ಬಜೆಟ್ ಅಧಿವೇಶನ; ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ
ನವದೆಹಲಿ, ಜನವರಿ 24; ಕೋವಿಡ್ ಪರಿಸ್ಥಿತಿ ನಡುವೆಯೇ ಸಂಸತ್ನ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಜನವರಿ 31ರಂದು ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ರ ಬಜೆಟ್ ಮಂಡಿಸಲಿದ್ದಾರೆ.
ಸೋಮವಾರ ದೇಶದಲ್ಲಿ 3.06 ಲಕ್ಷ ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಮಾರ್ಗಸೂಚಿ ಪಾಲನೆ ಮಾಡುತ್ತಾ ಕಲಾಪ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಬಜೆಟ್ 2022; ರೈಲ್ವೆಯ ವೆಚ್ಚ ಶೇ 15 ರಿಂದ 20ರಷ್ಟು ಏರಿಕೆ
ಜನವರಿ 31ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಫೆಬ್ರವರಿ 1ರಂದು ಬಜೆಟ್ ಮಂಡನೆಯಾಗಲಿದ್ದು, ಮೊದಲ ಹಂತದ ಕಲಾಪ ಫೆಬ್ರವರಿ 11ರ ತನಕ ನಡೆಯಲಿದೆ. ಮಾರ್ಚ್ 14ರಿಂದ ಏಪ್ರಿಲ್ 8ರ ತನಕ ಎರಡನೇ ಹಂತದ ಕಲಾಪ ನಡೆಯಲಿದೆ.
ಬಜೆಟ್; ಬೆಂಗಳೂರು-ಕಣ್ಣೂರು ರೈಲು ಕೋಜಿಕ್ಕೋಡ್ ತನಕ ವಿಸ್ತರಣೆ
ಬಜೆಟ್ ಅಧಿವೇಶನದ ವೇಳೆ ದಿನದ ಮೊದಲಾರ್ಧ ರಾಜ್ಯಸಭೆ ಕಲಾಪ ನಡೆಯಲಿದೆ. ಮಧ್ಯಾಹ್ನ ಲೋಕಸಭೆ ಕಲಾಪ ನಡೆಯಲಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆ ತನಕ ರಾಜ್ಯಸಭೆ ಕಲಾಪ ನಡೆಸಲು ತೀರ್ಮಾನಿಸಲಾಗಿದೆ.
ಬಜೆಟ್; ದೆಹಲಿ-ವಾರಣಾಸಿ ಹೈ-ಸ್ಪೀಡ್ ರೈಲು ಕಾರಿಡಾರ್ ಘೋಷಣೆ?
ಸಭಾಪತಿ ವೆಂಕಯ್ಯ ನಾಯ್ಡು ಒಪ್ಪಿಗೆ ಬಳಿಕ ಖಚಿತವಾದ ಸಮಯವನ್ನು ಪ್ರಕಟಿಸಲಾಗುತ್ತದೆ. ಕೋವಿಡ್ ಸೋಂಕು ತಗುಲಿರುವ ಅವರು ಹೈದರಾಬಾದ್ನಲ್ಲಿದ್ದಾರೆ. ಲೋಕಸಭೆ ಕಲಾಪವನ್ನು ಸಂಜೆ 4 ರಿಂದ ರಾತ್ರಿ 9ರ ತನಕ ನಡೆಸಲು ಉದ್ದೇಶಿಸಲಾಗಿದೆ.
ಸಿಬ್ಬಂದಿ, ಸಂಸದರು, ಮಾಧ್ಯಮದವರ ಪ್ರವೇಶಕ್ಕೆ ಈ ಹಿಂದೆ ಇದ್ದ ನಿರ್ಬಂಧಗಳು ಮುಂದುವರೆಯಲಿವೆ. ಸಾಮಾನ್ಯ ಪಾಸುಗಳನ್ನು ಪಡೆದು ಕಲಾಪ ವೀಕ್ಷಣೆ ಮಾಡಲು ಬರುವ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ರಾಜ್ಯಸಭೆ, ಲೋಕಸಭೆ ಸಂಸದರಿಗೆ ಪೇಪರ್ ಮೂಲಕ ಬಿಲ್ಗಳ ವಿವರಗಳನ್ನು ನೀಡುವುದಿಲ್ಲ. ಸದಸ್ಯರು ಆನ್ಲೈನ್ ಮೂಲಕ ತಮ್ಮ ಹಾಜರಾತಿಯನ್ನು ಖಚಿತಗೊಳಿಸಬೇಕಿದೆ.
