ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರದಲ್ಲಿ 45 ಮಂದಿ ಬಲಿ, ಮಮತಾ ಬ್ಯಾನರ್ಜಿ ನಿರ್ದಯಿ ಎಂದ ಬಿಜೆಪಿ
ಕೋಲ್ಕತ್ತಾ, ಜುಲೈ. 11: ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸರಕಾರವನ್ನು ಬಿಜೆಪಿ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು "ನಿರ್ದಯಿ" ಎಂದು ಕರೆದಿದ್ದು, ಚುನಾವಣಾ ಘರ್ಷಣೆಯಲ್ಲಿ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಜುಲೈ 8 ರ ಗ್ರಾಮಾಂತರ ಚುನಾವಣೆಯಲ್ಲಿ ನಡೆದ ಹಿಂಸಾಚಾರವು ರಾಜ್ಯವನ್ನೇ ಅಲುಗಾಡಿಸಿದೆ. ಮತಪೆಟ್ಟಿಗೆಗಳನ್ನು ಧ್ವಂಸಗೊಳಿಸಸುವ ವೇಳೆ 15 ಮಂದಿ ಸಾವನ್ನಪ್ಪಿದ್ದಾರೆ. ಮತಪತ್ರಗಳನ್ನು ಸುಟ್ಟುಹಾಕಲಾಯಿತು ಮತ್ತು ಹಲವಾರು ಸ್ಥಳಗಳಲ್ಲಿ ಪ್ರತಿಸ್ಪರ್ಧಿಗಳ ಮೇಲೆ ಬಾಂಬ್ ಎಸೆಯಲಾಗಿದೆ. 19 ಜಿಲ್ಲೆಗಳ 696 ಬೂತ್ಗಳಲ್ಲಿ ಸೋಮವಾರ ಮರು ಮತದಾನ ನಡೆದಿದ್ದು, ಮತಪೆಟ್ಟಿಗೆ ವಂಚನೆ ಮತ್ತು ಹಿಂಸಾಚಾರದ ಆರೋಪದ ನಡುವೆ ಮತದಾನ ಅನೂರ್ಜಿತವಾಗಿದೆ.

ಮಂಗಳವಾರ ಮತ ಎಣಿಕೆ ಆರಂಭಗೊಂಡಿದ್ದು, ಆರಂಭಿಕ ವರದಿಗಳ ಪ್ರಕಾರ ಟಿಎಂಸಿ ಸಾವಿರಾರು ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, ಮತ ಎಣಿಕೆಯ ದಿನವೂ ಆಡಳಿತಾರೂಢ ಟಿಎಂಸಿಯ "ದಾದಗಿರಿ ರಾಜಕಾರಣ" ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯ ಮತ ಎಣಿಕೆ ಏಜೆಂಟರು ಮತ್ತು ಇತರ ವಿರೋಧ ಪಕ್ಷಗಳನ್ನು ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡದಂತೆ ತಡೆಯಲಾಗಿದೆ ಎಂದು ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಬಿತ್ ಪಾತ್ರಾ ಪ್ರತಿಪಾದಿಸಿದ್ದು, ಚುನಾವಣಾ ಹಿಂಸಾಚಾರವನ್ನು ಖಂಡಿಸಿದ್ದಾರೆ.
"ಮಾಧ್ಯಮ ವರದಿಗಳ ಪ್ರಕಾರ, ಪಂಚಾಯತ್ ಚುನಾವಣೆ ಹಿಂಸಾಚಾರದ ಸಂದರ್ಭದಲ್ಲಿ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ. ಬಾಂಬ್ ದಾಳಿ, ಬೋಗಸ್ ಮತದಾನ ಮತ್ತು ಮತ ತಿರುಚುವುದು ಮಾಧ್ಯಮ ವರದಿಗಳಲ್ಲಿ ಹೆಚ್ಚು ಬಳಕೆಯಾಗಿರುವ ಪದಗಳಾಗಿವೆ. ಇದು 'ನಿರ್ಮಮತಾ' (ನಿರ್ದಯತೆ) ಮತ್ತು ಪ್ರೀತಿಯಲ್ಲ" ಎಂದು ಸಂಬುತ್ ಪತ್ರಾ ಆರೋಪಿಸಿದ್ದಾರೆ.

