ಉತ್ತರಪ್ರದೇಶ ಚುನಾವಣೆಗೆ ಹೋಲಿಸಿದರೆ ಗುಜರಾತಿನ ಮಾರ್ಕೆಟ್ ಡೌನ್!
ಅಹಮದಾಬಾದ್, ನವೆಂಬರ್ 30: ಗುಜರಾತಿನಲ್ಲಿ ಮತ್ತೊಮ್ಮೆ ಕೇಸರಿ ಬಾವುಟ ಹಾರಲಿದೆ ಎಂದು ಬುಕ್ಕಿಗಳು ಸಾವಿರಾರು ಕೋಟಿ ರು ಬೆಟ್ಟಿಂಗ್ ಕಟ್ಟಿರುವ ಸುದ್ದಿ ಓದಿರಬಹುದು.
ಆದರೆ, ಈ ಬೆಟ್ಟಿಂಗ್ ಗೆ ಆಧಾರವಾಗಿದ್ದ ಸಮೀಕ್ಷಾ ವರದಿಗಳ ಅಂಕಿ ಅಂಶಗಳ ತಪ್ಪು ಗ್ರಹಿಕೆಯಿಂದ ನಷ್ಟ ಅನುಭವಿಸುವ ಮುನ್ಸೂಚನೆ ಸಿಕ್ಕಿದ್ದು, ಈ ಬಾರಿ ನಿರೀಕ್ಷೆಗಿಂತ ಭಾರಿ ಕಡಿಮೆ ಮೊತ್ತದ ಬಿಡ್ಡಿಂಗ್ ನಡೆದಿದೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ಗೆಲುವು ಕಾಣಲು ಯತ್ನಿಸುತ್ತಿರುವ ಬಿಜೆಪಿ ಪರ ಬುಕ್ಕಿಗಳು ಕೂಡಾ ನಿಂತಿದ್ದಾರೆ.
ಉತ್ತರಪ್ರದೇಶಕ್ಕೆ ಹೋಲಿಸಿದರೆ ಗುಜರಾತಿನಲ್ಲಿ ನಾಲ್ಕು ಪಟ್ಟು ಕಡಿಮೆ ಮೊತ್ತದಲ್ಲಿ ಬೆಟ್ಟಿಂಗ್ ನಡೆದಿದೆ. ಉತ್ತರಪ್ರದೇಶದಲ್ಲಿ ಸುಮಾರು 4,000 ಕೋಟಿ ರು ಮೌಲ್ಯದ ವ್ಯವಹಾರ ನಡೆಸಿದ್ದ ಬುಕ್ಕಿಗಳು ಗುಜರಾತಿನಲ್ಲಿ 1,000 ಕೋಟಿ ರು ಮಾತ್ರ ಬೆಟ್ಟಿಂಗ್ ನಲ್ಲಿ ತೊಡಗಿಸಲಾಗಿದೆ.
ಬೆಟ್ಟಿಂಗ್ ರೇಟ್ ನಲ್ಲಿ ಬದಲಾವಣೆ ಇಲ್ಲ
ಬೆಟ್ಟಿಂಗ್ ಅಕ್ರಮವಾಗಿದ್ದರೂ ಬಿಜೆಪಿ ಪರ ಬುಕ್ಕಿಗಳು ಬೆಟ್ಟಿಂಗ್ ನಡೆಸುತ್ತಿದ್ದಾರೆ. ಸದ್ಯದ ರೇಟಿಂಗ್ ಪಟ್ಟಿಯಂತೆ ಬಿಜೆಪಿ ಗೆಲುವಿಗೆ 1 ರು ಗೆ 1.25ರಂತೆ ಟ್ರೆಂಡ್ ನಡೆಯುತ್ತಿದೆ.
ಇದೇ ರೀತಿ ಕಾಂಗ್ರೆಸ್ ಗೆದ್ದರೆ 1 ರುಗೆ 2 ರು ನಂತೆ ಬೆಟ್ಟಿಂಗ್ ರೇಟ್ ಇದೆ. ನವೆಂಬರ್ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ಮೇಲೆ 1 ರು ಗೆ 7ರು ನಂತೆ ಇತ್ತು.
