ಕಾವೇರಿ ನೀರು ಬಿಡದಿದ್ದಕ್ಕೆ ಪರಿಹಾರ : ಸುಪ್ರೀಂ ಮುಂದೆ ವಿಚಾರಣೆ
ನವದೆಹಲಿ, ಫೆಬ್ರವರಿ 07 : ಕೃಷ್ಣರಾಜ ಸಾಗರ ಅಣೆಕಟ್ಟು ಬಕ್ಕಬರಿದಾಗಿ ಹೋಗಿದೆ. ಬಳಸಲು ಕೂಡ ಸಾಧ್ಯವಾಗದಂಥ ಡೆಡ್ ಸ್ಟೋರೇಜ್ ತಲುಪಿದೆ. ಇಂಥ ಸಮಯದಲ್ಲಿ ಕಾವೇರಿ ನೀರು ಬಿಟ್ಟಿಲ್ಲವೆಂದು ತಮಿಳುನಾಡು ಹಾಕಿರುವ ಅರ್ಜಿ ಮಂಗಳವಾರ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಪ್ರತಿದಿನ 2000 ಕ್ಯೂಸೆಕ್ಸ್ ಕಾವೇರಿ ನೀರನ್ನು ಬಿಡಲು ವಿಫಲವಾಗಿರುವುದರಿಂದ ತಮಿಳುನಾಡಿಗೆ ಭಾರೀ ನಷ್ಟವಾಗಿದ್ದು, 2,480 ಕೋಟಿ ರು. ಪರಿಹಾರ ದೊರಕಿಸಿಕೊಡಬೇಕೆಂದು ತಮಿಳುನಾಡು ಅರ್ಜಿ ಸಲ್ಲಿಸಿದೆ.[ಕಾವೇರಿ ಗಲಭೆ : ಪರಿಹಾರ ದೊರಕಿಸಿಕೊಡಲು ಸುಪ್ರೀಂ ನಕಾರ]

ಈ ಅರ್ಜಿಯನ್ನು ಜನವರಿ 9ರಂದು ಸರ್ವೋಚ್ಚ ನ್ಯಾಯಾಲಯದ ಮುಂದೆ ತಮಿಳುನಾಡು ಸಲ್ಲಿಸಿತ್ತು. ಈ ಸಮಯದಲ್ಲಿ ಜಲ ವಿವಾದದ ವ್ಯಾಜ್ಯ ಇತ್ಯರ್ಥವಾಗುವವರೆಗೆ ಪ್ರತಿದಿನ 2000 ಕ್ಯೂಸೆಕ್ಸ್ ನೀರು ಬಿಡಬೇಕೆಂದು ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ತಮಿಳುನಾಡಿನ ಶಿವ ಕುಮಾರ್ ಎಂಬುವವರು ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿದ್ದಾರೆ. ಈ ಅರ್ಜಿ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ನ್ಯಾ. ಅಮಿತವ ರಾಯ್ ಮತ್ತು ನ್ಯಾ. ಎಎನ್ ಖಾನ್ವಿಲ್ಕರ್ ಅವರಿರುವ ವಿಭಾಗೀಯ ಪೀಠದ ಮುಂದೆ ಮಂಗಳವಾರ ಮಧ್ಯಾಹ್ನ ಬರಲಿದೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಂಭವಿಸಿದ ಗಲಭೆಯಲ್ಲಿ ತಮಿಳುನಾಡಿನ ನಾಗರಿಕರಿಗೆ ಆದ ನಷ್ಟವನ್ನು ಪರಿಹಾರ ರೂಪದಲ್ಲಿ ಕರ್ನಾಟಕದಿಂದ ಕೊಡಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಕೂಡ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಡಿಸೆಂಬರ್ 9ರಂದು ಹೊರಡಿಸಿದ ಆದೇಶದಲ್ಲಿ, ಕಾವೇರಿ ನೀರು ವ್ಯಾಜ್ಯ ನ್ಯಾಯಾಧೀಕರಣದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕರ್ನಾಟಕ, ತಮಿಳುನಾಡು ಮತ್ತು ಕೇರಳಕ್ಕೆ ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದೆ.












Click it and Unblock the Notifications