ಮುಂದುವರಿದು, ಇವುಗಳು ರಾಜ್ಯ ಪ್ರಾಯೋಜಿತ ಸಾಂಸ್ಥಿಕ ಕೊಲೆಗಳು. 'ಮಾ, ಮಣ್ಣು, ಮನುಷ್ಯ' ಎಂದು ಮಾತನಾಡುತ್ತಿದ್ದ ನಿರ್ಮಮ್ ಬಂಡೋಪಾಧ್ಯಾಯ (ನಿರ್ದಯ ಮಮತಾ ಬ್ಯಾನರ್ಜಿ) ಮೂಕ ಪ್ರೇಕ್ಷಕರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ಹಿಂಸಾಚಾರ ಮತ್ತು ಪ್ರಜಾಪ್ರಭುತ್ವದ ಹತ್ಯೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್, ಎಡಪಕ್ಷಗಳು ಮತ್ತು ಇತರ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ವಿಷಯದಲ್ಲಿ ಅವರೆಲ್ಲಾ ಮೌನವಾಗಿದ್ದಾರೆ ಎಂದು ಆರೋಪಿಸಿದ್ದಾರೆ. "ಲಾಲು ಯಾದವ್, ನಿತೀಶ್ ಕುಮಾರ್, ರಾಹುಲ್ ಗಾಂಧಿ ಮತ್ತು 'ಮಹಾ ಘಟ ಬಂಧನ್'ನ ಇತರ ನಾಯಕರು ಎಲ್ಲಿದ್ದಾರೆ..? ಇದುವರೆಗೆ ಅವರಿಂದ ಒಂದು ಮಾತೂ ಇಲ್ಲ" ಎಂದು ಬಿಜೆಪಿ ನಾಯಕ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ನ ಉನ್ನತ ನಾಯಕತ್ವ ಮತ್ತು "ಮೊಹಬ್ಬತ್ ಕಿ ದುಕಾನ್" (ಪ್ರೀತಿಯ ಅಂಗಡಿ) ತೆರೆಯುತ್ತಿರುವ ರಾಹುಲ್ ಗಾಂಧಿ, ಬಂಗಾಳದಲ್ಲಿ ಪಂಚಾಯತ್ ಚುನಾವಣಾ ಹಿಂಸಾಚಾರದ ಬಗ್ಗೆ ಮೌನವಾಗಿದ್ದಾರೆ. ಪಕ್ಷದ ಸ್ಥಳೀಯ ನಾಯಕರು ತಮ್ಮ ಕಾರ್ಯಕರ್ತರು ಕೊಲ್ಲಲ್ಪಟ್ಟರು ಎಂದು ಹೇಳಿಕೊಂಡರೂ ಸಹ ಎಂದು ಸಂಬಿತ್ ಪಾತ್ರಾ ಆರೋಪಿಸಿದ್ದಾರೆ.
"ರಾಹುಲ್ ಗಾಂಧಿ ತಮ್ಮ 'ಮೊಹಬ್ಬತ್ ಕಿ ದುಕಾನ್' ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ ಅವರ ಮಹತ್ವಾಕಾಂಕ್ಷೆಯ ಮೆಗಾ ಮಾಲ್ ತೆರೆದಿದೆ. ಅವರು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರದ ಬಗ್ಗೆ ಮೌನವಾಗಿದ್ದಾರೆ. ಅವರು ಮೋಸದಿಂದ ದೇಶವನ್ನು ಆಳಲು ಬಯಸುತ್ತಾರೆ" ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ.
ಕೇಂದ್ರ ಪಡೆಗಳ ನಿಯೋಜನೆಯೊಂದಿಗೆ ಪಶ್ಚಿಮ ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಕರೆ ನೀಡಿತ್ತು ಎಂದು ಸಂಬಿತ್ ಪಾತ್ರಾ ಹೇಳಿದ್ದಾರೆ. ಆದರೆ ರಾಜ್ಯ ಸರ್ಕಾರವು ಕೇಂದ್ರ ಪಡೆಗಳನ್ನು ಸರಿಯಾಗಿ ನಿಯೋಜಿಸಲಿಲ್ಲ, "ಸೂಕ್ಷ್ಮ ಮತಗಟ್ಟೆಗಳ ಡೇಟಾವನ್ನು ಕೇಂದ್ರ ಪಡೆಗಳೊಂದಿಗೆ ಹಂಚಿಕೊಂಡಿಲ್ಲ" ಎಂದು ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ರಾಜ್ಯದಲ್ಲಿ ಪಂಚಾಯತ್ ಚುನಾವಣೆಯ ಹಿಂಸಾಚಾರದಿಂದಾಗಿ ಪಶ್ಚಿಮ ಬಂಗಾಳದ 100 ಕ್ಕೂ ಹೆಚ್ಚು ಜನರು ತಮ್ಮ ರಾಜ್ಯದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಿದ್ದಾರೆ. "ನಿನ್ನೆ, ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರದಿಂದ ತಮ್ಮ ಪ್ರಾಣಕ್ಕೆ ಹೆದರಿದ 133 ವ್ಯಕ್ತಿಗಳು ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ಆಶ್ರಯ ಪಡೆದಿದ್ದಾರೆ. ನಾವು ಅವರಿಗೆ ಪರಿಹಾರ ಶಿಬಿರದಲ್ಲಿ ಆಶ್ರಯ ನೀಡಿದ್ದೇವೆ. ಜೊತೆಗೆ ಆಹಾರ ಮತ್ತು ವೈದ್ಯಕೀಯ ಸಹಾಯವನ್ನು ಒದಗಿಸಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications