ಎಐಎಡಿಎಂಕೆ ನಾಯಕಿ ಶಶಿಕಲಾಗೆ ನಿರಾಳ ತಂದ ಸುಪ್ರೀಂ ಕೋರ್ಟ್ ಆದೇಶ
ಶಶಿಕಲಾ ವಿರುದ್ಧ ಸಲ್ಲಿಕೆಯಾಗಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್. ಎಐಎಡಿಎಂಕೆ ಕಾರ್ಯದರ್ಶಿ ಹುದ್ದೆಯಿಂದ ಶಶಿಕಲಾ ವಜಾಕ್ಕೆ ಆಗ್ರಹಿಸಿದ್ದ ಪಿಐಎಲ್.
ನವದೆಹಲಿ, ಜುಲೈ 28: ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾದ ವಿ. ಶಶಿಕಲಾ ಅವರು ಹೊಂದಿರುವ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕುವಂತೆ ಆದೇಶ ನೀಡಬೇಕೆಂಬ ಮನವಿಯೊಂದನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಅಕ್ರಮ ಆಸ್ತಿ ವಿಚಾರದಲ್ಲಿ ಜೈಲು ಪಾಲಾಗಿರುವ ಶಶಿಕಲಾ ಅವರು, ಎಐಎಡಿಕೆಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗುವ ಅರ್ಹತೆ ಕಳೆದುಕೊಂಡಿದ್ದಾರೆ. ಹಾಗಾಗಿ, ಅವರನ್ನು ಆ ಜವಾಬ್ದಾರಿಯುತ ಸ್ಥಾನದಿಂದ ವಜಾಗೊಳಿಸುವಂತೆ ಸಲಹೆ ನೀಡಬೇಕು ಎಂದು ತಮಿಳುನಾಡಿನ ಆಮ್ ಆದ್ಮಿ ಪಾರ್ಟಿಯ ಘಟಕ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿತ್ತು.

ಇದಲ್ಲದೆ, ತಮಿಳುನಾಡಿನ ಹಾಲಿ ಮುಖ್ಯಮಂತ್ರಿ ಪಳನಿ ಸ್ವಾಮಿ ಹಾಗೂ ಅವರ ಸಂಪುಟದ ಸಚಿವರು ಯಾರೂ ಶಶಿಕಲಾ ಅವರ ಸಲಹೆಯನ್ನು ಕೇಳದಿರುವಂತೆ ಅವರಿಗೆ ತಾಕೀತು ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿಯ ಮತ್ತೊಂದು ಮನವಿಯನ್ನೂ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ಮನವಿಯ ಬಗ್ಗೆ ಸ್ಪಷ್ಟ ಉತ್ತರ ಕೊಟ್ಟಿರುವ ಸುಪ್ರೀಂ ಕೋರ್ಟ್, ''ಆರೋಪಿಯನ್ನು ತಮ್ಮ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರಿಸಬೇಕೇ, ಬೇಡವೇ ಎಂಬುದನ್ನು ಆಯಾ ಪಕ್ಷದ ರಾಜಕಾರಣಿಗಳೇ ನಿರ್ಧರಿಸಬೇಕು. ಅಲ್ಲದೆ, ಯಾವುದೇ ರಾಜ್ಯದ ಮುಖ್ಯಮಂತ್ರಿ ಹಾಗೂ ಅವರ ಮಂತ್ರಿ ಮಂಡಲದ ಸಚಿವರು ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಯಿಂದ ಸಲಹೆ ಕೇಳುವುದು ತಪ್ಪು ಎಂದು ಹೇಳಲಾಗದು'' ಎಂದು ಹೇಳಿದೆ.












Click it and Unblock the Notifications