ಮಹಾರಾಷ್ಟ್ರಕ್ಕೆ ತಲೆನೋವಾಗಿ ಪರಿಣಮಿಸುತ್ತಿರುವ ಮುನ್ನಾಭಾಯ್
ನವದೆಹಲಿ, ಫೆ 25: ಮಾಜಿ ಕಾಂಗ್ರೆಸ್ ಸಂಸದ ದಿವಂಗತ ಸುನಿಲ್ ದತ್ ಪುತ್ರ ಸಂಜಯ್ ದತ್ ದಿನದಿಂದ ದಿನಕ್ಕೆ ಮಹಾರಾಷ್ಟ್ರ ಸರಕಾರಕ್ಕೆ ತಲೆನೋವಾಗಿ ಪರಿಣಮಿಸುತ್ತಿದ್ದಾರೆ.
ಮುಂಬೈ ಸರಣಿ ಬಾಂಬ್ ಸ್ಪೋಟದ ಆರೋಪಿ ಸಂಜಯ್ ದತ್ ಗೆ ಪದೇ ಪದೇ ಪರೋಲ್ ನೀಡುತ್ತಿರುವುದು ಮತ್ತು ಪರೋಲ್ ಅವಧಿಯನ್ನು ವಿಸ್ತರಿಸುತ್ತಿರುವುದರ ಬಗ್ಗೆ ಕೇಂದ್ರ ಸರಕಾರ ತನ್ನದೇ ಆಡಳಿತವಿರುವ ಮಹಾರಾಷ್ಟ್ರ ಸರಕಾರದ ವಿರುದ್ದ ಅಸಮಾಧಾನ ವ್ಯಕ್ತ ಪಡಿಸಿ, ಸ್ಪಷ್ಟನೆ ಕೊಡುವಂತೆ ಕೇಳಿದೆ.
ಕೇಂದ್ರ ಗೃಹ ಇಲಾಖೆ ಈ ಸಂಬಂಧ ಮಹಾರಾಷ್ಟ್ರ ಸರಕಾರಕ್ಕೆ ಪತ್ರ ಬರೆದು ಸಂಜಯ್ ದತ್ತಿಗೆ ಯಾಕೆ ವಿಶೇಷ ಸವಲತ್ತು ನೀಡಲಾಗುತ್ತಿದೆ. ಅವರಿಗೆ ಜೈಲಿನಲ್ಲಿ ಏಕೆ ವಿಐಪಿ ಉಪಚಾರ ನೀಡಲಾಗುತ್ತಿದೆ ಎಂದು ಮಹಾರಾಷ್ಟ್ರ ಸರಕಾರದ ಸ್ಪಷ್ಟನೆ ಕೇಳಿದೆ. (ಜೈಲಿನಲ್ಲಿ ಮುನ್ನಾಭಾಯಿಯ ಲುಂಗಿ ಡ್ಯಾನ್ಸ್)

ಸಂಜಯ್ ದತ್ ಜೈಲಿಗೆ ಸೇರಿದ ಒಂಬತ್ತು ತಿಂಗಳಲ್ಲಿ ಪತ್ನಿ ಮಾನ್ಯತಾಗೆ ಅನಾರೋಗ್ಯದ ಕಾರಣ ನೀಡಿ ಮೂರು ಬಾರಿ ಪರೋಲ್ ಪಡೆದುಕೊಂಡಿದ್ದರು ಅಲ್ಲದೇ ಪರೋಲ್ ವಿಸ್ತರಿಸಿ ಕೊಂಡಿದ್ದರು. ಈಗ ಕೇಂದ್ರ ಯಾವ ಮಾನದಂಡದ ಮೇಲೆ ಸಂಜಯ್ ದತ್ತಿಗೆ ಪರೋಲ್ ವಿಸ್ತರಿಸುತ್ತಿದ್ದೀರಾ ಎಂದು ಸ್ಪಷ್ಟನೆ ಕೊಡಿ ಎಂದು ಮಹಾರಾಷ್ಟ್ರ ಸರಕಾರಕ್ಕೆ ಕೇಳಿದೆ.
ಡಿಸೆಂಬರ್ 21ರಂದು ಪರೋಲ್ ಮೇಲೆ ತೆರಳಿರುವ ಮುನ್ನಾಭಾಯಿಯ ಪರೋಲ್ ಅವಧಿ ಫೆಬ್ರವರಿ 21ರಂದು ಮುಕ್ತಾಯವಾಗಿ ಯರವಾಡ ಜೈಲಿಗೆ ವಾಪಸ್ ಆಗಿದ್ದರು. ಮತ್ತೆ ಪರೋಲ್ ಮೇಲೆ ತೆರಳಿರುವ ಅವರು ಮತ್ತೆ ಮಾರ್ಚ್ 21ರ ವರೆಗೆ ವಿಸ್ತರಿಸಿ ಕೊಂಡಿದ್ದರು.
ಜೈಲಿನಲ್ಲಿ ಸಂಜಯ್ ದತ್ತಿಗೆ ಮದ್ಯ ಪೂರೈಕೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದೆಂದು ಮಹಾರಾಷ್ಟ್ರದ ಗೃಹ ಸಚಿವ ಆರ್ ಆರ್ ಪಾಟೀಲ್ ಹೇಳಿದ್ದಾರೆ.
1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಶಸ್ತ್ರಾಸ್ತ್ರ ಹೊಂದಿದ ಆರೋಪದಡಿ ನಟ ಸಂಜಯ್ ದತ್ ಅವರು ಮೇ 16, 2013ರಂದು ಟಾಡಾ ಕೋರ್ಟಿಗೆ ಶರಣಾಗಿ, ಪುಣೆಯ ಯರವಾಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.












Click it and Unblock the Notifications