋಡಣೆಯ ಕೃಷಿಕರ ರಾಷ್ಟ್ರೀಯ ಸಂಘದ ಸದಸ್ಯರು ರಾಜ್ಯಾಧ್ಯಕ್ಷ ಪಿ. ಅಯ್ಯಕಣ್ಣು ಅವರ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಾವೇರಿ ವಿವಾದ : ಏಪ್ರಿಲ್ 12ರಂದು ಕರ್ನಾಟಕ ಬಂದ್
ತಿರುಚ್ಚಿಯ ಕಾವೇರಿ ನದಿ ತಟದಲ್ಲಿ ಕುತ್ತಿಗೆಯವರೆಗೂ ಮರಳಿನಲ್ಲಿ ಹುಗಿದುಕೊಂಡು ಹೂವಿನ ಹಾರ ಹಾಕಿಕೊಂಡು ಶವದಂತೆ ಮಲಗಿದರು. ಸುಮಾರು 25 ಪ್ರತಿಭಟನಾಕಾರರು ಭಾಗವಹಿಸಿದ್ದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಮಿಳುನಾಡಿನ ರೈತರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಾವೇರಿ ನಿರ್ವಹಣಾ ಮಂಡಳಿ ರಚನೆ, ಕೇಂದ್ರದ ಅಂಗಳದಲ್ಲಿ ಚೆಂಡು, ಮುಂದೇನು?
ಸುಪ್ರೀಂ ಕೋರ್ಟ್ನ ಆದೇಶವನ್ನು ಗೌರವಿಸಿ ತಕ್ಷಣವೇ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕು ಎಂದು ಆಗ್ರಹಿಸಿದರು. ಇದರಿಂದ ಕರ್ನಾಟಕದಿಂದ ತಮಗೆ ಬರಬೇಕಾದ ತಮ್ಮ ಪಾಲಿನ ನೀರು ದೊರಕಲಿದ್ದು, ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಬೆಳಿಗ್ಗೆ 10.30ರ ಸುಮಾರಿಗೆ ಪ್ರತಿಭಟನೆ ಆರಂಭವಾಯಿತು. ಮಧ್ಯಾಹ್ನದ ವೇಳೆಗೆ ಪೊಲೀಸರು ಬಲವಂತದಿಂದ ಪ್ರತಿಭಟನಾಕಾರರನ್ನು ನದಿ ತೀರದಿಂದ ತೆರವುಗೊಳಿಸಿದರು.