ಕಲಾಪಕ್ಕೆ ಆಗಮಿಸುವ ಸದಸ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಬೂಸ್ಟರ್ ಡೋಸ್ ಲಸಿಕೆ ಪಡೆಯುವ ಅರ್ಹತೆ ಹೊಂದಿರುವವರು ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸಲಾಗುತ್ತದೆ.
2020ರ ಮುಂಗಾರು ಅಧಿವೇಶನ ಕೋವಿಡ್ ಪರಿಸ್ಥಿತಿಯಲ್ಲಿಯೇ ನಡೆದಿತ್ತು. ಆಗಲೂ ಮೊದಲು ರಾಜ್ಯಸಭೆ ಕಲಾಪ ಬಳಿಕ ಲೋಕಸಭೆ ಕಲಾಪ ನಡೆಸಲಾಗಿತ್ತು. ಇದೇ ಮಾದರಿಯನ್ನು ಬಜೆಟ್ ಅಧಿವೇಶನದಲ್ಲಿಯೂ ಅನುಸರಿಸಲಾಗುತ್ತದೆ.
4ನೇ ಬಜೆಟ್; ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ನಾಲ್ಕನೇ ಬಜೆಟ್ ಮಂಡಿಸಲಿದ್ದಾರೆ. ಇದುವರೆಗೂ ಭಾರತ 23 ಹಣಕಾಸು ಸಚಿವರನ್ನು ನೋಡಿದ್ದು, ಒಟ್ಟು 8 ಜನ ಸಚಿವರು ಮಾತ್ರ ಸತತ 4 ಬಜೆಟ್ ಮಂಡನೆ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಸತತ 4ನೇ ಬಜೆಟ್ ಮಂಡನೆ ಮಾಡಲಿದ್ದಾರೆ 9ನೇ ಹಣಕಾಸು ಸಚಿವರು ಎಂಬ ಹೆಗ್ಗೆಳಿಕೆ ಪಡೆಯಲಿದ್ದಾರೆ.
ಬಜೆಟ್ ಅಧಿವೇಶನದ ಮುಖ್ಯಾಂಶಗಳು
* ಜನವರಿ 31ರಂದು ಬಜೆಟ್ ಅಧಿವೇಶನ ಆರಂಭ. ಮೊದಲ ದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ರಿಂದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ.
* ಫೆಬ್ರವರಿ 1ರಂದು ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್ 2022-23ರ ಬಜೆಟ್ ಮಂಡಿಸಲಿದ್ದಾರೆ.
* ಬಜೆಟ್ ಅಧಿವೇಶನವನ್ನು ಎರಡು ಭಾಗವಾಗಿ ವಿಂಗಡನೆ ಮಾಡಲಾಗಿದೆ. ಜನವರಿ 31ರಿಂದ ಫೆಬ್ರವರಿ 11ರ ತನಕ ಮೊದಲ ಹಂತದ ಅಧಿವೇಶನ ನಡೆಯಲಿದೆ.
* ಎರಡನೇ ಹಂತದ ಬಜೆಟ್ ಅಧಿವೇಶನ ಮಾರ್ಚ್ 14 ರಿಂದ ಏಪ್ರಿಲ್ 8ರ ತನಕ ನಡೆಯಲಿದೆ.
ಅಧಿವೇಶನದ ನಡುವೆ ಚುನಾವಣೆ: ಇತ್ತ ಬಜೆಟ್ ಅಧಿವೇಶನದ ನಡುವೆಯೇ ಅತ್ತ 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಉತ್ತರಾಖಂಡ ಮತ್ತು ಗೋವಾ ವಿಧಾನಸಭೆ ಚುನಾವಣೆಗಳು ವಿವಿಧ ಹಂತದಲ್ಲಿ ನಡೆಯಲಿವೆ. ಎಲ್ಲಾ ರಾಜ್ಯಗಳ ಮತ ಎಣಿಕೆ ಮಾರ್ಚ್ 10ರಂದು ನಡೆಯಲಿದೆ.
5 ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ 7 ಹಂತದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.