ಕತಾರ್ ಏರ್ವೇಸ್ ಮುಖ್ಯಸ್ಥರನ್ನೇ 'ಮೂರ್ಖ' ಎಂದು ಸುದ್ದಿಯಾದ ಕಂಗನಾ ರಣಾವತ್!
ನವದೆಹಲಿ, ಜೂನ್ 8: ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ವಿವಾದಗಳಿಗೂ ಬಿಡಿಸಲಾಗದ ನಂಟು. ಒಂದಲ್ಲಾ ಒಂದು ವಿವಾದಗಳಿಂದಲೇ ಈ ನಟಿ ಮುಖ್ಯ ವಾಹಿನಿಗಳಲ್ಲಿ ಸುದ್ದಿ ಆಗುತ್ತಾರೆ. ಕತಾರ್ ವಿಮಾನಯಾನ ಮುಖ್ಯಸ್ಥರನ್ನು "ಈಡಿಯಟ್" ಎನ್ನುವ ಮೂಲಕ ಮತ್ತೊಮ್ಮೆ ಸದ್ದು ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ 'ವಾಸುದೇವ್' ಎಂಬ ವ್ಯಕ್ತಿಯು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋವನ್ನು ಆಧರಿಸಿ ಕತಾರ್ ಏರ್ವೇಸ್ ಸಿಇಒ ಅಕ್ಬರ್ ಅಲ್ ಬೇಕರ್ ಅನ್ನು "ಮೂರ್ಖ ಮನುಷ್ಯ" ಎಂದು ಕಂಗನಾ ರಣಾವತ್ ಕರೆದಿದ್ದಾರೆ. ಆ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹೊಸ ವಿವಾದ ಸೃಷ್ಟಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ಬಗ್ಗೆ ಬಿಜೆಪಿಯ ಇಬ್ಬರು ನಾಯಕರು ನೀಡಿರುವ ಅವಹೇಳನಕಾರಿ ಹೇಳಿಕೆಯಿಂದ ಭಾರತವು ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕ ಹಿನ್ನಡೆ ಅನುಭವಿಸುತ್ತಿದೆ. ಇದರ ಮಧ್ಯೆ ಕತಾರ್ ಏರ್ವೇಸ್ ಅನ್ನು ಬಹಿಷ್ಕರಿಸುವಂತೆ ಭಾರತೀಯರಲ್ಲಿ ಮನವಿ ಮಾಡಿಕೊಂಡಿರುವ ಟ್ವಿಟ್ಟರ್ ಬಳಕೆದಾರರ "ವಾಸುದೇವ್"ಗೆ ಬಾಲಿವುಡ್ ನಟಿ ಕಂಗನಾ ರಣಾವತ್ ನೀಡಿರುವ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
|
ವಾಸುದೇವ್ ವಿಡಿಯೋದಲ್ಲಿ ಉಲ್ಲೇಖ ಆಗಿವುದೇನು?
ವಾಸುದೇವ್ ಮಾಡಿರುವ ವಿಡಿಯೋ ಕ್ಲಿಪ್ನಲ್ಲಿ, "ಹಿಂದೂ ದೇವತೆಗಳ ನಗ್ನ ಚಿತ್ರಗಳನ್ನು ಚಿತ್ರಿಸಿದ್ದಾರೆ", ಎಂದು ಹೇಳುವ ವರ್ಣಚಿತ್ರಕಾರ ಎಂಎಫ್ ಹುಸೇನ್ಗೆ ಕತಾರ್ ಆಶ್ರಯ ನೀಡಿದೆ ಎಂದು ಹೇಳಿದ್ದಾರೆ. ಪ್ರವಾದಿ ಮೊಹಮ್ಮದ್ ಬಗ್ಗೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆಯ ಬಗ್ಗೆ ಅದೇ ಕತಾರ್ ನಮಗೆ ಬೋಧಿಸುತ್ತಿದೆ. ಈ ವಿವಾದದ ಕುರಿತು ಕತಾರ್ನಲ್ಲಿ ಭಾರತೀಯರನ್ನು ವಜಾಗೊಳಿಸಲಾಗಿದೆ. ಆದ್ದರಿಂದ ಕತಾರ್ ಉತ್ಪನ್ನಗಳನ್ನು ಮತ್ತು ಕತಾರ್ ಏರ್ವೇಸ್ನ್ನು ಬಹಿಷ್ಕರಿಸುವಂತೆ ವಿಡಿಯೋ ಹೇಳಲಾಗಿದೆ.
|
ಡಬ್ಬಿಂಗ್ ವಿಡಿಯೋಗಳಲ್ಲಿ ಏನಿದೆ?
ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಕತಾರ್ ಏರ್ವೇಸ್ ಮುಖ್ಯಸ್ಥರು ಬ್ರಾಡ್ಕಾಸ್ಟರ್ ಅಲ್ ಜಜೀರಾಗೆ ನೀಡಿದ ಸಂದರ್ಶನವನ್ನು ಡಬ್ ಮಾಡುವ ಮೂಲಕ ಸ್ಪೂಫ್ ಮಾಡಿದ ವೀಡಿಯೊವನ್ನು ಶೇರ್ ಮಾಡಿದ್ದಾರೆ. ವ್ಯಂಗ್ಯದಿಂದ ಕೂಡಿದ, ಡಬ್ಬಿಂಗ್ ವಿಡಿಯೋದಲ್ಲಿ ಅಕ್ಬರ್ ಅಲ್ ಬೇಕರ್ ವೈಯಕ್ತಿಕವಾಗಿ ತನ್ನ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳುವಂತೆ ವಾಸುದೇವ್ಗೆ ಮನವಿ ಮಾಡುತ್ತಿರುವಂತೆ ತೋರುತ್ತದೆ.
"ವಾಸುದೇವ್ ಒಟ್ಟು 624.50 ರೂಪಾಯಿ ಹೂಡಿಕೆಯೊಂದಿಗೆ ನಮ್ಮ ದೊಡ್ಡ ಷೇರುದಾರರಾಗಿದ್ದಾರೆ. ಇನ್ನು ಮುಂದೆ ಹೇಗೆ ಕಾರ್ಯನಿರ್ವಹಿಸಬೇಕೆಂದು ನಮಗೆ ತಿಳಿದಿಲ್ಲ. ನಾವು ಎಲ್ಲಾ ವಿಮಾನಗಳನ್ನು ಗ್ರೌಂಡ್ ಮಾಡಿದ್ದು, ಕಾರ್ಯಾಚರಣೆಗಳು ಇನ್ನು ಮುಂದೆ ನಡೆಯುವುದಿಲ್ಲ," ಎಂದು ವಿಡಿಯೋದಲ್ಲಿ ಕತಾರ್ ಏರ್ಲೈನ್ಸ್ ಮುಖ್ಯಸ್ಥರು ಹೇಳುವಂತೆ ತೋರುತ್ತದೆ.

ವಿಡಂಬನೆ ವಿಡಿಯೋ ಬಗ್ಗೆ ಕಂಗನಾ ರಣಾವತ್ ಹೇಳುವುದೇನು?
ಬಾಲಿವುಡ್ ಸ್ಟಾರ್ ಎನಿಸಿಕೊಂಡರೂ ಈ ವಿಡಂಬನೆಯ ವಿಡಿಯೋವನ್ನೇ ನಿಜವೆಂದು ನಂಬಿರುವ ನಟಿ ಕಂಗನಾ ರಣಾವತ್ ಕೋಪದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಈ ಬಡವನೊಬ್ಬನನ್ನು ಗೇಲಿ ಮಾಡಿದ್ದಕ್ಕಾಗಿ ಇಂಥವರನ್ನು ಹುರಿದುಂಬಿಸುವ ಎಲ್ಲಾ ಭಾರತೀಯರು ಇದನ್ನು ನೆನಪಿಸಿಕೊಳ್ಳುತ್ತಾರೆ, ಏಕೆಂದರೆ ಅಧಿಕ ಜನಸಂಖ್ಯೆಯ ದೇಶದಲ್ಲಿ ನೀವೆಲ್ಲರೂ ದೊಡ್ಡ ಹೊರೆ ಆಗಿದ್ದೀರಿ," ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ "ಈ ಮೂರ್ಖ ಮನುಷ್ಯನಿಗೆ ಬಡವನನ್ನು ಬೆದರಿಸುವುದಕ್ಕೆ ನಾಚಿಕೆಯೇ ಇಲ್ಲ, ಜಗತ್ತಿನಲ್ಲಿ ಅವನು ಅತ್ಯಲ್ಪ ಮತ್ತು ಅಪಹಾಸ್ಯದ ಸ್ಥಾನವನ್ನು ಹೊಂದಿದ್ದಾನೆ," ಎಂದು ಬರೆದಿದ್ದಾರೆ.

ನಿಮ್ಮಂತಹವರ ಎದುರಿಗೆ ವಾಸುದೇವ್ ಬಡವರೇ ಆಗಿರಬಹುದು
"ವಾಸುದೇವ್ ಎಂಬ ವ್ಯಕ್ತಿಯು ನಿಮ್ಮಂತಹ ಶ್ರೀಮಂತರ ಎದುರಿಗೆ ಬಡವರು ಮತ್ತು ಅತ್ಯಲ್ಪರೇ ಆಗಿರಬಹುದು. ಆದರೆ ಯಾವುದೇ ಸಂದರ್ಭದಲ್ಲಿ ತಮ್ಮ ನೋವು, ದುಃಖ ಮತ್ತು ನಿರಾಶೆಯನ್ನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿದ್ದಾರೆ. ಈ ಪ್ರಪಂಚದ ಆಚೆಗೆ ನಾವೆಲ್ಲರೂ ಸಮಾನರಾಗಿರುವ ಜಗತ್ತಿದೆ ಎಂಬುದನ್ನು ನೆನಪಿಡಿ," ಎಂದು ನಟಿ ಕಂಗನಾ ರಣಾವತ್ ಮತ್ತೊಂದು ಪೋಸ್ಟ್ ಮಾಡಿದ್ದಾರೆ.












Click it and Unblock the Notifications