ಅಪನಗದೀಕರಣಕ್ಕೆ ಒಂದು ವರ್ಷ: ಮೋದಿ ಮೇಲೆ ವ್ಯಂಗ್ಯೋಕ್ತಿಯ ಪ್ರಹಾರ

Recommended Video

      ಮೋದಿಯವರ ಅಪನಗದೀಕರಣದ ಬಗ್ಗೆ ವ್ಯಂಗ್ಯ ಮಾಡುವ ಕಾರ್ಟೂನ್ ಗಳ ಸುರಿಮಳೆ | Oneindia Kannada

      ನವದೆಹಲಿ, ನವೆಂಬರ್ 08: ಜೇಬಿಗೊಂದು ರಾಜಗಾಂಭೀರ್ಯ ನೀಡಿದ್ದ ಐನೂರು, ಸಾವಿರದ ನೋಟುಗಳು ಮೌಲ್ಯವೇ ಇಲ್ಲದ, ಪೇಪರ್ ಪೀಸುಗಳು ಎನ್ನಿಸಿದ ದಿನ ಇದು! ಅಪನಗದೀಕರಣ ಎಂಬ ಅನಿರೀಕ್ಷಿತ ಆಘಾತಕ್ಕೆ ಇದೀಗ ಮೊದಲ ವಾರ್ಷಿಕೋತ್ಸವ(ನ.08).

      ಕಪ್ಪುಹಣ ನಿಗ್ರಹ, ಭ್ರಷ್ಟಾಚಾರ ತಡೆ, ಭಯೋತ್ಪಾದನೆ ನಿರ್ಮೂಲನೆ ಮುಂತಾದ ಹಲವು ಪ್ರಮುಖ ಉದ್ದೇಶಗಳನ್ನಿಟ್ಟುಕೊಂಡು ಕೇಂದ್ರ ಎನ್ ಡಿಎ ಸರ್ಕಾರ ಘೋಷಿಸಿದ ಅಪನಗದೀಕರಣದ ಪರಿಣಾಮವನ್ನು ನಿಕಷಕ್ಕೆ ಹಚ್ಚಿ ನೋಡುವ ಸಂದರ್ಭ ಇದು. ಆದರೆ ಬ್ಯಾಂಕುಗಳ ಮುಂದೆ ಹನುಮಂತನ ಬಾಲದ ಹಾಗೆ ಸೃಷ್ಟಿಯಾಗಿದ್ದ ಕ್ಯೂಗಳು, ಹಣವಿಲ್ಲದೆ ಸದಾ 'ಮುಚ್ಚಿದ ಬಾಗಿಲು' ಆಗಿರುತ್ತಿದ್ದ ಎಟಿಎಂಗಳು, ನಂತರ ಎರಡು ಸಾವಿರದ ನೋಟು ಬಿಡುಗಡೆಯಾದರೂ, ಚಿಲ್ಲರೆಗಾಗಿ ಯಾರ್ಯಾರದೋ ಮುಂದೆ ಕೈಬಿಚ್ಚಿನಿಂತ ಕ್ಷಣ... ಎಲ್ಲವೂ ಅಪನಗದೀಕರಣದ ಕುರಿತು ಶ್ರೀಸಾಮಾನ್ಯನಲ್ಲಿ ರೇಜಿಗೆ ಹುಟ್ಟಿಸಿದ್ದರೆ ಅಚ್ಚರಿಯೇನಿಲ್ಲ.

      ಆದರೂ ಈ ನಡೆಯಿಂದ ಭ್ರಷ್ಟಾಚಾರ ಕಡಿಮೆಯಾದೀತು, ಕಪ್ಪುಹಣದ ಹಾವಳಿ ತಪ್ಪೀತು, ಭಯೋತ್ಪಾದನೆ ನಿಯಂತ್ರಣಕ್ಕೆ ಬಂದೀತು ಎಂದು ಕಷ್ಟವನ್ನೆಲ್ಲ ತಾಳ್ಮೆಯಲ್ಲೇ ಸಹಿಸಿಕೊಂಡವರೂ ಸಾಕಷ್ಟು ಜನರಿದ್ದಾರೆ. ಹೀಗೆ ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ ಅಪನಗದೀಕರಣದ ವ್ಯಾಖ್ಯಾನ ಬದಲಾಗಿದೆ, ಪರಿಣಾಮವೂ ಸಹ!

