6 ತಿಂಗಳಲ್ಲಿ 4 ಸಿಎಂಗಳಿಂದ ರಾಜೀನಾಮೆ ಪಡೆದುಕೊಂಡ ಬಿಜೆಪಿ ಹೈಕಮಾಂಡ್
ಯಾವುದೇ ರಾಜ್ಯವಾಗಿರಲಿ, ಯಾರೇ ಮುಖ್ಯಮಂತ್ರಿಗಳಾಗಿರಲಿ ತಾನೆಷ್ಟು ಪವರ್ ಫುಲ್ ಎನ್ನುವುದನ್ನು ಬಿಜೆಪಿಯ ಹೈಕಮಾಂಡ್ ತೋರಿಸಿಕೊಟ್ಟಿದೆ. ವರಿಷ್ಠರ ಮಾತಿಗೆ ಯಾವುದೇ ತಕರಾರು/ಡಿಮಾಂಡ್ ಮಾಡದೇ ಬಿಜೆಪಿಯಲ್ಲಿ ಮುಖಂಡರು ರಾಜೀನಾಮೆ ನೀಡುತ್ತಿದ್ದಾರೆ.
ಮಾಹಿತಿ ಸಂಗ್ರಹಿಸಲು ತಮ್ಮದೇ ತಂಡವನ್ನು ಕಳುಹಿಸಿ ವರದಿ ಪಡೆದುಕೊಳ್ಳುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆ ವರದಿಯ ಆಧಾರದ ಮೇಲೆಯೇ ಮುಂದಿನ ಹೆಜ್ಜೆ ಇಡುತ್ತಾರೆ ಎನ್ನುವುದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು/ಅಧಿಕಾರ ಉಳಿಸಿಕೊಳ್ಳಬೇಕು ಎನ್ನುವ ಸ್ಪಷ್ಟ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುವ ಬಿಜೆಪಿಯ ಹೈಕಮಾಂಡ್, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯವರಿಂದ ರಾಜೀನಾಮೆಯನ್ನು ಪಡೆದುಕೊಂಡಿದೆ. ಮುಂದಿನ ವರ್ಷ ಗುಜರಾತ್ ನಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ರೂಪಾನಿಯವರು ರಾಜೀನಾಮೆ ನೀಡಿದ್ದಾರೆ.
ಆಂತರಿಕವಾಗಿ ಪಕ್ಷದಲ್ಲಿ ಭಿನಾಭಿಪ್ರಾಯ ಹೆಚ್ಚಾದಾಗ ಅಥವಾ ಮುಂದಿನ ಚುನಾವಣೆಗೆ ಹಾಲೀ ಮುಖ್ಯಮಂತ್ರಿಗಳಿಂದ ಪಕ್ಷಕ್ಕೆ ಹಿನ್ನಡೆ ಉಂಟಾಗಬಹುದು ಎನ್ನುವಾಗ ಬಿಜೆಪಿ ವರಿಷ್ಠರು ಸಿಎಂ ಬದಲಾವಣೆ ಮಾಡುವ ನಿರ್ಧಾರಕ್ಕೆ ಬರುವುದು ಬಿಜೆಪಿಯಲ್ಲಿ ನಡೆದುಕೊಂಡು ಬಂದಿದೆ. ಕಳೆದ ಆರು ತಿಂಗಳಲ್ಲಿ ನಾಲ್ವರು ಮುಖ್ಯಮಂತ್ರಿಗಳಿಂದ ಬಿಜೆಪಿ ಹೈಕಮಾಂಡ್ ರಾಜೀನಾಮೆ ಪಡೆದುಕೊಂಡಿದೆ.

ಮುಖ್ಯಮಂತ್ರಿಯಾಗಿ ತ್ರಿವೇಂದ್ರ ಸಿಂಗ್ ರಾವತ್ ಅವರು ಆಯ್ಕೆ
2017ರಲ್ಲಿ ನಡೆದ ಉತ್ತರಾಖಂಡ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಜನಾದೇಶ ಸಿಕ್ಕಿತ್ತು. ಮುಖ್ಯಮಂತ್ರಿಯಾಗಿ ತ್ರಿವೇಂದ್ರ ಸಿಂಗ್ ರಾವತ್ ಅವರು ಆಯ್ಕೆಯಾಗಿದ್ದರು. ಆದರೆ, ಇವರ ಅವಧಿ ಐದು ವರ್ಷ ಮುಗಿಯುವ ಮುನ್ನವೇ ಅವರನ್ನು ಬಿಜೆಪಿ ಆ ಸ್ಥಾನದಿಂದ ಕೆಳಗಿಳಿಸಿತ್ತು. ಮೂರು ವರ್ಷ 357ದಿನ ಇವರು ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.

