ಭಾರತದ ಮೇಲೆ ಭಯೋತ್ಪಾದಕ ದಾಳಿಯ ಕಾರ್ಮೋಡ
ಗಡಿ ಹತ್ತಿರ ಪಾಕಿಸ್ತಾನದ ವಾಘಾ ಪ್ರದೇಶದಲ್ಲಿ ನಡೆದ ಬಾಂಬ್ ಸ್ಫೋಟವನ್ನು ಭಾರತದಲ್ಲಿ ಉಗ್ರರ ದಾಳಿ ನಡೆಯುವ ಕುರಿತು ಸಿಕ್ಕ ಎಚ್ಚರಿಕೆ ಎಂದೇ ಪರಿಗಣಿಸಲಾಗಿದೆ. ತೆಹ್ರೀಕ್ ಇ ತಾಲಿಬಾನ್ ಹಾಗೂ ಅಲ್ ಖೈದಾ ಸಂಘಟನೆಗಳು ಜತೆಗೂಡಿದ್ದು, ಈ ಸ್ಫೋಟದ ಗುರಿ ಭಾರತವಾಗಿತ್ತು ಎಂದು ಗುಪ್ತಚರ ಸಂಸ್ಥೆ ರಾ ದೃಢಪಡಿಸಿದೆ.
ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ ಜಮಾತ್ ಅರ್ಹರ್ (ಟಿಟಿಪಿ-ಜೆಎ) ಸಂಘಟನೆ ಈಗ ಬಹಿರಂಗವಾಗಿ ಭಾರತದ ಪ್ರಧಾನ ಮಂತ್ರಿಗೆ ಬೆದರಿಕೆ ಒಡ್ಡಿದೆ. ವಾಘಾದಲ್ಲಿ ನಡೆದ ಸ್ಫೋಟವನ್ನು ಒಂದು ಸಾಮಾನ್ಯ ಘಟನೆಯೆಂದು ನೋಡಬಾರದು. ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಹಸ್ರಾರು ಉಗ್ರರು ತಯಾರಾಗಿದ್ದು, ದೇಶದೊಳಕ್ಕೆ ನುಗ್ಗಲು ಯತ್ನಿಸುತ್ತಿದ್ದಾರೆ. ಅಲ್ಲದೆ, ಆರು ತಿಂಗಳ ಹಿಂದಷ್ಟೇ ಅಲ್ ಖೈದಾ ವರಿಷ್ಠ ಅಲ್ ಜುವಾಹಿರಿ ಮಾತನಾಡಿದ ವೀಡಿಯೋದಲ್ಲಿ ಭಾರತದಲ್ಲಿ ಸಂಘಟನೆಯ ಶಾಖೆ ತೆರೆಯುವುದಾಗಿ ಹೇಳಿದ್ದ. [ವಾಘಾ ಗಡಿಯಲ್ಲಿ ಉಗ್ರರ ದಾಳಿ, ಮೋದಿ ಖಂಡನೆ]
ಇದರ ಜತೆಯಲ್ಲಿ ಬಾಂಗ್ಲಾದೇಶ ಮೂಲದ ಜೆಯುಎಂಬಿ (ಜಮಾತ್ ಉಲ್ ಇಸ್ಲಾಂ ಬಾಂಗ್ಲಾದೇಶ) ಸಂಘಟನೆ ಸ್ಫೋಟಕ ತಯಾರಿಕೆ ಜಾಲವನ್ನು ಪಶ್ಚಿಮ ಬಂಗಾಳದ ವಿವಿಧೆಡೆ ಹರಡಿದೆ. ಭಾರತ ಇಂದು ಪೂರ್ವದಲ್ಲಷ್ಟೇ ಅಲ್ಲ, ಪಶ್ಚಿಮ ಗಡಿ ಪ್ರದೇಶದಲ್ಲಿಯೂ ಅಪಾಯ ಎದುರಿಸುತ್ತಿದೆ. ಉಗ್ರರು ಪಾಕಿಸ್ತಾನಿ ಸೈನ್ಯದ ಸಹಾಯದೊಂದಿಗೆ ಕೊಲ್ಕೊತಾ ಬಂದರು ಮೇಲೆ ದಾಳಿ ನಡೆಸುವ ಸಂಭವವಿದೆ ಎಂದು ಗುಪ್ತಚರ ಸಂಸ್ಥೆಗಳು ಈಗಾಗಲೇ ಮಾಹಿತಿ ನೀಡಿವೆ. ಕೋಲ್ಕೊತಾ ಬಂದರು ಸಮೀಪ ಎರಡು ಭಾರತೀಯ ಯುದ್ಧ ಹಡಗುಗಳು ಸಂಚರಿಸುತ್ತಿದ್ದು, ಇವು ಉಗ್ರರ ಗುರಿ ಎನ್ನಲಾಗಿದೆ. [ಉಗ್ರರ ವಿಧ್ವಂಸಕ ಕೃತ್ಯದ ರಹಸ್ಯ ಸಂಚು ಬಯಲು]

ಪಾಕಿಸ್ತಾನದ ಬಣ್ಣ ಬಯಲು
ಪಾಕಿಸ್ತಾನವು ಉಗ್ರರ ಮೂಲಕ ಭಾರತ ಹಾಗೂ ಅಫ್ಘಾನಿಸ್ತಾನದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ, ಪರೋಕ್ಷ ಯುದ್ಧ ನಡೆಸುತ್ತಿದೆ ಎಂದು ಅಮೆರಿಕದ ಪೆಂಟಗನ್ ಸ್ಪಷ್ಟವಾಗಿ ಹೇಳಿದೆ. ಈ ಮೂಲಕ ಪಾಕಿಸ್ತಾನದ ಬಣ್ಣ ಬಯಲು ಮಾಡಿದೆ. ಭಾರತದಲ್ಲಿ ಸೈನ್ಯದ ವಿರುದ್ಧ ಹೋರಾಡಲು ಹಾಗೂ ಅಫ್ಘಾನಿಸ್ತಾನದಲ್ಲಿ ಕಳೆದುಕೊಂಡಿರುವ ಬೆಂಬಲವನ್ನು ವಾಪಸ್ ಪಡೆಯಲು ಉಗ್ರರರನ್ನು ಬಳಸಲಾಗುತ್ತಿದೆ. ಆದ್ದರಿಂದ ಭಾರತದ ಮೇಲೆ ಉಗ್ರ ದಾಳಿ ನಡೆಸುವ ಅವಕಾಶ ಅತಿ ಹೆಚ್ಚಾಗಿದೆ ಎಂದು ಪೆಂಟಗನ್ ಎಚ್ಚರಿಕೆ ನೀಡಿದೆ.
ಒಂದಾಗಿದ್ದಾರೆ ಒಳ, ಹೊರಗಿನ ಭಯೋತ್ಪಾದಕರು
ಅಮೆರಿಕವು ಅಫ್ಘಾನಿಸ್ತಾನದಲ್ಲಿ ಇಟ್ಟಿರುವ ತನ್ನ ಸೇನಾ ತುಕಡಿಯನ್ನು 2015ರಲ್ಲಿ ವಾಪಸ್ ಕರೆಸಿಕೊಳ್ಳಲಿದೆ. ಈ ಪ್ರಕ್ರಿಯೆಯ ನಂತರ ಅಫ್ಘಾನಿಸ್ತಾನದಲ್ಲಿ ಅಲ್ ಖೈದಾ ಹಾಗೂ ತೆರ್ಹೀಕ್ ಇ ತಾಲಿಬಾನ್ ಸಂಘಟನೆಗಳು ಮತ್ತೆ ಬಲಗೊಳ್ಳುವ ಶಂಕೆ ಇದೆ. ಈ ನಂತರ ಭಾರತದ ಮೇಲೆ ದಾಳಿ ನಡೆಸುವ ಕುರಿತು ತಯಾರಿ ನಡೆಸಲು ಉಗ್ರ ಸಂಘಟನೆಗಳಿಗೆ ಯಾವುದೇ ಅಡ್ಡಿ ಇಲ್ಲದಂತಾಗುತ್ತದೆ. ಪಾಕಿಸ್ತಾನ ಸೈನ್ಯ ಹಾಗೂ ಐಎಸ್ಐ ಆಡುತ್ತಿರುವ ಆಟಕ್ಕೆ ಇನ್ನಷ್ಟು ಶಕ್ತಿ ಬರುತ್ತದೆ. [ದಕ್ಷಿಣ ಭಾರತಕ್ಕೆ ಬಾಂಗ್ಲಾದೇಶಿ ಉಗ್ರರ ಸ್ಥಳಾಂತರ..?]
ಇದರ ಜತೆಗೆ ಭಾರತದಲ್ಲಿಯೇ ಹುಟ್ಟಿದ ಹಾಗೂ ವಿದೇಶಿ ಮೂಲದ ಉಗ್ರ ಸಂಘಟನೆಗಳು ಒಂದಾಗಿರುವುದು ಇನ್ನಷ್ಟು ಅಪಾಯ ತಂದೊಡ್ಡಿದೆ. ಗುಪ್ತಚರ ಇಲಾಖೆ ನಡೆಸಿದ ತನಿಖೆಯಲ್ಲಿ ಅಲ್ ಖೈದಾ ಹಾಗೂ ಇಂಡಿಯನ್ ಮುಜಾಹಿದೀನ್ ಮಧ್ಯೆ ನಡೆದ ಮಾತುಕತೆ ಅರಿವಿಗೆ ಬಂದಿದೆ. ಭಾರತದಲ್ಲಿಯೇ ಇರುವ ಸಂಘಟನೆಗಳನ್ನು ಬಳಸಿಕೊಂಡು ದೇಶದಲ್ಲಿ ಸರಣಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಅಲ್ ಖೈದಾ ಪ್ರೇರೇಪಣೆ ನೀಡುತ್ತಿರುವುದು ಬಯಲಾಗಿದೆ.
ಭಾರತ ಮಾಡಬೇಕಾದ್ದೇನು?
ಐಎಸ್ಐಎಸ್ ಹಾಗೂ ಅಲ್ ಖೈದಾ ಅಂತಹ ಉಗ್ರವಾದಿ ಸಂಘಟನೆಗಳು ಈಗ ಭಾರತದತ್ತ ಮುಖಮಾಡಿರುವುದು ಸ್ಪಷ್ಟವಾಗಿದೆ. ಭಯೋತ್ಪಾದನೆ ಬೆಳೆಯಲು ಬಿಟ್ಟರೆ ಎಂತಹ ಭಯಾನಕ ಸನ್ನಿವೇಷ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಸಿರಿಯಾ ಸ್ಪಷ್ಟ ಉದಾಹರಣೆಯಾಗಿ ನಿಂತಿದೆ. ಈ ಹಿನ್ನೆಲೆಯಲ್ಲಿ ಭಾರತ ಈ ಉಗ್ರ ಬೆದರಿಕೆಯನ್ನು ಗಂಭೀರವಾಗಿ ಸ್ವೀಕರಿಸಬೇಕು. ದೇಶದೆಲ್ಲೆಡೆ ಭದ್ರತೆ ಹೆಚ್ಚಿಸುವುದಲ್ಲದೆ, ರಕ್ಷಣಾ ಇಲಾಖೆಯನ್ನು ಆಧುನೀಕರಣಗೊಳಿಸಬೇಕು.
ರಾಜ್ಯಗಳ ಸಾಮರ್ಥ್ಯ ತಿಳಿದಿಲ್ಲ
ಭಾರತದ ವಿವಿಧ ರಾಜ್ಯಗಳ ಪೊಲೀಸರು ಉಗ್ರರ ಸಂಘಟಿತ ಕೃತ್ಯಗಳನ್ನು ವಿಫಲಗೊಳಿಸಲು ಎಷ್ಟರ ಮಟ್ಟಿಗೆ ಸಾಮರ್ಥ್ಯ ಹೊಂದಿದ್ದಾರೆಂಬುದು ಇನ್ನೂ ತಿಳಿದಿಲ್ಲ. ಮುಂಬಯಿಯಲ್ಲಿ ಐಷಾರಾಮಿ ಹೋಟೆಲ್ಗಳ ಮೇಲೆ ನಡೆದ ಉಗ್ರರನ್ನು ಸದೆಬಡಿಯಲು ಮೂರ್ನಾಲ್ಕು ದಿನಗಳೇ ಬೇಕಾದವು. ಪಶ್ಚಿಮ ಬಂಗಾಳದಲ್ಲಿ ಉಗ್ರರ ಜಾಲವನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಫಲರಾಗಿದ್ದರು. ಸ್ಫೋಟದ ನಂತರವೇ ವಿಷಯ ಹೊರಗೆ ಬಂದಿರುವುದು ಅದಕ್ಕೆ ಉದಾಹರಣೆ.
ಆದ್ದರಿಂದ ಭದ್ರತಾ ದಳಗಳನ್ನು ಆಧುನೀಕರಣಗೊಳಿಸಿ, ಸನ್ನದ್ಧಗೊಳಿಸುವುದಷ್ಟೇ ಅಲ್ಲದೆ, ರಾಷ್ಟ್ರೀಯ ಭದ್ರತಾ ನೀತಿಯನ್ನೂ ಬದಲಾಯಿಸಬೇಕು. ದೇಶದ ಭದ್ರತಾ ಪಡೆಗಳು ಸಮರ್ಥವಾಗಿ ಪ್ರತಿದಾಳಿ ನಡೆಸುವಂತೆ ಯೋಜನೆ ರೂಪಿಸಿ, ಸೌಲಭ್ಯ ಕಲ್ಪಿಸಬೇಕು.












Click it and Unblock the Notifications