ಈಗ ಕಾಂಗ್ರೆಸ್ಸಿನ ಪ್ರಚಾರದ ಭರಾಟೆ ನೋಡಿದ ಮೇಲೆ ಕಾಂಗ್ರೆಸ್ ಬೆಲೆ ಹೆಚ್ಚಳವಾಗಿದೆ. ಆದರೆ, ಪ್ರಧಾನಿ ಮೋದಿ ಅವರು ಕೊನೆ ಕ್ಷಣದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದು ಮತ್ತೊಮ್ಮೆ ಮೋದಿ ಮಾತಿಗೆ ಜನತೆ ತಲೆದೂಗುತ್ತಿದ್ದು, ಬಿಜೆಪಿ ಪರ ಅಲೆ ಎದ್ದಿದೆ.
ಸೀಟು ಗಳಿಕೆ
ಬುಕ್ಕಿಗಳ ಪ್ರಕಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆಲುವು ತಪ್ಪಿಸಲು ಸಾಧ್ಯವಿಲ್ಲ. ವಿಜಯ್ ರೂಪಾನಿ ನೇತೃತ್ವದ ಬಿಜೆಪಿ ಈ ಬಾರಿ 118 ಸ್ಥಾನಗಳನ್ನು ಗೆಲ್ಲಲ್ಲಿದೆ (2012ರಲ್ಲಿ 119). ಮತ್ತೊಂದು ಬುಕ್ಕಿಗಳ ತಂಡದ ಪ್ರಕಾರ ಬಿಜೆಪಿಗೆ 100 ಸ್ಥಾನ ಲಭಿಸಬಹುದು. ಕಾಂಗ್ರೆಸ್ಸಿಗೆ 80 ಸೀಟು ಸಿಗುವ ಸಾಧ್ಯತೆಯಿದೆ.
ಈಗ ಬಂದಿರುವ ಮಾಹಿತಿ ಪ್ರಕಾರ ಬಿಜೆಪಿ 100-107 ಸೀಟು ಮಾತ್ರ ಗಳಿಸುವ ಸಾಧ್ಯತೆಯಿದೆ. ಹೀಗಾಗಿ ಮತ್ತೊಮ್ಮೆ ಬೆಟ್ಟಿಂಗ್ ಮೊತ್ತ ಇಳಿಕೆ ನಿರೀಕ್ಷಿಸಬಹುದು.
ಗ್ರಾಮೀಣ ಭಾಗದಲ್ಲಿ ಬಿಜೆಪಿ ಗೆಲುವು
ಪಾಟೀದಾರ್ ಗಳನ್ನು ಸಂಭಾಳಿಸುವಲ್ಲಿ ಕಾಂಗ್ರೆಸ್ ಸೋತಿರುವುದು ಆ ಪಕ್ಷಕ್ಕೆ ಮುಳುವಾಗಲಿದೆ. ನಗರ ಪ್ರದೇಶಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಕೋರ್ ಮಾಡಬಹುದು ಆದರೆ, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಬಿಜೆಪಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು, ಹೆಚ್ಚಿನ ಅಂತರದ ಗೆಲುವು ಸಾಧಿಸಲಿದೆ. ಜಿಎಸ್ ಟಿ ವಿರುದ್ಧ ಕಾಂಗ್ರೆಸ್ ಹೋರಾಟ ವ್ಯರ್ಥವಾಗಲಿದೆ ಎಂದು ಬುಕ್ಕಿ ಒನ್ ಇಂಡಿಯಾಕ್ಕೆ ಹೇಳಿದರು.
ಮೀಸಲಾತಿ ಯುದ್ಧ
ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ, ಅಲ್ಪೇಶ್ ಠಾಕೂರ್ ಅವರು ಕಾಂಗ್ರೆಸ್ ಪರ ನಿಂತಿರುವುದು ತುಂಬಾ ತಡವಾಗಿದ್ದರಿಂದ ಹೆಚ್ಚಿನ ಲಾಭ ಸಿಗುತ್ತಿಲ್ಲ. ಇನ್ನೂ ಈ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲವಿದೆ. ಮೀಸಲಾತಿಯೊಂದೇ ಈ ಬಾರಿಯ ಸಮಸ್ಯೆಯಲ್ಲ, ಇದು ಬಿಜೆಪಿಗೆ ಪ್ರತಿಷ್ಠೆಯ ಯುದ್ಧವಾಗಿದೆ ಎಂದು ಬುಕ್ಕಿ ಮಾಹಿತಿ ನೀಡಿದರು.