      ಆದರೂ ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ಅಪನಗದೀಕರಣದ ಮೊದಲ ವರ್ಷದ ನೆನಪಿಗೆ ವ್ಯಂಗ್ಯೋಕ್ತಿಗಳ ಸುರಿಮಳೆ ಶುರುವಾಗಿದೆ. ಪ್ರಧಾನಿ ಮೋದಿಯವರ ನಡೆಯನ್ನು ಟೀಕಿಸುತ್ತಿರುವ ಹಲವರು ಅಪನಗದೀಕರಣ ಒಂದು ಬೃಹತ್ ವೈಫಲ್ಯ ಎಂದು ದೂರಿದ್ದಾರೆ. ಅಪನಗದೀಕರಣವನ್ನು ಕೆಲವರು ಅರ್ಥೈಸಿಕೊಂಡಿದ್ದು ಮತ್ತು ವ್ಯಂಗ್ಯ ರೇಖೆಗಳ ಮೂಲಕ ಅವನ್ನು ವ್ಯಕ್ತಪಡಿಸಿದ್ದು ಹೇಗೆ ಎಂಬುದು ಇಲ್ಲಿದೆ. ಚಿತ್ರಗಳೇ ಕಥೆ ಹೇಳುತ್ತವೆ ಎಂಬುದು ನಿಜವೇ ಆದರೆ ಓದುಗರು ತಮ್ಮ ವಿವೇಚನೆಗೆ ತಕ್ಕಂತೆ ಈ ಚಿತ್ರಗಳನ್ನು ಅರ್ಥೈಸಿಕೊಳ್ಳಬಹುದು..

      ಪಾರ್ಟಿಗೆ ರೆಡೀನಾ..?!

      ಆಸ್ಪತ್ರೆಯಲ್ಲಿ ಮಲಗಿರುವ ಅರ್ಥವ್ಯವಸ್ಥೆ. ಅಪನಗದೀಕರಣದ ಒಂದು ವರ್ಷದ ಸವಿನೆನಪಿಗಾಗಿ ಪಾರ್ಟಿ ಮಾಡುವುದಕ್ಕೆಂದು ಕೇಕು ಹಿಡಿದು ತರುತ್ತಿರುವ ಮೋದಿ, ಹಿಂದಿನಿಂದ ವಾದ್ಯ ಊದುತ್ತ ಬರುತ್ತಿರುವ ವಿತ್ತ ಸಚಿವ ಅರುಣ್ ಜೇಟ್ಲಿ... ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಅವರ ಈ ಕಾರ್ಟೂನ್ ಅಪನಗದೀಕರಣದ ವ್ಯತಿರಿಕ್ತ ಪರಿಣಾಮಕ್ಕೆ ಕನ್ನಡಿ ಹಿಡಿಯುವಂತಿದೆ.

      ಇದೇ ಅಪನಗದೀಕರಣ!

      ಬ್ಯಾಂಕಿನ ಮುಂದೆ ಸಾಲಾಗಿ ನಿಂತ ಜನರನ್ನು ತಪಾಸಣೆ ಮಾಡಿ ಒಳಗೆ ಕಳಿಸುತ್ತಿರುವ ಸಸಿಬ್ಬಂದಿ. ಜೊತೆಗೆ ದಾಖಲೆಗಳನ್ನೆಲ್ಲ ಪರಿಶೀಲಿಸುತ್ತಿರುವ ಮತ್ತೊಬ್ಬ ಸಿಬ್ಬಂದಿ. ಹಣ ಠೇವಣಿ ಮಾಡಲು ಬಂದು, ಸಾಲಲ್ಲಿ ನಿಂತು ಸುಸ್ತಾಗಿರುವ ಜನರು. ಇತ್ತ ಬ್ಯಾಂಕಿನ ಗೋಡೆಗೆ ಕನ್ನ ಹಾಕಿ ಮೂಟೆಗಟ್ಟಲೆ ಹಣವನ್ನು ದೋಚಿಕೊಂಡು ಹೋಗುತ್ತಿರುವ ಉಧ್ಯಮಿಗಳು, ರಾಜಕಾರಣಿಗಳು... ಕೆ.ಚಂದ್ರಶೇಖರ್ ಅವರು ಟ್ವಿಟ್ಟರ್ ಖಾತೆಯಲ್ಲಿರುವ ಈ ಚಿತ್ರ ಅಪನಗದೀಕರಣ ಶ್ರೀಸಾಮಾನ್ಯನನ್ನಷೇ ಹೈರಾಣಾಗಿಸಿ, ಉಳ್ಳವರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುತ್ತಿದೆ ಎಂಬುದನ್ನು ಸಮರ್ಥವಾಗಿ ವಿವರಿಸಿದೆ.

      ಮೋದಿ ಎಂದರೆ ಒಂದು ದುರಂತ!

      ಮೋದಿ ಎಂದರೆ ಒಂದು ದುರಂತವಿದ್ದಹಾಗೆ. ಆದರೆ ಅವರು ಭಕ್ತರು ಮಾತ್ರವೇ ಅಪನಗದೀಕರಣದಿಂದ ಒಳಿತಾಗಿದೆ ಎಂದು ಕುಣಿಯುತ್ತಿದ್ದಾರೆ ಎಂದು ಫೇಮಸ್ ಗಾಂಧಿ ಎಂಬ ಟೀಟ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಭಾರತೀಯ ಅರ್ಥವ್ಯವಸ್ಥೆಯಲ್ಲಿರುವ ಕಪ್ಪುಹಣದ ಹುಟ್ಟಡಗಿಸುತ್ತೇನೆ ಎಂದ ಮೋದಿ ಪುಟ್ಟ ಇಲಿಯೊಂದನ್ನು ಹಿಡಿದು ಬೀಗುತ್ತಿರುವ ಚಿತ್ರವನ್ನೂ ಅದರೊಂದಿಗೆ ಟ್ವೀಟ್ ಮಾಡಲಾಗಿದೆ.

      ಕಪ್ಪುಹಣದ ಮೇಲೆ ಸರ್ಜಿಕಲ್ ಸ್ಟ್ರೈಕ್!

      ಕಪ್ಪು ಹಣವನ್ನು ಹೊರತೆಗೆಯಲಾಗಿಲ್ಲ. ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿಲ್ಲ. ಅಪನಗದೀಕರಣದಿಂದ ಜನರು ನೋವನುಭವಿಸುತ್ತಿದ್ದಾರೆ ಎಂಬುದನ್ನು ಬಿಟ್ಟರೆ ಇನ್ನೇನೂ ಆಗಿಲ್ಲ! ಎಂದು ರುಚಿರಾ ಚತಿರ್ವೇದಿ ಎನ್ನುವವರು ಟ್ವೀಟ್ ಮಾಡಿದ್ದಾರೆ. ಕಪ್ಪುಹಣದ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ ನಿಂದ ಕಾರ್ಪೋರೇಟರ್ ಗಳಿಗೆ ಅನುಕೂಲವಾಗಿದ್ದು ಬಿಟ್ಟರೆ ಇನ್ನೆಲ್ಲರಿಗೂ ಸಮಸ್ಯೆಯೇ ಆಗಿದೆ ಎಂಬರ್ಥದ ಕಾರ್ಟೂನ್ ಅನ್ನೂ ಅವರು ಟ್ವೀಟ್ ಮಾಡಿದ್ದಾರೆ.

      ಕಪ್ಪುಹಣದ ವಿರುದ್ಧ ಬಿಜೆಪಿಯ ಹೋರಾಟ ನಿಲ್ಲೋದಿಲ್ಲ

      ವಿಪಕ್ಷಗಳು ಅಪನಗದೀಕರಣದ ಕುರಿತು ಎಷ್ಟೇ ಋಣಾತ್ಮಕ ಮಾತುಗಳನ್ನಾಡಿದ್ದರೂ, ಕಪ್ಪುಹಣದ ಕುರಿತ ಬಿಜೆಪಿಯ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ಆದು ಇಂದು ಮತ್ತು ಭವಿಷ್ಯದಲ್ಲೂ ಮುಂದುವರಿಯುತ್ತದೆ ಎಂದು ಗೀತಿಕಾ ಸ್ವಾಮಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

      ಸಾಮಾನ್ಯ ಜನ ನಿಮ್ಮೊಂದಿಗಿದ್ದಾರೆ ಮೋದಿಜೀ!

      ಇದು ಕಪ್ಪುಹಣದ ವಿರುದ್ಧದ ಹೋರಾಟ. ಒಬ್ಬ ಸಾಮಾನ್ಯ ಮನುಷ್ಯನಾಗಿ ನಿಮ್ಮೊಂದಿಗೆ ನಾನಿದ್ದೇನೆ ಮೋದೀಜೀ ಎಂದು, ಶ್ರೀಸಾಮಾನ್ಯನೊಬ್ಬ ಬ್ಯಾನರ್ ಹಿಡಿದಿರುವ ಚಿತ್ರವನ್ನು ಡಾ.ಶೋಭಾ ಎನ್ನುವವರು ಟ್ವೀಟ್ ಮಾಡಿ, ಅಪನಗದೀಕರಣಕ್ಕೆ ತಮ್ಮ ಬೆಂಬಲವನ್ನೂ ಸೂಚಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+