ಕೇರಳದಲ್ಲಿ ಕಾಂಗ್ರೆಸ್, ಒಡಿಶಾ ಬಿಜೆಡಿ, ಉತ್ತರಾಖಂಡದಲ್ಲಿ ಬಿಜೆಪಿಗೆ ಒಲಿದ ಗೆಲುವು
ನವದೆಹಲಿ, ಜೂನ್ 3: ದೇಶದ ಮೂರು ರಾಜ್ಯಗಳಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಶುಕ್ರವಾರ ಹೊರ ಬಿದ್ದಿದೆ. ಒಡಿಶಾ, ಕೇರಳ ಮತ್ತು ಉತ್ತರಾಖಂಡದಲ್ಲಿ ಮತದಾರರ ತೀರ್ಪು ಏನು ಎಂಬುದು ಸ್ಪಷ್ಟವಾಗಿದೆ.
ಒಡಿಶಾದ ಬ್ರಜರಾಜನಗರ ವಿಧಾನಸಭಾ ಕ್ಷೇತ್ರ, ಕೇರಳದ ತೃಕ್ಕಾಕರ್ ವಿಧಾನಸಭೆ ಕ್ಷೇತ್ರ ಮತ್ತು ಉತ್ತರಾಖಂಡದ ಚಂಪಾವತ್ ವಿಧಾನಸಭೆ ಕ್ಷೇತ್ರಗಳಲ್ಲಿ ನಡೆದ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ.
ಕೇರಳದಲ್ಲಿ ಕಾಂಗ್ರೆಸ್, ಒಡಿಶಾದಲ್ಲಿ ಬಿಜು ಜನತಾ ದಳ ಹಾಗೂ ಉತ್ತರಾಖಂಡದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಗೆಲುವಿನ ಬಾವುಟ ಹಾರಿಸಿದ್ದಾರೆ. ಇದರ ಮಧ್ಯೆ ಕರ್ನಾಟಕದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಫಲಿತಾಂಶವೇನಾಯ್ತು ಎನ್ನುವುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಚಂಪಾವತ್ ಕ್ಷೇತ್ರದಲ್ಲಿ ಹಾಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಗೆಲುವು
ಉತ್ತರಾಖಂಡದ ಚಂಪಾವತ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಹಾಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕಾಂಗ್ರೆಸ್ನ ನಿರ್ಮಲಾ ಗಹ್ಟೋರಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇತ್ತೀಚಿನ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಖತಿಮಾ ವಿಧಾನಸಭಾ ಕ್ಷೇತ್ರದಲ್ಲಿ ಮುಖಭಂಗ ಅನುಭವಿಸಿದ್ದ ಧಾಮಿ, ಕಾಂಗ್ರೆಸ್ನ ಭುವನ್ ಚಂದ್ರ ಕಪ್ರಿ ವಿರುದ್ಧ ಸೋಲು ಕಂಡಿದ್ದರು. ಈ ಹಿನ್ನೆಲೆ ಚಂಪಾವತ್ ಕಣದಿಂದ ಸ್ಪರ್ಧಿಸಿ ಶುಕ್ರವಾರ ಗೆಲುವಿನ ಬಾವುಟ ಹಾರಿಸಿದ್ದಾರೆ.

ಬಿಜೆಡಿ ಅಭ್ಯರ್ಥಿಗೆ ಗೆಲುವಿನ ಉಡುಗೊರೆ ನೀಡಿದ ಮತದಾರ
ಒಡಿಶಾದ ಜಾರ್ಸುಗುಡ ಜಿಲ್ಲೆಯ ಬ್ರಜರಾಜನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗಾಗಿ ಮೇ 31ರ ಮಂಗಳವಾರ ಮತದಾನ ನಡೆದಿತ್ತು. ಅಂದು ಶೇ.71.90ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, 11 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಶುಕ್ರವಾರ ಹೊರಬಿದ್ದ ಫಲಿತಾಂಶದಲ್ಲಿ ಬಿಜು ಜನತಾ ದಳದ ಅಲಕಾ ಮೊಹಂತಿಗೆ ಮತದಾರರು ಗೆಲುವಿನ ಉಡುಗೊರೆ ನೀಡಿದ್ದಾರೆ.

ದೇವರನಾಡಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಲಿದ ಸ್ಥಾನ
ಕೇರಳದ ಎರ್ನಾಕುಲಂ ಜಿಲ್ಲೆಯ ತೃಕ್ಕಾಕರ ವಿಧಾನಸಭಾ ಕ್ಷೇತ್ರಕ್ಕೂ ಮೇ 31ರಂದು ಉಪಚುನಾವಣೆ ನಡೆದಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಶೇ.68.75ರಷ್ಟು ಮತದಾನವಾಗಿತ್ತು. ಇದು ಕ್ಷೇತ್ರದಲ್ಲಿ ಆಗಿರುವ ಅತ್ಯಂತ ಕಡಿಮೆ ಮತದಾನ ಎಂದು ಗುರುತಿಸಿಕೊಂಡಿದ್ದು, ಈ ಕ್ಷೇತ್ರದ ಫಲಿತಾಂಶವು ಶುಕ್ರವಾರ ಹೊರ ಬಿದ್ದಿತು. ಕಾಂಗ್ರೆಸ್ ನಾಯಕಿ ಉಮಾ ಥಾಮಸ್ ಮತ್ತು ಸಿಪಿಐ(ಎಂ)ನ ಡಾ. ಜೋ ಜೋಸೆಫ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು. ಪಿ ಟಿ ಧಾಮಸ್ ನಿಧನದ ನಂತರದಲ್ಲಿ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ನಡೆದಿದ್ದು, ಅವರ ನಿಧನ ಬೆನ್ನಲ್ಲೇ ನಡೆದ ಚುನಾವಣೆಯಲ್ಲಿ ಅವರ ಪತ್ನಿಯೇ ಆಗಿರುವ ಉಮಾ ಥಾಮಸ್ ಜಯ ಗಳಿಸಿದ್ದಾರೆ.

ಕರ್ನಾಟಕದ ವಿಧಾನ ಪರಿಷತ್ ಚುನಾವಣೆ ಫಲಿತಾಂಶ
ರಾಜ್ಯದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಏಳು ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿಯ ನಾಲ್ವರು, ಕಾಂಗ್ರೆಸ್ ಪಕ್ಷದಿಂದ ಇಬ್ಬರು ಹಾಗೂ ಜೆಡಿಎಸ್ ಪಕ್ಷದಿಂದ ಒಬ್ಬ ಅಭ್ಯರ್ಥಿಯು ರಾಜ್ಯದ ಮೇಲ್ಮನೆಗೆ ಆಯ್ಕೆ ಆಗಿದ್ದಾರೆ. ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ, ಹೇಮಲತಾ ನಾಯಕ್, ಎಸ್. ಕೇಶವಪ್ರಸಾದ್, ಲಕ್ಷ್ಮಣ್ ಸಂಗಪ್ಪ ಸವದಿ ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್ಸಿನ ಎಂ. ನಾಗರಾಜು ಯಾದವ್, ಕೆ. ಅಬ್ದುಲ್ ಜಬ್ಬರ್ ಮತ್ತು ಜೆಡಿಎಸ್ ಪಕ್ಷದಿಂದ ಟಿ.ಎ. ಶರವಣ ಜಯ ಗಳಿಸಿದ್ದಾರೆ.












Click it and Unblock the Notifications