ಉತ್ತರಾಖಾಂಡ - ರಾವತ್ ಅವರ ಸ್ಥಾನಕ್ಕೆ ತೀರಥ್ ಸಿಂಗ್ ರಾವತ್
ಉತ್ತರಾಖಾಂಡದಲ್ಲಿ ತ್ರಿವೇಂದ್ ಸಿಂಗ್ ರಾವತ್ ಅವರ ಸ್ಥಾನಕ್ಕೆ ತೀರಥ್ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ 10.03.2021 ಪ್ರಮಾಣವಚನ ಸ್ವೀಕರಿಸಿದರು. ಆದರೆ, ಇವರು ಕೇವಲ 116 ದಿನ ಮಾತ್ರ ಸಿಎಂ ಆಗಿದ್ದರು. ಇವರಿಂದ ರಾಜೀನಾಮೆ ಪಡೆದುಕೊಂಡ ಬಿಜೆಪಿ ಹೈಕಮಾಂಡ್ ಆ ಸ್ಥಾನಕ್ಕೆ ಇನ್ನೊಬ್ಬರನ್ನು ಆಯ್ಕೆ ಮಾಡಿತು. 04.07.2021ರಲ್ಲಿ ಬಿಜೆಪಿ ವರಿಷ್ಠರು ಉತ್ತರಾಖಂಡದ ಮುಖ್ಯಮಂತ್ರಿ ಸ್ಥಾನಕ್ಕೆ ಪುಷ್ಕರ್ ಸಿಂಗ್ ಧಮಿಯವರನ್ನು ಆಯ್ಕೆ ಮಾಡಿತು. ಅಲ್ಲಿಂದ, ಇದುವರೆಗೆ ಧಮಿಯವರು ಸಿಎಂ ಆಗಿ ಮುಂದುವರಿದಿದ್ದಾರೆ.

ಯಡಿಯೂರಪ್ಪನವರ ರಾಜೀನಾಮೆಯನ್ನು ಬಿಜೆಪಿ ವರಿಷ್ಠರು ಪಡೆದುಕೊಂಡಿದ್ದರು
ಇದಾದ ನಂತರ, ಜುಲೈ ತಿಂಗಳಲ್ಲಿ ಕರ್ನಾಟಕದಲ್ಲಿ ನಡೆದ ಬೆಳವಣಿಗೆ ಗೊತ್ತಿರುವ ವಿಚಾರ. ಯಡಿಯೂರಪ್ಪನವರ ರಾಜೀನಾಮೆಯನ್ನು ಬಿಜೆಪಿ ವರಿಷ್ಠರು ಪಡೆದುಕೊಂಡಿದ್ದರು. ಆ ಸ್ಥಾನಕ್ಕೆ, ಬಸವರಾಜ ಬೊಮ್ಮಾಯಿಯವರನ್ನು ಹೈಕಮಾಂಡ್ ಆ ಸ್ಥಾನದಲ್ಲಿ ಕೂರಿಸಿತ್ತು. 26 ಜುಲೈ 2019 -26 ಜುಲೈ 2021ರ ವರೆಗೆ ಅಂದರೆ ಬರೋಬ್ಬರಿ ಎರಡು ವರ್ಷ ಮಾತ್ರ ಯಡಿಯೂರಪ್ಪನವರು ಸಿಎಂ ಸ್ಥಾನದಲ್ಲಿ ಇರುವಂತಾಯಿತು. ಯಡಿಯೂರಪ್ಪನವರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಹಲವು ತಿಂಗಳು ಸುದ್ದಿಗಳಿಗೆ ಜುಲೈ ತಿಂಗಳಲ್ಲಿ ತೆರೆಬಿದ್ದಿತ್ತು.

ಐದು ವರ್ಷ ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿ ರಾಜೀನಾಮೆ
ಈಗ, ಗುಜರಾತ್ ಸರದಿ, ಐದು ವರ್ಷ ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿಯವರು ಸೆಪ್ಟಂಬರ್ ಹನ್ನೊಂದರಂದು ರಾಜೀನಾಮೆ ನೀಡಿದ್ದಾರೆ. ಹಿಂದಿನ ಅಸೆಂಬ್ಲಿ ಮತ್ತು ಈಗಿನ ಅಸೆಂಬ್ಲಿ ಅವಧಿಯಲ್ಲಿ ಒಟ್ಟಾರೆಯಾಗಿ ರೂಪಾನಿ ಐದು ವರ್ಷ ಸಿಎಂ ಆಗಿದ್ದರು. ಮುಂದಿನ ವರ್ಷ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿಯ ವರಿಷ್ಠರು ಇವರ ರಾಜೀನಾಮೆಯನ್ನು ಪಡೆದುಕೊಂಡಿದೆ. ಆ ಮೂಲಕ, ಆರು ತಿಂಗಳ ಅವಧಿಯಲ್ಲಿ ಬಿಜೆಪಿ ವರಿಷ್ಠರು ನಾಲ್ವರಿಂದ ರಾಜೀನಾಮೆ ಪಡೆದುಕೊಂಡಂತಾಗಿದೆ.












Click it and Unblock the Notifications