Breaking: ಜಮ್ಮು ಕಾಶ್ಮೀರದ ಕಾರಾಗೃಹ ಡಿಜಿಪಿ ಹತ್ಯೆ: ಮನೆಗೆಲಸದ ಆರೋಪಿ ಬಂಧನ
ಶ್ರೀನಗರ ಅಕ್ಟೋಬರ್ 4: ರಾತ್ರಿಯಿಡೀ ನಡೆದ ಕಾರ್ಯಚರಣೆಯ ಬಳಿಕ ಜಮ್ಮು ಮತ್ತು ಕಾಶ್ಮೀರ ಮಹಾನಿರ್ದೇಶಕ (ಡಿಜಿ ಕಾರಾಗೃಹ) ಹೇಮಂತ್ ಕುಮಾರ್ ಲೋಹಿಯಾ ಹತ್ಯೆಯ ನಡೆದ ಕೆಲವೇ ಗಂಟೆಗಳಲ್ಲಿ ಅವರ ಶಂಕಿತ ಹಂತಕನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಲೋಹಿಯಾ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಮನೆಕೆಲಸಗಾರ ಯಾಸಿರ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದೆ. ಸದ್ಯ ಆತನನ್ನು ಉನ್ನತ ಪೊಲೀಸ್ ಅಧಿಕಾರಿಯ ಕೊಲೆ ಆರೋಪದ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಡಿಜಿಪಿ ಮುಖೇಶ್ ಸಿಂಗ್ ಹೇಳಿದ್ದಾರೆ.
ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರ ಡಿಜಿಪಿ (ಡಿಜಿ ಕಾರಾಗೃಹ) ಹೇಮಂತ್ ಕುಮಾರ್ ಲೋಹಿಯಾ ಜಮ್ಮುವಿನ ಅವರ ನಿವಾಸದಲ್ಲಿ ಹತ್ಯೆಗೀಡಾದ ಪ್ರಕರಣವು ಜಮ್ಮು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಯನ್ನು ಎತ್ತುವಂತೆ ಮಾಡಿದೆ. ಶಾ ಜಿಲ್ಲೆಗೆ ಭೇಟಿ ನೀಡಿದ ಗಂಟೆಗಳ ಹಿಂದೆ ಈ ಘಟನೆ ನಡೆದಿದೆ. ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ)ನ ಅಂಗಸಂಸ್ಥೆ ಪೀಪಲ್ಸ್ ಆ್ಯಂಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್ಎಫ್) ಹತ್ಯೆಯ ಹಿಂದಿರುವ ಶಂಕೆ ಇದೆ.
ಜಮ್ಮು ಮತ್ತು ಕಾಶ್ಮೀರ ಕಾರಾಗೃಹ ಇಲಾಖೆ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಅವರು ಸೋಮವಾರ ಅಕ್ಟೋಬರ್ 03 ರಂದು ಜಮ್ಮುವಿನ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖಾ ವರದಿ ಪ್ರಕಾರ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ದೇಹದ ಮೇಲೆ ಹಲವಾರು ಗಾಯದ ಗುರುತುಗಳೂ ಕಂಡುಬಂದಿವೆ. ಹತ್ಯೆಯ ನಂತರ ಕಾರಾಗೃಹ ಇಲಾಖೆಯ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಅವರನ್ನು ಸುಟ್ಟು ಹಾಕಿರುವ ಪುರಾವೆಗಳೂ ಸಿಕ್ಕಿವೆ.
ಹೇಮಂತ್ ಕುಮಾರ್ ಲೋಹಿಯಾ ಅವರ ಮೆನಯ ಸೇವಕನೇ ಅವರನ್ನು ಕೊಂದಿದ್ದಾನೆ ಎಂದು ಪ್ರಾಥಮಿಕವಾಗಿ ಪೊಲೀಸರು ಶಂಕಿಸಿದ್ದಾರೆ. ಸೇವಕ ಜಮ್ಮು ಮತ್ತು ಕಾಶ್ಮೀರದ ರಾಂಬನ್ ನಿವಾಸಿಯಾಗಿದ್ದು, ಈತ ಘಟನೆ ಬಳಿಕ ತಲೆಮರೆಸಿಕೊಂಡಿದ್ದ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿ ಆತನ ಪತ್ತೆಯಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಸೇರಿದಂತೆ ಎಲ್ಲಾ ಕೋನಗಳಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ.