ಏನೇ ಆದ್ರೂ ಇನ್ನೊಂದು ವರ್ಷದಲ್ಲಿ ಕಪ್ಪು ಹಣ ವಾಪಸ್
ಭುವನೇಶ್ವರ, ನ.10 : ವಿದೇಶಗಳಲ್ಲಿರುವ ಕಪ್ಪು ಹಣ ಇನ್ನೊಂದು ವರ್ಷದೊಳಗೆ ಭಾರತಕ್ಕೆ ಬರಲಿದೆ. ವಿದೇಶಿ ಬ್ಯಾಂಕ್ ಗಳು ಹಣ ಹಿಂದಕ್ಕೆ ನೀಡಲಿವೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜನರ ನಿರೀಕ್ಷೆಗಿಂತ ಮೊದಲೆ ಕಪ್ಪು ಹಣವನ್ನು ದೇಶಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಈ ಬಗ್ಗೆ ವಿಳಂಬ ಮಾಡುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಪ್ರಪಂಚದ 70 ದೇಶಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಖಾತೆಗಳಲ್ಲಿ ಕಪ್ಪು ಹಣವಿದೆ. 120 ಲಕ್ಷ ಕೋಟಿ ರೂ. ಗೂ ಅಧಿಕ ಹಣವಿದೆ ಎಂದು ಸ್ವಾಮಿ ಹೇಳಿದ್ದಾರೆ.[ಕಪ್ಪು ಹಣದ ಮಾಹಿತಿ ಯಾರು ಬೇಕಾದ್ರೂ ಕೊಡಬಹುದು]
ನ್ಯಾಷನಲ್ ಹೇರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೆಸರು ಕೇಳಿಬಂದಾಗ ಅಂದರೆ, 2007 ರಲ್ಲಿಯೇ ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡವನ್ನು ನೇಮಕ ಮಾಡಿತ್ತು. ಆದರೆ ಎನ್ ಡಿಎ ಅಧಿಕಾರಕ್ಕೆ ಬಂದು ಕ್ರಮ ತೆಗೆದುಕೊಳ್ಳುವವರೆಗೂ ಅದು ಸುಮ್ಮನೆ ಕುಳಿತಿತ್ತು ಎಂದು ಆರೋಪಿಸಿದ್ದಾರೆ.[ಕಪ್ಪು ಹಣː ಲಕೋಟೆ ಒಡೆಯುವ ಅಧಿಕಾರ ವಿಶೇಷ ತಂಡಕ್ಕೆ]
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಖಾಸಗಿ ಕಂಪನಿಯೊಂದರ ಸುಮಾರು ಶೇ.76 ರಷ್ಟು ಷೇರನ್ನು ಖರೀದಿಸಿ ಇಟ್ಟುಕೊಂಡಿದ್ದಾರೆ. ಯಂಗ್ ಇಂಡಿಯನ್ ಲಿಮಿಟೆಡ್ ಹೆಸರಿನಲ್ಲಿ 5000 ಕೋಟಿ ರೂ. ಹಣ ಅಡಗಿಸಿಟ್ಟಿದ್ದಾರೆ. ಕೇವಲ 5 ಲಕ್ಷ ರೂ. ಬಂಡವಾಳದಲ್ಲಿ ಆರಂಭವಾದ ಸಂಸ್ಥೆ ದಿಢೀರ್ ಶ್ರೀಮಂತನಾಗಲು ಕಾರಣವೇನು? ಎಂದು ಸ್ವಾಮಿ ಪ್ರಶ್ನಿಸಿದ್ದಾರೆ.